ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): 108 ಆಂಬ್ಯುಲೆನ್ಸ್ (108 Ambulance) ಸೇವೆ ಭಾರತದ ತುರ್ತು ವೈದ್ಯಕೀಯ ಸೇವಾ ಸಂಖ್ಯೆಯಾಗಿದ್ದು, ಅಪಘಾತಗಳು, ವೈದ್ಯಕೀಯ ಬಿಕ್ಕಟ್ಟುಗಳು ಮತ್ತು ಇತರ ವಿಪತ್ತು ಸಂದರ್ಭಗಳಲ್ಲಿ ಉಚಿತ ಸಹಾಯ ನೀಡುತ್ತದೆ.
ಈ ಸೇವೆಯು ಸಾಮಾನ್ಯವಾಗಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತದೆ ಮತ್ತು ಕರೆ ಮಾಡುವವರನ್ನು ತರಬೇತಿ ಪಡೆದ ವೃತ್ತಿಪರರಿಗೆ ಸಂಪರ್ಕಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ನಲ್ಲಿ ಅಗತ್ಯವಿರುವ ವೈದ್ಯಕೀಯ ನೆರವನ್ನು ಒದಗಿಸುವುದು ಎಂಬುದು ಈ ಯೋಜನೆಯ ಪರಿಚಯ.
ಶ್ರೀರಾಮುಲು ಜನಪರ ಕಾಳಜಿ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರು ಕರ್ನಾಟಕದಲ್ಲಿ ನ.01.2008 ರಲ್ಲಿ ಮೊಟ್ಟಮೊದಲ ಬಾರಿಗೆ 108 ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ಯೋಜನೆ ಅಪಘಾತ ಸೇರಿದಂತೆ ತುರ್ತು ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗಿ, ಜನಮನ್ನಣೆ ಪಡೆಯಿತು.
ಸರ್ಕಾರದ ವಶಕ್ಕೆ
ಇದೇ ವರ್ಷ ಅಕ್ಟೋಬರ್ 15ರಂದು 108 ಆಂಬ್ಯುಲೆನ್ಸ್ ಸೇವೆ ಸೇವೆಯನ್ನು ಖಾಸಗಿಯಿಂದ ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ, 108 ಆ್ಯಂಬುಲೆನ್ಸ್ ಸೇವೆಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಂದ ಕರ್ನಾಟಕ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದುವರೆಗೆ ಖಾಸಗಿ ಸಂಸ್ಥೆಗಳ ನಿರ್ವಹಣೆಯಲ್ಲಿದ್ದ ಈ ಸೇವೆ ಈಗ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದ್ದು, ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಮ್ಗಳನ್ನು ತೆರೆಯಲಾಗುತ್ತಿದೆ.
ಸಚಿವ ದಿನೇಶ್ ಗುಂಡೂರಾವ್ ಅವರ ಪ್ರಕಾರ, ಜಿವಿಕೆ ಅಥವಾ ಯಾವುದೇ ಖಾಸಗಿ ಸಂಸ್ಥೆಗೆ ಟೆಂಡರ್ ನೀಡಲಾಗುವುದಿಲ್ಲ.
ಜಿವಿಕೆ ಸಂಸ್ಥೆಯಿಂದ ಇನ್ನೂ ಸಂಪೂರ್ಣ ಸರ್ಕಾರದ ಕಂಟ್ರೋಲ್ಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ದಿನೇಶ್ ಗುಂಡುರಾವ್, ಇನ್ನು ಎರಡು ತಿಂಗಳೊಳಗೆ ಎಲ್ಲಾ ನಿಯಂತ್ರಣ ಸರ್ಕಾರ ತೆಗೆದುಕೊಳ್ಳುತ್ತೇವೆ ಎಂದಿದ್ದರು.
ಇದರನ್ವಯ ಕರ್ನಾಟಕದ 108 ಆಂಬ್ಯುಲೆನ್ಸ್ ಸೇವೆಯ ನಿರ್ವಹಣೆಯಲ್ಲಿ ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ತೊಡೆದುಹಾಕಲು ಸರ್ಕಾರ ನೇರ ನಿಯಂತ್ರಣ ತೆಗೆದುಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇತರ ಜಿಲ್ಲೆಗಳಿಗೂ ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ.
ಮೂಲಗಳ ಮಾಹಿತಿ ಅನ್ವಯ ಸರ್ಕಾರವೇನೋ 108 ಆಂಬ್ಯುಲೆನ್ಸ್ ಸೇವೆ ಯೋಜನೆಯನ್ನು ವಶಕ್ಕೆ ಪಡೆದು ಖಾಸಗಿಯಿಂದು ಉಂಟಾಗುತ್ತಿದ್ದ ಸಮಸ್ಯೆ ತಪ್ಪಿಸಲು ಮುಂದಾಗಿದೆ. ಆದರೆ, ಆದರೆ ಈ ಹೇಳೆಕೆಯಿಂದಲೇ 108 ಆಂಬ್ಯುಲೆನ್ಸ್ ಸೇವೆ ದಾರಿ ತಪ್ಪಿ, ತುರ್ತು ಸಂಧರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ ದೊರಕದೆ ಅನೇಕ ಸಾವು ನೋವುಗಳು ಸಂಭವಿಸುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ಸಮಸ್ಯೆಗೆ ಕಾರಣವೇನು..?
108 ಆಂಬ್ಯುಲೆನ್ಸ್ ಸೇವೆ ವ್ಯವಸ್ಥೆಯು ಕೆಲವು ಪ್ರದೇಶಗಳಲ್ಲಿ ಅಸ್ತವ್ಯಸ್ತಗೊಂಡಿದೆ, ಇದಕ್ಕೆ ಮುಖ್ಯ ಕಾರಣಗಳು ತಾಂತ್ರಿಕ ಸಮಸ್ಯೆಗಳು, ಸಿಬ್ಬಂದಿ ಕೊರತೆ, ಮತ್ತು ಖಾಸಗಿ ನಿರ್ವಹಣೆಯಿಂದ ಸರ್ಕಾರಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆಯಲ್ಲಿನ ಸಮಸ್ಯೆಗಳು. ಹಾವೇರಿ ಮತ್ತು ಇತರ ಜಿಲ್ಲೆಗಳಲ್ಲಿ ಇದು ರೋಗಿಗಳಿಗೆ ಸಮಸ್ಯೆಯನ್ನು ಉಂಟುಮಾಡಿದೆ, ಏಕೆಂದರೆ ಆಂಬ್ಯುಲೆನ್ಸ್ ಸಿಗದೇ ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಸಂಸ್ಥೆ ನಡೆಸುತ್ತಿರುವ ಯೋಜನೆ ಸರ್ಕಾರ ಹಿಂಪಡೆಯಲು ಮುಂದಾಗಿದೆ. ಆದರೆ ಇನ್ನೂ ಪಡೆದಿಲ್ಲ ಇದರಿಂದಾಗಿ ಖಾಸಗಿ ಸಂಸ್ಥೆಗೆ ಯೋಜನೆ ಕುರಿತು ತಾತ್ಸಾರ ಮನೋಭಾವ ಬಂದಿದೆ ಎಂಬ ಆರೋಪ ವ್ಯಾಪಕವಾಗಿದೆ.
ಸರ್ಕಾರ ಸಿಬ್ಬಂದಿಗಳನ್ನು ನೇಮಿಸದೇ ಇರುವುದು ಗಮನಿಸದೆ ಯೋಜನೆಯನ್ನು ಎರಡು ಪಾಳಿಯಿಂದ ಏಕಾಏಕಿ ಮೂರು ಪಾಳ ಮಾಡಿದೆ. ಮೂಲಗಳ ಮಾಹಿತಿ ಅನ್ವಯ ಕಳೆದ ಒಂದು ವರ್ಷದಿಂದ ಮೂರು ಪಾಳಿಯಲ್ಲಿ ಸೇವೆ ನೀಡಲು ಸಿಬ್ಬಂದಿಗಳು ಇಲ್ಲವಾಗಿದ್ದು, ಅನೇಕ ಅಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುತ್ತಿದೆ.
ದೊಡ್ಡಬೆಳವಂಗಲ ಆಂಬ್ಯುಲೆನ್ಸ್ ನಾಪತ್ತೆ..!?
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಸಬ, ದೊಡ್ಡಬೆಳವಂಗಲ, ಮಧುರೆ, ಸಾಸಲು ಹಾಗೂ ತೂಬಗೆರೆಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಸೇರಿ 5 ವಾಹನಗಳು 108 ಆಂಬ್ಯುಲೆನ್ಸ್ ಸೇವೆ ನೀಡಬೇಕಿದೆ.
ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು 3 ಮಾತ್ರ. ವಿಪರ್ಯಾಸವೆಂದರೆ ಈ ಮೂರು ಕೂಡ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಆಸ್ಪತ್ರೆಗೆ ಓಡಾಡಲು ಸೀಮಿತವಾಗಿವೇ ಹೊರತು ತುರ್ತು ಸಂದರ್ಭದಲ್ಲಿ ಜನರಿಗೆ ಸೌಲಭ್ಯ ದೊರಕದಂದಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.
ಇದರಲ್ಲಿ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ 108 ಆಂಬ್ಯುಲೆನ್ಸ್ ಕಾಣೆಯಾಗಿ ವರ್ಷಗಳು ಕಳೆದಿವೆ. ಇನ್ನೂ ಘಾಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕಿದ್ದ ಆಂಬ್ಯುಲೆನ್ಸ್ ಗ್ಯಾರೇಜ್ ಸೇರಿದೆ.
ಘಾಟಿ ಜಾತ್ರೆ
ಇದರ ನಡುವೆ ಆಷಾಡದಲ್ಲಿ ಅಧಿಕಮಾಸ ಎಂಬಂತೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ ದನಗಳ ಜಾತ್ರೆ ಇಂದಿನಿಂದ ಆರಂಭವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ ದೊರಕದಿದ್ದರೆ ಖಾಸಗಿ ಆಂಬ್ಯುಲೆನ್ಸ್ ಗಳಿಗೆ ಸಾವಿರಾರು ಹಣ ಖರ್ಚು ಮಾಡಬೇಕಾದ ಅನಿರ್ವಾರ್ಯತೆ ರೈತರಿಗೆ, ಭಕ್ತರಿಗೆ ತಂದೊಡ್ಡಿದೆ.
ಒಟ್ಟಾರೆ ಸರ್ಕಾರ ಖಾಸಗಿಯಿಂದ ಸರ್ಕಾರದ ನಿಯಂತ್ರಣಕ್ಕೆ 108 ಆಂಬ್ಯುಲೆನ್ಸ್ ಸೇವೆ ಪಡೆಯುವ ತೀರ್ಮಾನ ಉತ್ತಮವಾದರೂ, ಈ ಕಾರ್ಯದಲ್ಲಿ ವಿಳಂಬ ಅಮಾಯಕ ಜನರ ಸಾವು, ನೋವಿಗೆ ಕಾರಣವಾಗುತ್ತಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.