ದೊಡ್ಡಬಳ್ಳಾಪುರ, (ಸೆ.18): ಗಣೇಶ ಚತುರ್ಥಿಯ ಆಚರಣೆ ಸೋಮವಾರ ಸಂಭ್ರಮ, ಸಡಗರದಿಂದ ಜರುಗಿತು. ವಿವಿಧೆಡೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನವನವೀನ ಭಂಗಿಯಲ್ಲಿನ ಬೃಹತ್ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಶ್ರದ್ಧಾ, ಭಕ್ತಿಯಿಂದ ಪೂಜಿಸಿದ್ದಾರೆ.
ಅನೇಕರು ಸಾಂಪ್ರದಾಯಿಕ ವಾದ್ಯ, ಸಂಗೀತ ಹಾಗೂ ಪಟಾಕಿ ಸಿಡಿಸಿ ಗಣೇಶನನ್ನು ಬರಮಾಡಿಕೊಂಡರು. ವಿವಿಧ ಹೂವು, ವಿದ್ಯುತ್ ಬೆಳಕಿನಿಂದ ಆಲಂಕರಿಸಿದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಂಬೋದರನಿಗೆ ಪ್ರಿಯವಾದ ಕಡುಬು, ಪಂಚ ಕಜ್ಜಾಯ, ಮೋದಕ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಸಮರ್ಪಿಸಿದರು.
ಹಿರಿಯರು ಕಿರಯರೆನ್ನದೇ ಎಲ್ಲ ವಯೋಮಾನ ದವರು ಹೊಸ ಬಟ್ಟೆ ತೊಟ್ಟು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.
ಸಾಮಾನ್ಯವಾಗಿ ವಿವಿಧೆಡೆ ಒಂದು ದಿನ, ಮೂರು ದಿನ, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳ ವರೆಗೆ ಗಣೇಶನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಅನಂತ ಚತುರ್ದಶಿ ತನಕ ಪೂಜಿಸುವ ವಾಡಿಕೆ ಇದೆ.
ವಿಸರ್ಜನಾ ಸ್ಥಳಗಳಲ್ಲಿ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ವೇಳೆ ‘ಗಣಪತಿ ಬಪ್ಪಾ ಮೋರಯಾ!’ ಎಂಬ ಮುಗಿಲು ಮುಟ್ಟುವ ಭಕ್ತರ ಘೋಷಣೆಯೊಂದಿಗೆ ನಗರಸಭೆಯ ಸಂಚಾರಿ ವಾಹನ, ಡಿ.ಕ್ರಾಸ್ ರಸ್ತೆಯಲ್ಲಿನ ಕೆರೆ ಅಂಚಿನಲ್ಲಿ ನಿರ್ಮಿಸಿರುವ ಜಲಸಂಗ್ರಹದಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿನ ಕೆರೆ, ಕುಂಟೆ ಮೂರ್ತಿಯನ್ನು ವಿಸರ್ಜಿಸಿ ವಿದಾಯ ಹೇಳಿದರು.
ಪೊಲೀಸರಿಂದ ಪಥ ಸಂಚಲನ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
ನೆಲದಾಂಜನೇಯ ದೇವಾಲಯದಿಂದ ಆರಂಭವಾದ ಪಥ ಸಂಚಲನ ಇಸ್ಲಾಂಪುರ, ಕೊಂಗಾಡಿಯಪ್ಪ ರಸ್ತೆ ಮೂಲಕ ಸಾಗಿತು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ಗಳಾದ ಪ್ರೀತಂ ಶ್ರೇಯಕರ, ಮುನಿಕೃಷ್ಣ, ಎಂ.ಆರ್.ಹರೀಶ್, ವಿಜಯಲಕ್ಷ್ಮಿ ಸೇರಿದಂತೆ ಅನೇಕ ಮಂದಿ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….