
ದೊಡ್ಡಬಳ್ಳಾಪುರ; ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ (MSV Public School) 18ನೇ ಶಾಲಾ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಭಾರತೀಯ ರಕ್ಷಣಾ ಪಡೆಯ ಹೆಗ್ಗುರುತಾದ ಆಪರೇಶನ್ ಸಿಂಧೂರ್ ನ ಗೌರವ ಸೂಚಕವಾಗಿ ಈ ಬಾರಿಯ ವಾರ್ಷಿಕೋತ್ಸವವನ್ನು ಸಿಂಧೂರ್ ಎಂದು ಹೆಸರಿಡಲಾಗಿತ್ತು.

ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ವಿಶ್ವನಾಥ ರಾವ್ ಬೀಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಠ್ಯದ ಜೊತೆಗೆ ಶಿಕ್ಷಣದಲ್ಲಿ ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ. ಇವು ಕೇವಲ ಓದಷ್ಟೇ ಅಲ್ಲದೆ, ನಾಯಕತ್ವ, ಸಮಯ ನಿರ್ವಹಣೆ, ಸಾಮಾಜಿಕ, ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸುತ್ತವೆ, ಶೈಕ್ಷಣಿಕ ಅಂಕಗಳನ್ನು ಸುಧಾರಿಸುತ್ತವೆ, ಮತ್ತು ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸವುಳ್ಳ, ಆರೋಗ್ಯಕರ ವ್ಯಕ್ತಿಗಳಾಗಿ ರೂಪಿಸುತ್ತವೆ, ಶಿಕ್ಷಣದ ಉದ್ದೇಶವನ್ನು ಪಠ್ಯದ ಗಡಿಗಳನ್ನು ಮೀರಿ ವಿಸ್ತರಿಸುತ್ತವೆ.

ಮಕ್ಕಳಲ್ಲಿರುವ ಹವ್ಯಾಸವನ್ನು ಗುರುತಿಸಿ ಅವರಿಗೆ ಬೆಂಬಲವಾಗಿ ನಿಂತಲ್ಲಿ ಮಕ್ಕಳ ಸರ್ವತೋಮುಖ ಏಳಿಗೆಗೆ ಕೈಜೋಡಿಸಬೇಕೆಂದು ಪೋಷಕರಿಗೆ ತಿಳಿಸಿದರು.

ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುವಂತೆ, ನಮ್ಮ ಕ್ರೀಡಾ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಮನದಟ್ಟು ಮಾಡಿಸಿದರು.
ಶೈಕ್ಷಣಿಕ ಪ್ರಗತಿಯ ಜೊತೆಗೆ ಕ್ರೀಡೆಗೆ ಬೆಂಬಲ ನೀಡುತ್ತಾ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿರುವ ಎಂಎಸ್ವಿ ಶಾಲೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಇಂದು ನಾವು ಜಾಗತೀಕರಣ ಯುಗದಲ್ಲಿ ಜೀವಿಸುತ್ತಿದ್ದೇವೆ. ವಿಜ್ಞಾನ ತಂತ್ರಜ್ಞಾನ ದಲ್ಲಿ ಆದ ಹೊಸ ಹೊಸ ಆವಿಷ್ಕಾರಗಳಿಂದಾಗಿ ಇವತ್ತು ಅಂಗೈಯಲ್ಲಿ ಪ್ರಪಂಚ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಕು, ಬೇಡದ್ದವೆಲ್ಲ ಮೊಬೈಲ್ ನಲ್ಲಿಯೇ ನೋಡಬಹುದು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇವಲ ಜ್ಞಾನ ಸಂಪಾದನೆಗಾಗಿ ಮಾತ್ರ ಮೊಬೈಲ್ ಅನ್ನು ಬಳಸಬೇಕು ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಕಳೆದ ವರ್ಷದ ಸಿಬಿಎಸ್ಇ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 19 ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲೇ ಅತಿ ಹೆಚ್ಚು ಅಂಕಗಳಿಸಿದ ಗಿರೀಶ್ ಚಂದ್ರ ಡಿ,ಕೆ. ತನ್ನ ಅನುಭವಗಳನ್ನು ಹಂಚಿಕೊಂಡನು.

ಟೇಕ್ವಾಂಡೋ ಹಾಗೂ ಯೋಗಾಸನದಲ್ಲಿ ಸಾಧನೆಗೈದ ಐದು ಮಕ್ಕಳನ್ನೂ ಸಹ ಸನ್ಮಾನಿಸಲಾಯಿತು.
ಮಕ್ಕಳು ಆಕರ್ಷಕವಾದ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ಅತಿಥಿಗಳಿಂದ ಪಡೆದು ಸಂಭ್ರಮಿಸಿದರು.
2025-26ನೇ ಸಾಲಿನ ಶಾಲೆಯ ಕಾರ್ಯವೈಖರಿಗೆ ಹಾಗೂ ಶಾಲಾ ಚಟುವಟಿಕೆಗಳು ಮತ್ತು ಸಾಧನೆಗಳ ಕೈಪಿಡಿ “ವಾರ್ಷಿಕ ಶಾಲಾ ವರದಿ” ಯನ್ನು ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಅವರು ಮಂಡಿಸಿದರು.

ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶಿಸ್ತು, ಸಂಸ್ಕಾರ ಕಲಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬಲ್ಲ ಉತ್ತಮ ಪ್ರಜೆಗಳ ನಿರ್ಮಾಣವೇ ನಮ್ಮ ಸಂಕಲ್ಪ. ಈ ನಿಟ್ಟಿನಲ್ಲಿ ನಾವು ಸದಾ ಅಚಲವಾಗಿ ಶ್ರಮಿಸುತ್ತೇವೆ. ಈ ನಿಟ್ಟಿನಲ್ಲಿ ಎಂದಿನಂತೆ ಪೋಷಕರ ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ ಎಂದು ಈ ವೇಳೆ ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ, ಜನಪದ, ಸಾಹಿತ್ಯ, ಸಿನಿಮಾ ಮೊದಲಾದಗಳಿಗೆ ಸಂಬಂಧಪಟ್ಟಂತೆ ಆಯೋಜಿಸಲಾಗಿದ್ದ ಆಕರ್ಷಕವಾದ ನೃತ್ಯ ಕಾರ್ಯಕ್ರಮ ಸಂಜೆಯನ್ನು ಇನ್ನಷ್ಟು ರಸಸಂಜೆಗೊಳಿಸಿತು.
ಸತ್ಯಯುಗ, ತ್ರೇತಾಯುಗ, ದ್ವಾಪರ ಯುಗ ಹಾಗೂ ಕಲಿಯುಗಗಳನ್ನು ಪ್ರತಿನಿಧಿಸುವ ಸ್ವಾಗತನೃತ್ಯ “ಕಾಲಚಕ್ರ” ಕಾರ್ಯಕ್ರಮದ ಕಲಶವಿಟ್ಟಂತೆ ಇತ್ತು.

ಚೈನೀಸ್ ವಿಶೇಷ ನೃತ್ಯ, ಮಹಿಷಾಸುರ ಮರ್ದಿನಿ (ಅಯ್ಯಪ್ಪ ಸ್ವಾಮಿ), ಆಪರೇಷನ್ ಸಿಂಧೂರ್, ಪರಿಸರ ಸಂರಕ್ಷಣೆಯ ಕಾಳಜಿ ಯ ಕಾಂತಾರ, ಕ್ರಿಸ್ ಮಸ್, ಜಾನಪದ ಸಂಗಮ, ರೆಟ್ರೋ ರಾಗ, ನೇಪಾಳಿ ನೃತ್ಯ, ದಕ್ಷಿಣ ಭಾರತದ ಭಾಷಾ ಸಂಗಮ ಹೀಗೆ ವೈವಿದ್ಯತೆಯಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪೋಷಕರನ್ನು ರಂಜಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೋಷಕರು ಸಹ ವೇದಿಕೆಯ ಮೇಲೆ ತಮ್ಮ ತಮ್ಮ ಮಕ್ಕಳ ಪ್ರತಿಭೆಯನ್ನು ನೋಡಿ ಸಂತಸಪಟ್ಟರು. ಸುಮಾರು – 5000 ಸಾವಿರ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷೀಭೂತರಾದರು.

ಶಾಲಾ ಅಧ್ಯಕ್ಷರಾದ ಎ ಸುಬ್ರಮಣ್ಯ, ಕಾರ್ಯದರ್ಶಿಗಳಾದ ಮಂಜುಳಾ ಸುಬ್ರಹ್ಮಣ್ಯ, ಉಪಾಧ್ಯಕ್ಷರಾದ ಸ್ವರೂಪ್, ಟ್ರಸ್ಟಿಗಳಾದ ಶ್ರೀಮತಿ ನಯನ ಸ್ವರೂಪ್, ಡಾ|| ಮೃದುಲಾ, ಶಾಲಾ ಪ್ರಾಂಶುಪಾಲರಾದ ರೆಮ್ಯ ಬಿ.ವಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
