ದೊಡ್ಡಬಳ್ಳಾಪುರ, (ಜೂ.01); ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳೆದೊಂದು ವರ್ಷಗಳಿಂದ ಹದಗೆಟ್ಟಿದೆ ಎಂಬುದು ಹಲವು ಮಾಧ್ಯಮಗಳಲ್ಲಿ ವರದಿಯಾದಂತೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೂಡ ಕಳೆದ ಒಂದು ವರ್ಷದಿಂದ ಸಂಭವಿಸುತ್ತಿರುವ ಆಘಾತಕಾರಿ ಸಾವಿನ ಸಂಖ್ಯೆಗಳು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಇತ್ತೀಚಿಗೆ ನಡೆದ ಗ್ಯಾಂಗ್ ವಾರ್ನಲ್ಲಿ ಯುವಕ ಹೇಮಂತ್ಗೌಡ ಹತ್ಯೆ ಪ್ರಕರಣ ಸೇರಿದಂತೆ, ತಾಲೂಕಿನಲ್ಲಿ ನಡೆದಿರುವ ಘೋರ ಪ್ರಕರಣಗಳು ದೊಡ್ಡಬಳ್ಳಾಪುರ ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿದ್ದು, ನೇಕಾರರ ನಗರಿ, ಹೆಮ್ಮೆಯ ದೊಡ್ಡಬಳ್ಳಾಪುರ ಎತ್ತ ಸಾಗುತ್ತಿದೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.
2023 ರಿಂದ 2024ರ ವರೆಗೆ ತಾಲೂಕಿನಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ 121 ಮಂದಿ ಘೋರ ಸಾವನಪ್ಪಿದ್ದಾರೆ. ಇದಲ್ಲದೆ ಒಂದು ಅತ್ಯಾಚಾರ ಪ್ರಕರಣ, 23 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.
ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಹೊರಗಿನ ತಾಲೂಕುಗಳಿಗೆ ಸೇರಿದ ಪೊಲೀಸ್ ಠಾಣೆ ಹೊರತು ಪಡೆಸಿದರೆ.. ದೊಡ್ಡಬಳ್ಳಾಪುರ ನಗರ, ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬೆಳವಂಗಲ ಹಾಗೂ ಹೊಸಹಳ್ಳಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿವೆ.
ಈ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅನ್ವಯ 2023 ರಲ್ಲಿ 09 ಕೊಲೆ, 2024 ರಲ್ಲಿ 2 ಕೊಲೆ ಒಟ್ಟು ಹತ್ಯೆ ಪ್ರಕರಣದಲ್ಲಿ 11 ಮಂದಿ ಹತ್ಯೆ.
ಮಾರಣಾಂತಿಕ ಅಪಘಾತದಲ್ಲಿ 2023 ರಲ್ಲಿ 74 ಮಂದಿ, 2024 ರಲ್ಲಿ 36 ಮಂದಿ ಒಟ್ಟು 110 ಜನ ಸಾವು.
ಅತ್ಯಾಚಾರ 2023ರಲ್ಲಿ ಒಂದು ಹಾಗೂ ಪೋಕ್ಸೋ ಕಾಯಿದೆ 2023ರಲ್ಲಿ 14 ಪ್ರಕರಣ, 2024 ನಡು ವರ್ಷಕ್ಕೆ ಮುನ್ನವೇ 9 ಪ್ರಕರಣ ಸೇರಿ ಒಟ್ಟು 23 ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣಗಳು; ಎಪಿಎಂಸಿ ಬಳಿ ಲಾರಿಗೆ ಸಿಲುಕಿ ತಂದೆ, ಮಗಳ ಭೀಕರ ಸಾವಿನ ಆಘಾತ ಇಂದಿಗೂ ತಾಲೂಕಿನ ಜನ ಮರೆತಿಲ್ಲ, ದ್ವಿ ಚಕ್ರವಾಹನ ಸವಾರರ ಸಾವು, ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಮಲಗಿದ್ದ ಕುಟುಂಬ ಶವವಾಗಿ ಪತ್ತೆ, ತಾವರೆ ಹೂ ಕೀಳಲು ತೆರಳಿ ಸಾವು, ದನ ತೊಳೆಯಲು ನೀರಿಗಿಳಿದು ಸಾವು, ಚಿಕ್ಕ ತುಮಕೂರು ಬಳಿ ಅಕ್ಕಾ, ತಮ್ಮನಿಗೆ ಸಂಭವಿಸಿದ ಘೋರ ಅಪಘಾತ, ಬೈದ ಕಾರಣ ವೃದ್ಧೆಯ ಹತ್ಯೆ ಸೇರಿದಂತೆ ಗ್ಯಾಂಗ್ ವಾರ್ ನಿಂದ ಸಾವು, ಕೇವಲ ಪೋಟೋ ಶೂಟ್ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ, ನಡು ರಸ್ತೆಯಲ್ಲಿ ಲಾಂಗ್, ಮಚ್ಚು ಹಿಡಿದು ಬಡಿದಾಡುವ ಪುಡಿ ರೌಡಿಗಳ ಉಪಟಳ ಮುಂತಾದ ಪ್ರಕರಣಗಳು ತಾಲೂಕಿನ ಜನರನ್ನು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ದಿಟ್ಟ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಗಳಾದ ಸಾಧಿಕ್ ಪಾಷ, ಡಾ.ಎಂ.ಬಿ.ನವೀನ್ ಕುಮಾರ್, ರಾವ್ ಗಣೇಶ್ ಜನಾರ್ಧನ್ ಅವರುಗಳು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ರೀತಿಯ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿ ತಾಲೂಕಿನ ಜನ ಹೆಚ್ಚಿನ ಭರವಸೆ ಹೊಂದಿದ್ದಾರೆ.
ನಿರೀಕ್ಷೆ; ಸಾರಿಗೆ ನಿಯಮ ಉಲ್ಲಂಘನೆಗೆ ಕಡಿವಾಣ, ಶಾಲೆ ಕಾಲೇಜು ವ್ಯಾಪ್ತಿ ಸೇರಿದಂತೆ ವ್ಯಾಪಕ ಆರೋಪಕ್ಕೆ ಕಾರಣವಾಗಿರುವ ಗಾಂಜಾ ಮಾರಾಟಕ್ಕೆ ಕಡಿವಾಣ, ಡ್ರಾಗರ್ ಇಟ್ಕೊಂಡ್ ಓಡುವುದನ್ನೇ ಶೋಕಿಯಾಗಿಸಿ ಕೊಂಡಿರುವ ಪುಡಿ ರೌಡಿಗಳ ಹಾವಳಿ, ಶಾಲೆ – ಕಾಲೇಜು ಬಳಿ ವೀಲ್ಹಿಂಗ್ ಕಡಿವಾಣ, ರಾಜಕೀಯ ಕ್ಷೇತ್ರದಲ್ಲಿರುವವರ ಕಡೆಯವರ ಗೂಂಡಾ ವರ್ತನೆಗೆ ಕಡಿವಾಣ ಸೇರಿದಂತೆ ಹಲವು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರನ್ನು ತಾಲೂಕಿನ ಜನತೆ ಒತ್ತಾಯಿಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….