ದೊಡ್ಡಬಳ್ಳಾಪುರ; ಖಾಸಗಿ ಶಾಲೆಗಳಲ್ಲಿ ಸರ್ಕಾರದ ಮಾನದಂಡವನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ಪಡೆಯುತ್ತಿವೆ ಎಂದು ಕನ್ನಡ ಪಕ್ಷ (Kannada Party) ಆರೋಪಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್, ಪ್ರಾಥಮಿಕ, ಪ್ರಾಥಮಿಕ ಪೂರ್ವ ಮತ್ತು ಪ್ರೌಢಶಿಕ್ಷಣ ಶಾಲೆಗಳಿಗೆ ಸರ್ಕಾರಿ ಮಾನದಂಡದಲ್ಲಿ ಶುಲ್ಕ ನಿಗದಿ ಪಡಿಸಲು ಈ ಕೂಡಲೇ ಆದೇಶ ಹೊರಡಿಸುವಂತೆ ಉಪನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಲಾಗಿದೆ.
2025-26ನೇ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ, ಸರ್ಕಾರದ ಮಾನದಂಡದ ಪ್ರಕಾರ ಶುಲ್ಕ ಪಡೆದು ಕೊಳ್ಳದೆ ತಮಗಿಷ್ಟ ಬಂದಂತೆ ವಾರ್ಷಿಕ ಶುಲ್ಕ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೂ ವಸೂಲಿ ಮಾಡಿ ಶಾಲಾ ಶಿಕ್ಷಣವನ್ನು ಧಂಧೆ ಮಾಡಿಕೊಂಡಿದ್ದಾರೆ. ಇದಲ್ಲದೆ ಪುಸ್ತಕಗಳಿಗೆ ಸಮವಸ್ತ್ರಕ್ಕೆಂದು ಇಂತಿಷ್ಟು ಹಣವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಇಲ್ಲ, ಏಕೆಂದರೆ ಅವರೆ ಶಾಲೆಗಳಲ್ಲಿ ಪಾಠ ಮಾಡದೆ ಹಾಜರಾತಿ ಹಾಕಿ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ ಅವರು, ಸರ್ಕಾರಿ ಅಧಿಕಾರಿಗಳು, ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ.
ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವ್ಯಾಪಾರಕ್ಕೆ ಇಳಿದಿದ್ದಾರೆ ಹಾಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ ಅಂಜನೇಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ.
ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ, ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬುದು ಅವರ ಆಸೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳು, ಆಹಾರಪದಾರ್ಥಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಹಾಗಾಗಿ ತಳ ಸಮುದಾಯಗಳ ಆರ್ಥಿಕ ಮಟ್ಟ ದಿನೆ ದಿನೆ ಕುಸಿಯುತ್ತಿದ್ದು ದುಬಾರಿ ಬೆಲೆಗಳನ್ನು ತೆತ್ತು ಜೀವನ ಸಾಗಿಸುವುದೇ ಕಷ್ಟವಾಗಿದೆ.
ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಸಾಲ ಸೋಲ ಮಾಡಿ ತಮ್ಮಲ್ಲಿರುವ ಚೂರು ಪಾರು ಒಡವೆಗಳನ್ನು ಅಡವಿಟ್ಟು ಶಾಲೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಏಕೆಂದರೆ ಇಂದು ಯಾವುದೇ ಖಾಸಗಿ ಶಾಲೆಗಳನ್ನು ತೆಗೆದು ಕೊಂಡರು ಸರ್ಕಾರಿ ಮಾನದಂಡದಲ್ಲಿ ಶುಲ್ಕ ಪಡೆದು ಕೊಳ್ಳದೆ ಎಲ್ಲವನ್ನೂ ಗಾಳಿಗೆ ತೂರಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
ಪೋಷಕರು ಶುಲ್ಕ ಕಟ್ಟಲು 2-3 ದಿನ ಅಥವಾ ಒಂದು ವಾರ ತಡವಾದರೂ ಮಕ್ಕಳನ್ನು ಶಾಲೆಯ ಹೊರಗೆ ನಿಲ್ಲಿಸುವ ಮಟ್ಟಕ್ಕೆ ಖಾಸಗಿ ಶಾಲೆಗಳವರು ಇಳಿದಿರುವುದು ದೊಡ್ಡ ದುರಂತ, ಇದರಿಂದ ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪ ಸಂಖ್ಯಾತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ದುಡಿಮೆಯ ಅರ್ಧದಷ್ಟು ಪಾಲನ್ನು ದುಬಾರಿ ಶುಲ್ಕ ಪಾವತಿಸಿ ಶಿಕ್ಷಣ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಎಲ್ಲ ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನದಂಡ ಅಳವಡಿಸಿಕೊಂಡು ಶುಲ್ಕ ಪಡೆಯಲು ಆದೇಶ ಹೊರಡಿಸಬೇಕೆಂದು ಮತ್ತು ತಪ್ಪಿದಲ್ಲಿ ಅವರಿಗೆ ಶಾಲೆಗಳನ್ನು ನಡೆಸಲು ಕೊಟ್ಟಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಕನ್ನಡ ಪಕ್ಷ ಆಗ್ರಹಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಕಿ ಕನ್ನಡ ಪಕ್ಷದ
ತಾಲ್ಲುಕು ಅದ್ಯಕ್ಷ ಡಿ.ವೆಂಕಟೇಶ್, ತಾಲೂಕು ಗೌರವಾದ್ಯಕ್ಷ ರಂಗಣ್ಣ, ಉಪಾದ್ಯಕ್ಷ ಮಂಜುನಾಥ್, ಮುಖಂಡರಾದ ಪರಮೇಶ್ ವೆಂಕಟಪ್ಪ, ಅಂಜನ್ ನಾಯಕ್ ಮುಂತಾದವರು ಇದ್ದರು.