ಬೆಂಗಳೂರು, (ಜೂ.01); ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವಂತೆ ರಾಜ್ಯದ ಉತ್ತರ ಭಾಗದಲ್ಲಿರುವ ದೇವಸ್ಥಾನದ ಬಳಿ ಯಾವುದೇ ಶತ್ರು ಭೈರವಿ ಯಾಗ ಹಾಗೂ ಪ್ರಾಣಿ ಬಲಿ ನಡೆದಿಲ್ಲ ಎಂದು ಕೇರಳ ಸರ್ಕಾರ ಶನಿವಾರ ಸ್ಪಷ್ಟನೆ ನೀಡಿದೆ.
ಕೇರಳದ ಕಣ್ಣೂರು ಜಿಲ್ಲೆಯ ರಾಜರಾಜೇಶ್ವರ ದೇವಸ್ಥಾನದ ಬಳಿ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ‘ಶತ್ರು ಭೈರವಿ ಯಾಗ ಪ್ರಯೋಗ ನಡೆಸಲಾಗುತ್ತಿದೆ ಎಂದು ಶಿವಕುಮಾರ್ ಆರೋಪಿಸಿದ್ದರು.
ಈ ಬಗ್ಗೆ ನಾವು ತನಿಖೆ ಮಾಡಿದ್ದೇವೆ. ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದೇವೆ. ನಮಗೆ ದೊರೆತ ಪ್ರಾಥಮಿಕ ವರದಿ ಪ್ರಕಾರ ದೇವಸ್ಥಾನದಲ್ಲಿ ಅಥವಾ ದೇವಸ್ಥಾನದ ಸಮೀಪದಲ್ಲಿ ಅಂತಹ ಯಾವುದೇ ಯಾಗ ನಡೆದಿಲ್ಲ ಎಂದು ಕೇರಳ ಸಚಿವ ಕೆ.ರಾಧಾಕೃಷ್ಣನ್ ಹೇಳಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ದೃಢಪಡಿಸಿದೆ. ಶಿವಕುಮಾರ್ ಯಾಕೆ ಈ ರೀತಿ ಆರೋಪ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ. ಆರಂಭಿಕ ವರದಿಗಳ ಪ್ರಕಾರ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ, ಅವರು (ಡಿಕೆಶಿ) ಆರೋಪಿಸಿದಂತೆ ಕೇರಳದಲ್ಲಿ ಬೇರೆಲ್ಲಿಯಾದರೂ ನಡೆದಿದೆಯೇ? ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.
ಡಿಕೆಶಿ ಹೇಳಿದ್ ಏನು..?; ಸದಾಶಿವನಗರ ನಿವಾಸದಲ್ಲಿ ಮಾತನಾಡಿದ್ದ ಅವರು, ಕೇರಳದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ದೊಡ್ಡ ಪೂಜೆ ನಡೆಯುತ್ತಿದೆ. ಶತ್ರು ಭೈರವಿಯಾಗ ಮಾಡುವ ಮೂಲಕ ಪಂಚ ಬಲಿ ಕೊಟ್ಟಿದ್ದಾರೆ.
ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿಯಾಗವಾಗಿದೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಬಲಿ ಕೊಟ್ಟಿದ್ದಾರೆ. ಇದನ್ನು ಯಾರು ಮಾಡಿಸಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು.
ಸದ್ಯ ಕೇರಳದಲ್ಲಿ ಈ ಯಾಗ ನಡೆಯುತ್ತಿದೆ. 21 ಮೇಕೆ, 21 ಕುರಿ, 3ಎಮ್ಮೆ ಬಲಿ ಕೊಡುತ್ತಿದ್ದಾರೆ. ಅಘೋರಿಗಳ ಮೂಲಕ ಯಾಗ ಮಾಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಯಾರು ಮಾಡಿಸುತ್ತಿದ್ದಾರೆ ಅಂತ ಗೊತ್ತಿದೆ. ನಮ್ಮ ಮೇಲೆ ಅವರು ಏನೇ ಪ್ರಯೋಗ ಮಾಡಿದರೂ, ನಮ್ಮ ನಂಬಿದ ಶಕ್ತಿ ನಮ್ಮನ್ನು ಕಾಪಾಡುತ್ತದೆ. ದೃಷ್ಟಿ ಆಗುತ್ತದೆ ಎಂದು ನನ್ನ ಕೈಗೆ ಖಡ್ಗ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು.
ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸು – ಪಾಸು ಚೆಕ್ ಮಾಡಿ. ನಿಮಗೇ ಗೊತ್ತಾಗುತ್ತೆ. ಮಾರಣ, ಮೋಹನ, ಸ್ಥಂಬನ. ರಾಜ ಕಂಟಕ ಯಾಗ. ಇದಕ್ಕೆ ಪ್ರತಿಯಾಗಿ ನಾನು ಯಾವುದೇ ಪೂಜೆ ಮಾಡಲ್ಲ. ನಾನು ಮನೆ ಬಿಡುವಾಗ ಪ್ರತಿ ದಿನ ಒಂದು ನಿಮಿಷ ದೇವರಿಗೆ ಕೈ ಮುಗಿಯುತ್ತೇನೆ ಎಂದು ಇದೇ ವೇಳೆ ಡಿಕೆ ಶಿವಕುಮಾರ್ ತಿಳಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….