ಮಂಡ್ಯ: ಧರ್ಮಸ್ಥಳ ಪ್ರಕರಣದಲ್ಲಿ SIT ಸಮರ್ಥವಾಗಿ ತನಿಖೆ ನಡೆಸಿದ್ರೆ ಸ್ವಾಗತ ಕೋರುತ್ತಿದ್ದೆವು. ರಾಜ್ಯದ ಜನರಿಗೆ SIT ತನಿಖೆ ಮೇಲೆ ನಿರೀಕ್ಷೆಗಳಿಲ್ಲ. NIA ತನಿಖೆಗೆ ವಹಿಸಿದ್ರೆ ಷಡ್ಯಂತ್ರ ಬಯಲಾಗಲಿದೆ. ಷಡ್ಯಂತ್ರಕ್ಕೆ ವಿದೇಶಿ ಫಂಡಿಂಗ್ ಶಂಕೆಯಿದೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಗಂಭೀರ ಆರೋಪ ಮಾಡಿದರು
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು NIA ತನಿಖೆ ಅವಶ್ಯಕ. ಧರ್ಮಸ್ಥಳ ಪಾವಿತ್ರ್ಯತೆಯನ್ನ ಹಾಳು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಧರ್ಮಸ್ಥಳ ಸತ್ಯ ಯಾತ್ರೆಗೆ ಹಾಸನ ಕೇಂದ್ರ ಸ್ಥಾನ
ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದಾರೆ. ಅಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ.ನಂತರ ಧರ್ಮಸ್ಥಳ ನೇತ್ರಾವತಿಗೆ ತೆರಳಿ, ಅಲ್ಲಿ ಸ್ನಾನ ಮಾಡಿದ ಬಳಿಕ ಅಲ್ಲಿಂದ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು.
ಈ ಯಾತ್ರೆಯಲ್ಲಿ ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ನೈತಿಕ ಬೆಂಬಲ ವ್ಯಕ್ತಪಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೂಚನೆಯೆಂತೆ ಆ. 31 ರಂದು ಜೆಡಿಎಸ್ ವತಿಯಿಂದ ʼಧರ್ಮಸ್ಥಳ ಸತ್ಯಯಾತ್ರೆʼಯನ್ನು ಹಮ್ಮಿಕೊಂಡಿದ್ದೇವೆ.
ಯಾವುದೇ ರಾಜಕೀಯ ಬೆರೆಸದೆ ಧರ್ಮಸ್ಥಳ ಸತ್ಯ ಯಾತ್ರೆ ನಡೆಸುತ್ತಿದ್ದೇವೆ. ಧರ್ಮ ರಕ್ಷಣೆಯ ಉದ್ದೇಶದಿಂದ ಈ ಯಾತ್ರೆ ಆಯೋಜನೆ ಮಾಡಿದ್ದೇವೆ. ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆದಿವೆ. ಧರ್ಮಸ್ಥಳ ವಿರುದ್ಧ ನಡೆದ ಅಪಪ್ರಚಾರ ವಿರೋಧಿಸಿ ನಾಳೆ ಯಾತ್ರೆ ಕೈಗೊಂಡಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ನಾಳೆ (ಭಾನುವಾರ) ಜೆಡಿಎಸ್ ವತಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ನಡೆಯುತ್ತಿದೆ. ಧರ್ಮಸ್ಥಳ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ನಿಖಿಲ್ ಅವರು ತಿಳಿಸಿದರು.
800 ವರ್ಷ ಇತಿಹಾಸವಿರುವ ಶ್ರೀಕ್ಷೇತ್ರದ ವಿರುದ್ಧ ಪಿತೂರಿ ನಡೆಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಯಾವ ಆಧಾರದಲ್ಲಿ SIT ರಚನೆಗೆ ನಿರ್ಧಾರ ಮಾಡಿತು.? ಈ ಪ್ರಶ್ನೆ ಲಕ್ಷಾಂತರ ಭಕ್ತರಲ್ಲಿ ಮೂಡಿದೆ ಎಂದು ವಾಗ್ದಾಳಿ ನಡೆಸಿದರು.
ಒಬ್ಬರೋ, ಇಬ್ಬರೋ ದೂರು ಕೊಟ್ಟ ತಕ್ಷಣ SIT ರಚನೆ ಮಾಡಿದ್ದಾರೆ. ಚಿನ್ನಯ್ಯ ಎಂಬ ವ್ಯಕ್ತಿ ಬುರುಡೆ ತಂದು ಧರ್ಮಸ್ಥಳದಲ್ಲಿ ಮಾಸ್ ಮರ್ಡರ್ ನಡೆದಿದೆ ಎಂದು ಬಿಂಬಿಸಿದ್ರು. ಮೊದಲು FSL ವರದಿ ಪಡೆದ ಬಳಿಕ ವಿಷಯ ಗಂಭೀರತೆ ಸರ್ಕಾರ ಅರಿಯಬೇಕಿತ್ತು. ಸಿದ್ದರಾಮಯ್ಯ ಹೆಸರಲ್ಲಿ SIT ಆಗಿದೆ. ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು ಅವರು, ಡಿ.ಸಿ ತಮ್ಮಣ್ಣ ಅವರು, ಮಾಜಿ ಶಾಸಕರಾದ ಅನ್ನದಾನಿ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಅವರು, ಮನ್ ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರು ಅವರು, ಮಂಡ್ಯ ಜಿಲ್ಲಾಧ್ಯಕ್ಷರಾದ ಡಿ.ರಮೇಶ್ ಅವರು ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಜೈರಾಮ್, ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಕಂಸಾಗರ ರವಿ. ಮದ್ದೂರು ಬಿಜೆಪಿ ಮುಖಂಡರ ಸ್ವಾಮಿ ಅವರು ಉಪಸ್ಥಿತರಿದ್ದರು.
ಕುಮಾರಣ್ಣ ಆರೋಗ್ಯದ ಬಗ್ಗೆ ಆತಂಕ ಬೇಡ, ಸಂಪೂರ್ಣ ಆರೋಗ್ಯವಾಗಿದ್ದಾರೆ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಕುಮಾರಣ್ಣ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ನಿಜ. ಯಾರಿಗೂ ಆತಂಕ ಬೇಡ. ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಕುಮಾರಣ್ಣ ಆರೋಗ್ಯ ಸರಿ ಇಲ್ಲ ಎಂದು ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ. ಅವರ ತಂದೆ-ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ.