ಕೆ.ಎಂ. ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ನಿರುದ್ಯೋಗದ ಕುರಿತು ತೀವ್ರವಾದ ಪ್ರತಿಭಟನೆ, ಅಭಿವೃದ್ಧಿ ಕುಂಠಿತ ಮುಂತಾದ ರಾಜ್ಯದ ಗಂಭೀರ ಸಮಸ್ಯೆಗಳ ನಡುವೆ ಕಾಂಗ್ರೆಸ್ ಸರ್ಕಾರದ (Congress government) ಪವರ್ ಶೇರಿಂಗ್ ವಿಚಾರವಾಗಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಹೈಡ್ರಾಮಗಳ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿ (BJP )ವಿಫಲವಾಗಿದೆ ಎಂಬ ಮಾತುಗಳು ವ್ಯಾಪಕವಾಗಿದೆ.
ಮತ್ತೊಂದೆಡೆ ಜೆಡಿಎಸ್ ಮಾತ್ರ ರಾಜ್ಯ ಸರ್ಕಾರದ ವಿರುದ್ಧ, ಆಕ್ಟೀವ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ ಮತ್ತು ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರ ವೈಪಲ್ಯಗಳ ವಿರುದ್ಧ ಹರಿಹಾಯುತ್ತಲೇ ಬಂದಿದ್ದು, ಜನಮನ್ನಣೆಗಳಿಸುತ್ತಿದೆ.
ವಿದ್ಯಾರ್ಥಿಗಳಿಗೆ *ಲಾಠಿ ಏಟು* ! ಸಿಎಂ – ಡಿಸಿಎಂಗೆ *ನಾಟಿಕೋಳಿ ಬ್ರೇಕ್ ಫಾಸ್ಟು* !
— Janata Dal Secular (@JanataDal_S) December 2, 2025
ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸುಳ್ಳು ಭರವಸೆ ಕೊಟ್ಟಿದ್ದ @INCKarnataka , ಅದನ್ನು ಮರೆತು ಈಗ ಉದ್ಯೋಗ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. @siddaramaiah , @DKShivakumar ಅವರಿಗೆ *ಕುರ್ಚಿಗಾಗಿ… pic.twitter.com/pwav1SOAul
ಮುಂದುವರಿದು ಇಂದು ಬೆಂಗಳೂರಿನಲ್ಲಿ ನಡೆದ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬ್ರೇಕ್ಫಾಸ್ಟ್, ಡಿನ್ನರ್ ಮೀಟಿಂಗ್ ಮಾಡ್ತಾ ಹೋದರೆ ಜನರಿಗೆ ಯಾವ ಸಂದೇಶ ಕೊಡ್ತೀರಾ? ಬ್ರೇಕ್ ಫಾಸ್ಟ್ಗೆ ಇಡ್ಲಿ, ಮಧ್ಯಾಹ್ನ ನಾಟಿ ಕೋಳಿ, ಡಿನ್ನರ್ಗೆ ಬೆಳ್ಳುಳ್ಳಿ ಕಬಾಬ್ ಬರುತ್ತೆನೋ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಬಡವರಿಗೆ ಆರೋಗ್ಯ ಸೇವೆಗಳು ಸಿಗುತ್ತಿಲ್ಲ, ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿದ್ದು ಮಕ್ಕಳ ಶಿಕ್ಷಣಕ್ಕೆ ಆಪತ್ತು ಬಂದಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ. ಸರಿ ಇದ್ದರೆ ಆಡಳಿತದಲ್ಲಿ ತೋರಿಸಿ. ಅದು ಬಿಟ್ಟು ಈ ಬ್ರೇಕ್ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಯಾಕೆ ಮಾಡಬೇಕು. ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅರೋಗ್ಯ ಇಲಾಖೆಯಲ್ಲಿ ಗರ್ಭಿಣಿಯರು ಸೇರಿ ಮಕ್ಕಳು ಎಷ್ಟು ಬಲಿಯಾದರು. ಅರೋಗ್ಯ ಇಲಾಖೆ ರಾಜ್ಯದಲ್ಲಿ ಸಂಪೂರ್ಣ ಕುಸಿದಿದೆ. ಅರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವೈಫಲ್ಯವಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2.5 ವರ್ಷ ಆಗಿದೆ.136ಕ್ಕೂ ಹೆಚ್ಚು ಶಾಸಕರಿದ್ದಾರೆ. ಗ್ಯಾರಂಟಿಗಳು ಪ್ರತಿ ತಿಂಗಳು ಸಮರ್ಪಕವಾಗಿ ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದರೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ. ಸರ್ಕಾರದ ಹಣ ಚುನಾವಣೆಗೆ ಬಳಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗುಂಡಿ ಮುಚ್ಚುವ ಯೋಗ್ಯತೆ ಇಲ್ಲವೆಂದು ಕಿಡಿ
ಈ ಸರ್ಕಾರಕ್ಕೆ 15 ಸಾವಿರ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. 500-600 ಜನ ಗುಂಡಿಗೆ ಬಿದ್ದು ಸತ್ತಿದ್ದಾರೆ. ಇದರ ಹೊಣೆ ಸರ್ಕಾರವೇ ತೆಗೆದುಕೊಳ್ಳಬೇಕು. ಬೆಂಗಳೂರು ನಗರ ಹೆಚ್ಚಿನ ಆದಾಯ ಕೊಡುತ್ತದೆ. ಕಂಪನಿ ಮಾಲೀಕರು ಸಮಸ್ಯೆ ಬಗ್ಗೆ ಮಾತಾಡುತ್ತಾರೆ. ಬೆಂಗಳೂರಿನಲ್ಲಿ ರಸ್ತೆ ಯಾವುದು? ಪುಟ್ಪಾಥ್ ಯಾವುದು ಗೊತ್ತಿಲ್ಲ. ಇದು ಸರ್ಕಾರದ ಪರಿಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಯಾವಾಗ ಬ್ರದರ್ ಆಗುತ್ತಾರೋ, ಯಾವಾಗ ಕ್ಯಾನ್ಸಲ್ ಆಗುತ್ತೋ ಗೊತ್ತಿಲ್ಲ. ಕಾಂಗ್ರೆಸ್ನಲ್ಲಿ ಯಾರಿಗೆ ಸಹಿ ಹಾಕಬೇಕು ಅಂತ ಒಳಗೆ ನಡೆಯುತ್ತಿದೆ. ಸಹಿ ಹಾಕೋಕೆ ಎ,ಬಿ,ಸಿ ಟೀಂ ಅಂತ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಇದ್ದರೆ ಇದನ್ನ ಸರಿ ಮಾಡಲಿ ಎಂದು ಸಿಎಂ-ಡಿಸಿಎಂ ಬ್ರದರ್ಸ್ ಹೇಳಿಕೆಗೆ ಟಾಂಗ್ ನೀಡಿದರು.
ಎಂ.ಕೃಷ್ಣಾರೆಡ್ಡಿ ಅಧ್ಯಕ್ಷತೆಯಲ್ಲಿ ಮೊದಲ ಕೋರ್ ಕಮಿಟಿ ಸಭೆ
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಎಂ.ಕೃಷ್ಣಾರೆಡ್ಡಿ ಅವರು ಅಧ್ಯಕ್ಷತೆಯಲ್ಲಿ ಇಂದು ಮೊದಲ ಕೋರ್ ಕಮಿಟಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಹಾಗೂ ಮುಂಬರುವ ಜಿಬಿಎ ಹಾಗೂ ಸ್ಥಳೀಯರ ಸಂಸ್ಥೆಗಳ ಚುನಾವಣೆಗೆ ತಯಾರಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋರ್ ಕಮಿಟಿಯು ಪ್ರವಾಸ ಕೈಗೊಂಡು ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಪಕ್ಷದ ಚಟುವಟಿಕೆ ಮತ್ತು ಬಲವರ್ಧನೆ ಹಾಗೂ ಸಂಘಟನೆ ಚುರುಕುಗೊಳಿಸಬೇಕೆಂದು ಸೂಚನೆ ನೀಡಿದರು. ಮುಖಂಡರ ಜತೆ ಕೂಲಂಕಷವಾಗಿ ಚರ್ಚೆ ನಡೆಸಿ, ಪಕ್ಷ ಸಂಘಟನೆಯಲ್ಲಿ ಎಲ್ಲರೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ

ಇನ್ನೊಂದೆಡೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಚಳವಳಿ ನಡೆಸುತ್ತಿದ್ದ ಕರ್ನಾಟಕ ಅಂಗನವಾಡಿ, ಅಕ್ಷರ ದಾಸೋಹಿ, ಆಶಾ ನೌಕರರ ಪ್ರಮುಖರನ್ನು ಬುಧವಾರ ನವದೆಹಲಿಗೆ ಕರೆಸಿಕೊಂಡ ಸಚಿವ ಕುಮಾರಸ್ವಾಮಿ ಅವರು; ಸಂಜೆ ಈ ಎಲ್ಲಾ ಪ್ರಮುಖರ ಜತೆ ಸಂಜೆ ನವದೆಹಲಿಯ ಶಾಸ್ತ್ರೀ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಚೇರಿಯಲ್ಲಿ ಸಚಿವರಾದ ಅನ್ನಪೂರ್ಣದೇವಿ ಅವರನ್ನು ಭೇಟಿಯಾದರು.
ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ನೌಕರರ ಪರವಾಗಿ ಸಚಿವರಿಗೆ ಅವರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ಇಬ್ಬರು ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದ ಈ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ಹನ್ನೆರಡು ಮಂದಿ ನೌಕರರ ಪ್ರಮುಖರು ಭಾಗಿಯಾಗಿದ್ದರು.
ಎಫ್ ಆರ್ ಎಸ್ ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಚಿವರೊಬ್ಬರು ಪ್ರಮುಖರ ಜತೆ ಚರ್ಚಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ ಚುನಾವಣೆ ಆಯೋಗದ ಜತೆ ಚರ್ಚೆ ನಡೆಸಲಾಗುವುದು ಹಾಗೂ ಎಲ್ಲಾ ನೌಕರರಿಗೂ ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಸಚಿವೆ ಅನ್ನಪೂರ್ಣದೇವಿ ಅವರು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ನಿಮ್ಮ ಮೇಲಿನ ಕಾಳಜಿ ಹಾಗೂ ಮಾನವೀಯ ನೆಲೆಗಟ್ಟಿನ ಮೇರೆಗೆ ಬೇಡಿಕೆಗಳ ಈಡೇರಿಕೆಗೆ ಪರಿಶೀಲನೆ ನಡೆಸಲಾಗುವುದು ಎಂದು ಅನ್ನಪೂರ್ಣದೇವಿ ಅವರು ಭರವಸೆ ನೀಡಿದರು.
ನರೇಂದ್ರ ಮೋದಿ ಅವರ ಸರ್ಕಾರ ನಿಮ್ಮ ಜತೆಗಿದೆ. ಕರ್ನಾಟಕದಲ್ಲಿನೀವು ನಡೆಸುತ್ತಿದ್ದ ಪ್ರತಿಭಟನಾ ಚಳವಳಿಯ ಬಗ್ಗೆ ಸಚಿವರಾದ ಕುಮಾರಸ್ವಾಮಿ ಅವರು ನನ್ನೊಂದಿಗೆ ವಿವರವಾಗಿ ಚರ್ಚೆ ನಡೆಸಿದ್ದಾರೆ. ನೀವು ಉತ್ತಮ, ಶ್ರೇಷ್ಠ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜತೆ ಸರಕಾರವಿದೆ. ಆದಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು. ನಿಮಗೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ, ನಿಮಗೆ ಮತ್ತಷ್ಟು ಉತ್ತಮ ಸೌಲಭ್ಯ ಕಲಿಸ್ಪಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅನ್ನಪೂರ್ಣದೇವಿ ಅವರು ಅಂಗನವಾಡಿ ಪ್ರಮುಖರಿಗೆ ತಿಳಿಸಿದರು.
ಈ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅನಿಲ್ ಮಲಿಕ್ ಸೇರಿದಂತೆ ಮತ್ತಷ್ಟು ಉನ್ನತ ಅಧಿಕಾರಿಗಳು ಹಾಜರಿದ್ದರು.
ಇದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ನೌಕರರ ಪ್ರಮುಖರನ್ನು ಭೇಟಿಯಾದ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ನನ್ನ ಮನವಿಗೆ ಓಗೊಟ್ಟು ಪ್ರತಿಭಟನೆ ಕೊನೆಗೊಳಿಸಿ ನವದೆಹಲಿಗೆ ಬಂದಿದ್ದು ಸ್ವಾಗತಾರ್ಹ. ನೀವೆಲ್ಲರೂ ಮೈಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಧರಣಿ ಕೂರುವುದು ಅತ್ಯಂತ ನೋವಿನ ಸಂಗತಿ. ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕಾಗಿಯೇ ನಿಮ್ಮನ್ನು ಇಲ್ಲಿಗೆ ಕರೆಸಿಕೊಳ್ಳಲಾಯಿತು. ಪ್ರತಿಭಟನೆಗಿಂತ ಚರ್ಚೆ ಮಾಡುವುದು ಉತ್ತಮ ಮಾರ್ಗ ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ನೌಕರರ ಬೇಡಿಕೆಗಳ ಬಗ್ಗೆ ದೂರವಾಣಿಯಲ್ಲಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಪ್ರಧಾನ್ ಅವರೊಂದಿಗೆ ನೌಕರರ ಪ್ರಮುಖರ ಸಭೆಯನ್ನು ನಿಗದಿಗೊಳಿಸಿ, ಅವರ ನಿವಾಸಕ್ಕೆ ಅಧಿಕಾರಿಗಳ ಸಮೇತ ಕಳಿಸಿದರು.
ಸಚಿವ ಪ್ರಧಾನ್ ಅವರ ಜತೆಗೂ ಮಾತುಕತೆ ನಡೆಸಿದ ಪ್ರಮುಖರು, ತಮ್ಮ ಬೇಡಿಕೆ, ಸಂಕಷ್ಟಗಳ ಬಗ್ಗೆ ಚರ್ಚಿಸಿದರು. ಈ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್ ಅವರು, ಈ ಬಗ್ಗೆ ಕುಮಾರಸ್ವಾಮಿ ಅವರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
ಎಸ್. ವರಲಕ್ಷ್ಮೀ, ಹೆಚ್.ಎಸ್. ಸುನಂದಾ, ಮಾಲಿನಿ ಮೇಸ್ತಾ, ಶಾಂತಾ, ಲಕ್ಷ್ಮೀದೇವಮ್ಮ, ಮಹದೇವಮ್ಮ, ಶಶಿಕಲಾ, ದೊಡ್ಡವ್ವ ಪೂಜಾರಿ, ನಂಜಮ್ಮ, ಗುಲ್ಜಾರ್, ಉಷಾರಾಣಿ, ಸಿಂಧು, ಸವಿತಾ ಅವರು ನೌಕರರ ನಿಯೋಗದಲ್ಲಿ ಇದ್ದರು.