ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯೊಳಗಿನ ಹೋರ್ಡಿಂಗ್ಸ್ ಗಳಲ್ಲಿ (Hoardings) ಕನ್ನಡವನ್ನು (Kannada) ಸಂಪೂರ್ಣ ನಿರ್ಲಕ್ಷಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕರವೇ ಪ್ರವೀಣ್ ಕುಮಾರ್ ಶೆಟ್ಟಿ (Karave Praveen Kumar Shetty) ಬಣದ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸಿ, ಪೌರಾಯುಕ್ತರಿಗೆ ದೂರು ನೀಡಿದ್ದಾರೆ.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ (Rajaghatta Ravi) ಅವರ ನೇತೃತ್ವದಲ್ಲಿ ಪೌರಾಯುಕ್ತ ಕಾರ್ತೀಕ್ ಈಶ್ವರ್ ಅವರಿಗೆ ಮನವಿ ಪತ್ರ ನೀಡಲಾಗಿದೆ.
ಈ ಕುರಿತು ಮಾತನಾಡಿದ ಮುಖಂಡರು ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಹೋರ್ಡಿಂಗಗಳಿದ್ದು ಅದರಲ್ಲಿ ಪ್ರದರ್ಶಿಸುವ ಜಾಹೀರಾತುಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಫಲಕದ ತುಂಬಾ ಆಂಗ್ಲ ಭಾಷೆ ರಾರಾಜಿಸುತ್ತಿರುತ್ತದೆ. ಹಾಗೂ ಕೆಲವು ಫಲಕಗಳಲ್ಲಿ ಅಶ್ಲೀಲ ಚಿತ್ರಗಳು ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ತೀವ್ರ ಮುಜುಗರ ತರಿಸುವಂತಿರುತ್ತವೆ. ಅಲ್ಲಿ ಮಹಿಳೆಯರು ಓಡಾಡಲು ಕೂಡ ಮುಜುಗರವಾಗುತ್ತದೆ.
ಆದ ಕಾರಣ ನಗರಸಭೆ ಈ ಕೂಡಲೇ ಸಂಬಂಧಪಟ್ಟ ಫಲಕಗಳ ಮಾಲೀಕರಿಗೆ ತುರ್ತು ಸಭೆ ನಡೆಸಿ, ಅವರು ಕಡ್ಡಾಯವಾಗಿ ಕನ್ನಡ ಭಾಷೆ ಹಾಗೂ ಅಶ್ಲೀಲವೆನಿಸುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಯಮ ಪಾಲಿಸಲು ಆದೇಶಿಸಬೇಕು.
ಅಲ್ಲದೆ ಈಗಾಗಲೇ ಕನ್ನಡ ಬಾಷೆ ನಿರ್ಲಕ್ಷಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು, ಇಲ್ಲವಾದಲ್ಲಿ ಕರವೇ ನೇರ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುತ್ತದೆ. ನಂತರದ ಯಾವುದೇ ಪರಿಣಾಮಗಳಿಗೂ ನಗರಸಭೆಯೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮುಖಂಡರಾದ ಶ್ರೀ ನಗರ ಮನು, ವಕೀಲರಾದ ಮುನಿರಾಜ್, ಸುಬ್ರಮಣಿ, ಕೋಡಳ್ಳಿ ಬಾಬು, ಮೋಹನ್, ಮಂಜುನಾಥ್, ಡಿ.ಕ್ರಾಸ್ ಬಾಲು,
ಹಮೀದ್, ಆದಿಲ್ ಇದ್ದರು.