ಧಾರವಾಡ: ಗಣೇಶ ಹಬ್ಬ ಸಮೀಪ ಇರುವಂತೆ ಪಿಒಪಿ (POP) ಗಣೇಶ ಮೂರ್ತಿ ಮಾರಾಟ ಮಾಡುವವರಿಗೆ ವಿವಿಧ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದಾರೆ.
ಅಂತೆಯೇ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ರಚಿಸಿದ ಕಾರ್ಯ ಪಡೆಯ ಸದಸ್ಯರಾದ ಪರಿಸರ ಇಲಾಖೆಯ ಪ್ರಾದೇಶಿಕ ಅಧಿಕಾರಿ ಜಗದೀಶ್ ಐ.ಎಚ್. ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ ಅವರ ನೇತೃತ್ವದಲ್ಲಿ ಇಂದು (ಆ.22) ಮಧ್ಯಾಹ್ನ ಹೆಬ್ಬಳ್ಳಿ ಗ್ರಾಮದ ಶಂಕರ ಕಂಬಾರ, ಬಸವರಾಜ ಗೂಳಪ್ಪ ಕಮ್ಮಾರ, ಬಸವರಾಜ ವಿರೂಪಾಕ್ಷಪ್ಪ ಕಮ್ಮಾರ, ಕರಿಯಪ್ಪ ಕಮ್ಮಾರ ಅವರ ಮನೆ ಮತ್ತು ದಾಸ್ತಾನದಲ್ಲಿರುವ 91 ಪಿಓಪಿ (POP) ಗಣಪತಿಗಳನ್ನು ತಪಾಸಣೆ ಮಾಡಿ, ವಶಪಡಿಸಿಕೊಂಡ ವಿಗ್ರಹಗಳನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಮ್ಮಿನಭಾವಿ ವಲಯದ ಕಂದಾಯ ನಿರೀಕ್ಷಕ ಸಂಪತಕುಮಾರ ಒಡೆಯರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ರಾಮಚಂದ್ರ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮದನಬಾವಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಿ.ಎಸ್ ಬಡಿಗೇರ ಮತ್ತು ಪೊಲೀಸ್ ಇಲಾಖೆಯ ಇ.ಎಸ್.ಐ ಮಂಜುನಾಥ ತಡಹಾಳ ಹಾಗೂ ತಂಡದವರಿದ್ದರು.