ವಿಜಯಪುರ: ಕರ್ನಾಟಕ ಬಿಜೆಪಿ (karnatka BJP) ಐಸಿಯುನಲ್ಲಿದ್ದು (ICU), ಸಂಘಟನೆ ಇಲ್ಲವಾಗಿದೆ. ಹೊರಾಟಕ್ಕೆ ಕರೆ ನೀಡಿದರೆ 10,15 ಜನ ಸೇರುವುದು ಇಲ್ಲ. ಈ ವಾಸ್ತವ ಅಮಿತ್ ಶಾ ( Amit Sha) ತಿಳಿಯಬೇಕು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagowda Patil Yatnal) ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಕರ್ನಾಟಕ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನಾಯಕತ್ವ ಸರಿ ಇಲ್ಲ. ಕುಮಾರಸ್ವಾಮಿ ಅವರ ಜೊತೆ ಹೊಂದಾಣಿಕೆ ಇಲ್ಲ. ಅವರು ಮಿತ್ರ ಪಕ್ಷ ಆದ್ರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇವರೇ ಏನ್ ಏನೋ ಮಾಡ್ತಾ ಇದ್ದಾರೆ.
ಗೃಹಸಚಿವ ಅಮಿತ್ ಶಾ ಎಲ್ಲವನ್ನೂ ತಿಳಿದುಕೊಳ್ಳಬೇಕು, ಯಡಿಯೂರಪ್ಪ ಕುಟುಂಬದ ಬಗ್ಗೆ, ಅವರ ಅಸ್ತಿತ್ವ ಇಲ್ಲ ಅನ್ನೋದು ತಿಳ್ಕೋಬೇಕು. ನಾನೂ ಯಡಿಯೂರಪ್ಪ ಜೀ ಯಡಿಯೂರಪ್ಪ ಜೀ ಅಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ.
ವಿಜಯೇಂದ್ರ ಬದಲಾವಣೆ ಮಾಡಬೇಕು, ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಮುಕ್ತವಾಗಬೇಕು ಎನ್ನುವುದು ಅನೇಕರ ಒತ್ತಾಯವಾಗಿದೆ. ನಮ್ಮ ಭೇಡಿಕೆ ಅದೇ ಆಗಿತ್ತು.
ಬಿಜಪಿ ಉದ್ದಾರ ಆಗಬೇಕು ಅಂದ್ರೆ ಭ್ರಷ್ಟಕುಟುಂಬದಿಂದ ಹೊರಬರಬೇಕು ವಿಜಯೇಂದ್ರ ಹಠಾವ್ ಮಾಡಬೇಕು ಎಂಬುದೇ ಎಲ್ಲರ ಆಗ್ರಹ.
ಮೊನ್ನೆ ನಡೆದ ಅವರ (ಬಿಎಸ್ ಯಡಿಯೂರಪ್ಪ) ಕುಟುಂಬದ ಮದುವೆಯಲ್ಲಿ ಡಿಕೆ ಶಿವಕುಮಾರ್ಗೂ, ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಅವರಿಗೆ ಎಷ್ಟು ಆತ್ಮೀಯತೆ ಇತ್ತು. ಕಾರ್ಯಕರ್ತರು ಹಿಂದುತ್ವ ಸಲುವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಿಕ್ಕಾಪಟ್ಟೆ ಕೇಸ್ ಬೀಳ್ತಾ ಇದೆ. ದಿನ ನಿತ್ಯ ಹಿಂದೂ ಕಾರ್ಯಕರ್ತರಿಗೆ ಪೊಲೀಸರು ನೋಟೀಸ್ ಕೊಡ್ತಾ ಇದ್ದಾರೆ.
ಇವರು ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಜೊತೆ ಸರಸ ಸಲ್ಲಾಪ ನಡುಸ್ತಾರೆ.. ಕಾರ್ಯಕರ್ತರಿಗೆ ಏನ್ ಸಂದೇಶ ಕೊಡ್ತಾರೆ..? ಇಷ್ಟು ಆತ್ಮೀಯತೆ ಇದ್ದರೆ ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ಸೇರಿಬಿಡಿ ಬಿಜೆಪಿ ಬಿಟ್ ಹೋಗಿ. ಹಿಂದೂ ಕಾರ್ಯಕರ್ತರ ಪ್ರಾಣ ತಗೋಬೇಡಿ ಎಂದು ವಾಗ್ದಾಳಿ ನಡೆಸಿದರು.