ಬೆಂಗಳೂರು, (ಜುಲೈ.07): ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡ, ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ-ಭದ್ರಾ ಮೇಲ್ದಂಡೆ, ಆಲಮಟ್ಟಿಯಂತಹ ಬೃಹತ್ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವ ಅನಿವಾರ್ಯತೆ, ಸಿಬ್ಬಂದಿ ವೇತನ ಹೆಚ್ಚಳ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವಂತಹ ಸಾಲು-ಸಾಲು ಸವಾಲುಗಳ ಒತ್ತಡದ ನಡುವೆ ಇಂದು(ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ನೂತನ ಕಾಂಗ್ರೆಸ್ ಸರ್ಕಾರದ 2023-24 ಸಾಲಿನ ನೂತನ ಬಜೆಟ್ ಮಂಡನೆ ಮಾಡಲಿದ್ದಾರೆ. 9 ತಿಂಗಳ ಬಜೆಟ್ ಮಂಡನೆ ಮಾಡುವ ಮೂಲಕ ತಮ್ಮ 14ನೇ ಆಯವ್ಯಯವನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ಸುಮಾರು 3.30 ಲಕ್ಷ ಕೋಟಿ ಆಸುಪಾಸಿನ ಆಯವ್ಯಯ ಮಂಡನೆ ಮಾಡಲಿದ್ದು, ಬಹುತೇಕ ಗ್ಯಾರಂಟಿ ಕೇಂದ್ರೀಕೃತ ಬಜೆಟ್ ಆಗಿರಲಿದೆ. ಕಳೆದ 25 ದಿನಗಳಿಂದ ಸಿಎಂ ಸಿದ್ದರಾಮಯ್ಯ ಇಲಾಖಾವಾರು ಬಜೆಟ್ ಪೂರ್ವಬಾವಿ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಗ್ಯಾರಂಟಿ ಬಜೆಟ್ ಆಗಿರಲಿದೆ. ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಹೊಣೆಗಾರಿಕೆ, ಅನಿವಾರ್ಯತೆಯಲ್ಲಿ ಆಯವ್ಯಯ ಮಂಡಿಸಲಿದ್ದಾರೆ. ಅಂದಾಜು 3.30 ಲಕ್ಷ ಕೋಟಿ ರೂ. ಬಜೆಟ್ ಬಹುತೇಕ ಗ್ಯಾರಂಟಿ ಕೇಂದ್ರೀಕೃತವಾಗಿರಲಿದೆ.
5 ಗ್ಯಾರಂಟಿಗಳಿಗೆ 59,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಸಿದ್ದುಗೆ ಸವಾಲಾಗಲಿದೆ. ಬಜೆಟ್ನಲ್ಲಿ ಒಟ್ಟು 3.39 ಲಕ್ಷ ಕೋಟಿ ವೆಚ್ಚ ಮಾಡೋ ಸಾಧ್ಯತೆ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಪರ ಬಜೆಟ್ ಸಾಧ್ಯತೆಗಳಿದ್ದು, ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹಂಚಿಕೆ ಕಡಿತ ಸಾಧ್ಯತೆಗಳಿವೆ. ಸರ್ಕಾರಿ ನೌಕರರ 7ನೇ ವೇತನ ಆಯೋಗ ಶಿಫಾರಸ್ಸು ಜಾರಿ ಘೋಷಣೆಯಾಗಲಿದೆ.
OPS(ಹಳೆ ಪಿಂಚಣಿ ವ್ಯವಸ್ಥೆ)ಗಾಗಿ 8-10 ಸಾವಿರ ಕೋಟಿ ವೆಚ್ಚ ಹೆಚ್ಚಳ ಸಾಧ್ಯತೆಗಳಿವೆ. ಮತ್ತಷ್ಟು ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಅನುದಾನ ರಿಲೀಸ್ ಹಾಗೂ ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಮತ್ತು ಬಿಜೆಪಿ ಯೋಜನೆಗಳ ಕೈಬಿಟ್ಟು ಹೊಸ ಯೋಜನೆ ಘೋಷಣೆ ಸಾಧ್ಯತೆಗಳಿವೆ.
ಜನರಿಗೆ ತೆರಿಗೆ ಹೆಚ್ಚಳದ ಬಿಸಿ ತಟ್ಟುತ್ತಾ..? ಹಣ ಹೊಂದಿಸಲು ಸಾಲದ ಮೊರೆ ಹೋಗ್ತಾರಾ ಸಿಎಂ ಸಿದ್ದು..? ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳಕ್ಕೆ ಆರ್ಥಿಕ ಇಲಾಖೆ ಪ್ರಸ್ತಾಪ ಆರ್ಥಿಕ ಇಲಾಖೆ ಶೇ.2ರಷ್ಟು ಸೆಸ್ ಹೆಚ್ವಿಸಲು ಪ್ರಸ್ತಾವ ಸಲ್ಲಿಸಿದೆ. ಸೆಸ್ ಹೆಚ್ಚಳಗೆ ಸಿಎಂ ಸಮ್ಮತಿ ನೀಡುವುದು ಅನುಮಾನವಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಸೆಸ್ ಹೆಚ್ಚಳ ಡೌಟ್ ಆಗಿದ್ದು, ರಿಯಲ್ ಎಸ್ಟೇಟ್ಗೆ ವಿಶೇಷ ಒತ್ತು ಕೊಟ್ಟು ಆಸ್ತಿ ತೆರಿಗೆ ಹೆಚ್ಚಳ ಸಾಧ್ಯತೆ. ಸಿಎಂ ತಂಬಾಕು ಮೇಲೆ ಸುಂಕ ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದಾರೆ. ಮದ್ಯಪ್ರಿಯರಿಗೂ ಕಿಕ್ ಕೊಡ್ತಾರಾ ಸಿಎಂ ಸಿದ್ದರಾಮಯ್ಯ..? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಇಂದಿನ ಬಜೆಟ್ ನಲ್ಲಿ ಉತ್ತರ ಸಿಗಲಿದೆ.
ದೊಡ್ಡಬಳ್ಳಾಪುರ ಜನರ ನಿರೀಕ್ಷೆ: ರಾಜ್ಯದಲ್ಲಿ ನೂತನ ಸರ್ಕಾರ ಆಡಳಿತಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ ಈ ಬಜೆಟ್ ನಲ್ಲಾದರೂ ತಾಲ್ಲೂಕಿನ ಜನರ ಬಹು ದಿನಗಳ ಕನಸಿನ ಯೋಜನೆಗಳಾಗಿರುವ ಜಿಲ್ಲಾ ಕ್ರೀಡಾಂಗಣ, ಜಿಲ್ಲಾ ಆಸ್ಪತ್ರೆ, ಎತ್ತಿನಹೊಳೆ ಕಾಮಗಾರಿ ಪೂರ್ಣವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೈರಸಂದ್ರ ಸಮೀಪ 2018ರಲ್ಲಿ ಕಾರ್ಯಾರಂಭ ಮಾಡಿದ ಸಂದರ್ಭಕ್ಕೂ ಮುನ್ನವೇ ತಾಲ್ಲೂಕಿನ ಅದಿನಾರಾಯಣ ಹೊಸಹಳ್ಳಿ ಸಮೀಪ 9 ಎಕರೆ ಪ್ರದೇಶವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಜನರು, ಸರ್ಕಾರಿ ದಾಖಲೆಯಲ್ಲಿ ಮಾತ್ರ ಜಿಲ್ಲಾ ಕ್ರೀಡಾಂಗಣ ಎಂದು ಹೆಸರು ಇದೆಯೇ ವಿನಹ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಪ್ರತಿ ಬಜೆಟ್, ಮಂಡನೆ ಸಮಯದಲ್ಲೂ ಜಿಲ್ಲೆಯ ಕ್ರೀಡಾಪಟುಗಳು ಆಸೆಗಣ್ಣಿನಿಂದ ಕ್ರೀಡಾಂಗಣ ಅಭಿವೃದ್ಧಿ ನಿರೀಕ್ಷೆ ಮಾಡುತ್ತಲೇ ಇದ್ದಾರೆ.
ಇದೇ ಸ್ಥಿತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ನಿರ್ಮಾಣವಾಗಿದ್ದು. ನಗರಸಭೆ ವ್ಯಾಪ್ತಿಯ ಸಿದ್ದೇನಾಯಕನಹಳ್ಳಿ ಸಮೀಪ 9 ಎಕರೆ ಭೂಮಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. 2020ರ ಬಜೆಟ್ನಲ್ಲೇ 390 ಕೋಟಿ ಮಂಜೂರಾತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಹೆಚ್ಚಿದ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ತುರ್ತು ಅಗತ್ಯವಾಗಿದೆ. ಬಜೆಟ್ನಲ್ಲಿ ಮಂಜೂರಾತಿ ಹಾಗೂ ಹಣ ಬಿಡು ಗಡೆಯಾಗಬಹುದು ಎನ್ನುವ ನಿರೀಕ್ಷೆ.
ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದುದ್ದರಿಂದ ಜಿಲ್ಲಾ ಆಸ್ಪತ್ರೆ ಕಾಮಗಾರಿಗೆ ಹಣ ಬಿಡುಗಡೆಗೆ ಬಿಜೆಪಿ ಆಡಳಿತದ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆಯಲೇ ಇಲ್ಲ. ಕ್ಷೇತ್ರದ ಈ ಹಿಂದಿನ ಶಾಸಕ ಟಿ.ವೆಂಕಟರಮಣಯ್ಯ ಅವರು ಯಾವುದೇ ಸಾರ್ವಜನಿಕ ವೇದಿಕೆ ಸಿಕ್ಕರೂ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ನೀಡದೆ ಹಣ ಮಲತಾಯಿ ಧೋರಣೆ ಮಾಡುತ್ತಿದೆ. ಎಂದು ದೂರುತ್ತಲೇ ಇದ್ದರು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದಿನಂತೆಯೇ ಮಲತಾಯಿ ಧೋರಣೆಗೆ ಜಿಲ್ಲಾ ಆಸ್ಪತ್ರೆ ಬಲಿಯಾಗುತ್ತದೊ ಅಥವಾ ಜನರ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಹಣ ಮಂಜೂರಾಗುತ್ತದೆಯೋ ಕಾದು ನೋಡಬೇಕಿದೆ.
ಕೋವಿಡ್ ನಂತರ ನೇಕಾರಿಕೆ ಸಂಕ್ರಮಣ ಕಾಲಘಟ್ಟಕ್ಕೆ ಬಂದು ನಿಂತಿದೆ. ಕೃಷಿಯ ನಂತರ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಯ ಜೀವನಾಡಿ ನೇಕಾರಿಕೆಯಾಗಿದೆ. ನೇಕಾರರಿಗೆ ವಿದ್ಯುತ್ ಬೆಲೆ ಏರಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಉದ್ಯಮಕ್ಕೆ ತೀವ್ರ ಪೆಟ್ಟು ನೀಡಿವೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯು ನೇಯುತ್ತಿರುವ ಸೀರೆಗಳಿಗೆ ಸೂಕ್ತ ಬೆಲೆ ದೊರೆಯದ ದಲ್ಲಾಳಿಗಳ ಹಾವಳಿಯಿಂದ ಬೇಸತ್ತು ಹೋಗುವಂತೆ.
ಇಲ್ಲಿ ನೇಯುತ್ತಿರುವ ಸೀರೆಗಳು ಆಂಧ್ರಪ್ರದೇಶ, ಸೂರತೆ ಸೇರಿದಂತೆ ಬೇರೆ ಬೇರೆ ಬ್ರಾಂಡ್ಗಳ ಅಡಿಯಲ್ಲಿ ಮಾರಾಟ ವಾಗುತ್ತಿರುವುದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಹೀಗಾಗಿಯೇ ಸ್ಥಳೀಯ ಬ್ರಾಂಡ್ ಹೆಸರಿನಲ್ಲೇ ಸೀರೆಗಳ ಮಾರಾಟಕ್ಕೆ ಸೂಕ್ತ ಮಳಿಗೆಗಳ ನಿರ್ಮಾಣವಾಗಬೇಕು ವಿದ್ಯುತ್ ಬೆಲೆ ಏರಿಕೆ ತಗ್ಗಿಸಬೇಕು. ಸಹಕಾರಿ ಕ್ಷೇತ್ರದ ಮೂಲಕ ಸರ್ಕಾರವೇ ಸೀರೆಗಳನ್ನು ಖರೀದಿ ಮಾಡುವಂತೆ ಆಗಬೇಕು ಎನ್ನುವ ಬೇಡಿಕೆಗಳನ್ನು ಒಳಗೊಂಡ ದೊಡ್ಡ ಪಟ್ಟಿಯನ್ನೇ ನೇಕಾರ ಸಂಘಟನೆಗಳ ನಿಯೋಗ ರಾಜ್ಯದ ಜವಳಿ ಸಚಿವರಿಗೆ ನೀಡಿದೆ.
ತಾಲ್ಲೂಕಿನಲ್ಲಿ ಮಾಕಳಿಬೆಟ್ಟ, ಹುಲಕುಡಿ, ಬೆಟ್ಟ, ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇವೆ, ಇವುಗಳ ಅಭಿವೃದ್ಧಿಗೆ 2020ರಲ್ಲಿ ಪ್ರಾಥಮಿಕ ಹಂತವಾಗಿ 71 ಕೋಟಿ ಮಂಜೂರು ಮಾಡಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ನೋಡಿ ಖುಷಿ ಪಟ್ಟಿದ್ದು ಬಿಟ್ಟರೆ ಇದುವರೆಗೂ ಈ ಆದೇಶ ಜಾರಿಗೆ ಬಂದಿದ್ದೇ ಇಲ್ಲ. ಈ ಬಾರಿಯ ಬಜೆಟ್ನಲ್ಲಾದರೂ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಪ್ರಮುಖ ಕೇಂದ್ರ ಬಿಂದುವಾಗಿರುವುದೇ ದೊಡ್ಡಬಳ್ಳಾಪುರ, ಎತ್ತಿನಹೊಳೆಯಿಂದ ಪೈಪ್ಲೈನ್ ಮೂಲಕ ಬರುವ ನೀರು ಸಂಗ್ರಹವಾಗುವ ಡ್ಯಾಂ ನಿರ್ಮಾಣಕ್ಕಾಗಿ ತಾಲ್ಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ ಹಾಗೂ ಇದೇ ಗ್ರಾಮಕ್ಕೆ ಸಮೀಪದ ಬೈರಗೊಂಡ್ಲು ಸಮೀಪ ಸ್ಥಳ ಗುರುತಿಸಲಾಗಿದೆ. ಎತ್ತಿನಹೊಳೆ ಪೈಪ್ಲೈನ್ ಕಾಮಗಾರಿ ಮುಕ್ತಾಯವಾಗಿದ್ದರೂ ಸಹ ನೀರು ಸಂಗ್ರಹದ ಡ್ಯಾಂ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಅರ್ಥಿಕ ಮುಗ್ಗಟ್ಟಿನಿಂದ ‘ಭೂಸ್ವಾಧೀನವಾಗದೇ ಇರುವುದೇ ಎತ್ತಿನಹೊಳೆ ಕಾಮಗಾರಿ ಕುಂಠಿತವಾಗಲು ಕಾರಣವಾಗಿದೆ. ಹಾಗಾಗಿ ರಾಜ್ಯ ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆಗೆ ಅಗತ್ಯವಿರುವ ಹೆಚ್ಚಿನ ಆರ್ಥಿಕ ನೆರವು ನೀಡುವ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂಬ ನಿರೀಕ್ಷೆ ಜನರದ್ದಾಗಿದೆ.
ನಗರಸಭೆ ಒಳಚರಂಡಿ, ನೀರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಒಳಚರಂಡಿ ನೀರು ಹಾಗೂ ಕೈಗಾರಿಕಾ ಪ್ರದೇಶಗಳಿಂದ ತ್ಯಾಜ್ಯ ನೀರಿನಿಂದ ದೊಡ್ಡತುಮಕೂರು, ಮಜರಾಹೊಸಹಳ್ಳಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಗಳ ನೀರು ಅಂತರ್ಜಲವು ಸಹ ಕಲುಷಿತವಾಗಿದ್ದು ಈ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಕುಡಿಯುವ ನಿರ್ಮಾಣವಾಗಿದೆ.
ಕುಡಿಯುವ ನೀರಿಗಾಗಿ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ರಾಜ್ಯ ಬಜೆಟ್ನಲ್ಲಿ ಈ ಕೆರೆ ನೀರಿನ ಶುದ್ದೀಕರಣ ಹಾಗೂ ಅಭಿವೃದ್ಧಿಗೆ ಹಣ ದೊರೆಯುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.
ಒಂದು ದಶಕದಿಂದಲೂ ಹಲವಾರು ಸಂಘಟನೆಗಳು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದರು ಸಹ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಬಂದು ಬೀಳುತ್ತಿರುವ ಕಸದ ರಾಶಿ ಮಾತ್ರ ನಿಂತಿಲ್ಲ. ಪ್ರತಿ ಬಾರಿ ಹೋರಾಟಗಳು ನಡೆದಾಗಲೂ ಕಸ ಸ್ಥಗಿತಗೊಳಿಸುವ ಅಥವಾ ಕಸ ಕಂಟಕದಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆಗಳು ದೊರೆಯುತ್ತಿವೆ ಹೊರತು ಶಾಶ್ವತ ಪರಿಹಾರ
ಮಾತ್ರ ಇದುವರೆಗೂ ಆಗಿಲ್ಲ. ಈ ಬಾರಿಯ ಬಜೆಟ್ ದರೂ ಇಲ್ಲಿನ ಕಸ ವಿಲೇವಾರಿ ಘಟಕದ ಸುತ್ತಲು ತ್ಯಾಜ್ಯ ನೀರು, ಕಸ ಹೊರ ಬಾರದಂತೆ ಗೋಡೆ ನಿರ್ಮಿಸುವ ಯೋಜನೆಗೆ ಹಣ ಮಂಜೂರಾತಿ ಮಾಡಿ ಕಸದಿಂದ ಆಗುತ್ತಿರುವ ತೊಂದರೆಗಳು ತಾತ್ಕಾಲಿಕವಾಗಿಯಾದರೂ ನಿವಾರಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಸ್ಥಳೀಯ ರೈತರಿದ್ದಾರೆ. ಅ
ಇಡೀ ಜಿಲ್ಲೆಗೆ ಏಕೈಕ ಮಹಿಳಾ ಪ್ರಥಮ ದರ್ಜೆ ಕಾಲೇಜು ಇರುವುದು ದೊಡ್ಡಬಳ್ಳಾಪುರದಲ್ಲಿ ಮಾತ್ರ. 2014ರಲ್ಲಿಯೇ ಕಾಲೇಜು ಪ್ರಾರಂಭವಾದರೂ ಇದುವರೆಗೂ ಸ್ವತಂತ್ರ ಕಟ್ಟಡ ಇಲ್ಲದ ಸರ್ಕಾರಿ ಪ್ರೌಢ ಶಾಲಾ ಕಟ್ಟಡದಲ್ಲಿನ ಐದಾರು ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಮಹಿಳಾ ಕಾಲೇಜು ಬಂದ್ ಮಾಡಬೇಕು, ಇಲ್ಲವೇ ಸ್ವತಂತ್ರ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವ ಕೂಗು ದಶಕದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೂ ಪ್ರತ್ಯೇಕ ಕಟ್ಟಡದ ಕನಸು ಮಾತ್ರ ನನಸಾಗಿಯೇ ಇಲ್ಲ. ಈ ಬಾರಿಯ ಬಜೆಟ್ನಲ್ಲಾದರೂ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತಂತ್ರ ಅಸ್ತಿತ್ವ ದೊರೆಯಬೇಕಿದೆ ಎನ್ನುವುದು ಮಹಿಳಾ ಪರ ಹೋರಾಟಗಾರರ ಒತ್ತಾಯವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….