ಚಿಕ್ಕಬಳ್ಳಾಪುರ: ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಮತ್ತು 4ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಉದ್ಯೋಗಸ್ಥರಿಗೆ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈವರೆಗೆ ಯಾರು ಯೋಗ ಮಾಡುತ್ತಿಲ್ಲವೋ ಅಥವಾ ಯೋಗಾಭ್ಯಾಸ ಮಾಡಲು ಆರಂಭಿಸಿಲ್ಲವೋ ಅವರು ಜೀವನದಲ್ಲಿ ಏನೋ ಒಂದನ್ನು ಕಳೆದುಕೊಂಡಿದ್ದಾರೆ ಎಂಬುದೇ ನನ್ನ ಭಾವನೆ. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಎಷ್ಟೇ ಕಾರ್ಯ ಒತ್ತಡಗಳನ್ನು ನಿಭಾಯಿಸುವ ಶಕ್ತಿಯನ್ನು ಯೋಗ ಮಾತ್ರ ನೀಡಬಲ್ಲದು. ಯೋಗ ಮಾಡಿದ ದಿನ ಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಹಾಗೂ ಅಂದಿನ ಕಾರ್ಯಕ್ಷಮತೆಯನ್ನು ಇಮ್ಮಡಿಗೊಳಿಸುತ್ತದೆ ಎಂದರು.
ಯೋಗ ಮಾಡಿದರೆ ರೋಗ ಬರುವುದಿಲ್ಲ ಎಂಬ ನಾಣ್ನುಡಿ ಅಕ್ಷರಶಃ ಸತ್ಯ ಇಷ್ಟೆಲ್ಲಾ ಮಹತ್ವಗಳು ನನಗೆ ತಿಳಿದಿರುವುದು ನನ್ನ ಯೋಗಾಭ್ಯಾಸದ ಸ್ವಂತ ಅನುಭವದಿಂದ ಎಂದು ಹೇಳಲು ಇಚ್ಚಿಸುತ್ತೇನೆ. ಕಳೆದ 5 ವರ್ಷಗಳಿಂದ ಪ್ರತಿ ದಿನ ಮುಂಜಾನೆ ನಾನು ಸಹ ಎರಡು ತಾಸು ಯೋಗಾಭ್ಯಾಸ ಮಾಡುತ್ತೇನೆ. 108 ಸೂರ್ಯ ನಮಸ್ಕಾರ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಮಾಡುತ್ತೇನೆ. ಪ್ರತಿಯೊಬ್ಬರೂ ಒತ್ತಡದಿಂದ ಪಾರಾಗಲು ದಿನನಿತ್ಯ ಯೋಗಾಭ್ಯಾಸ ಮಾಡಿ. ಯಾರು ಇವರೆಗೆ ಯೋಗ ಆರಂಭಿಸಿಲ್ಲವೋ ಅಂತಹವರು ಯೋಗವನ್ನು ಕಲಿತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ನೆರೆದಿದ್ದ ಉದ್ಯೋಗಸ್ಥ ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಸಂಭಾವ್ಯ ಕೋವಿಡ್ ನ 3ನೇ ಅಲೆ ಬರುತ್ತದೋ ಇಲ್ಲವೋ ಗೊತ್ತಿಲ್ಲ ಆದರೂ ಕೂಡ ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಅನುಷ್ಟಾನ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾಮಾನ್ಯ ಅಪೌಷ್ಟಿಕತೆಯಿಂದ 5200 ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 87 ಮಕ್ಕಳಿದ್ದಾರೆ ಈ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು(Dry ration) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿತರಿಸಲಾಗುತ್ತಿದೆ.ಇಂತಹ ಮಕ್ಕಳ ಮನೆಗೆ ಇಲಾಖೆಯಿಂದ ಪೌಷ್ಟಿಕ ಆಹಾರ ಪೂರೈಕೆ ಆಗುತ್ತಿದ್ದೆಯೇ ಇಲ್ಲವೇ ಎಂಬುದನ್ನು ಶಿಶು ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಬೇಕು. ಇಂತಹ ಮಕ್ಕಳನ್ನು ಬಲಪಡಿಸುವ ಮತ್ತು ಕೋವಿಡ್ ನಿಂದ ಬಾಧಿತರಾಗದಂತೆ ತಡೆಗಟ್ಟುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.
ಇದಲ್ಲದೇ ಸತ್ಯಸಾಯಿ ಟ್ರಸ್ಟ್ ಇವರ ಸಹಯೋಗದಲ್ಲಿ ಸಾಯಿ ಶೂರ್ ಪೌಷ್ಠಿಕ ಪೌಡರ್ ಅನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ ಎಂದು ತಿಳಿಸಿ, ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಪದ್ಧತಿಗಳ ಹಾಗೂ ಎದೆ ಹಾಲಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಆದರೆ ಸ್ವಂತ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ ಬರಿ ಮನೆ ಕೆಲಸದಲ್ಲಿಯೇ ತಲ್ಲೀನರಾಗುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮನೆಯಲ್ಲಿಯೇ ಸಿದ್ದಪಡಿಸುವ ಆಹಾರವನ್ನು ಸಯಮಕ್ಕೆ ಸರಿಯಾಗಿ ಸೇವಿಸಬೇಕು. ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಮಕ್ಕಳಲ್ಲಿ, ಗರ್ಭಣಿಯರು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಒಂದು ತಿಂಗಳ ಕಾಲ ಪೋಷಣ್ ಮಾಸಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಇಲಾಖೆಯು ಮುಖಾಂತರ ಹಮ್ಮಿಕೊಂಡಿರುವುದನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು. ಈ ಮಾಸಾಚರಣೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ವೇಳೆ ಯೋಗ ಗುರುಗಳಾದ ಗೋವಿಂದರಾಜು ರವರು ನೆರೆದಿದ್ದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳಿಗೆ ಯೋಗದ ವಿವಿಧ ಆಸನಗಳನ್ನು ಮಾಡಿಸಿ ಯೋಗದ ಉಪಯೋಗಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ನಟರಾಜು, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ತಬೀಬಾ ಬಾನು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಭಾಗಿಯಾಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..