ದೊಡ್ಡಬಳ್ಳಾಪುರ (Doddaballapura): ಕನ್ನಡಪರ ಹೋರಾಟಗಾರ, ಉದ್ಯಮಿ ಜಿಪಿ ಲೋಕೇಶ್ ಅವರು ಸಾಲಬಾಧೆಯಿಂದ ಬೇಸತ್ತು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯವಹಾರದಲ್ಲಿ ನಷ್ಟ ಉಂಟಾಗಿ ಕಳೆದೊಂದು ವಾರದಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಲೋಕೇಶ್ ಅವರಿಗೆ ಆತ್ಮೀಯರು, ಹಿತೈಷಿಗಳು ಧೈರ್ಯ ತುಂಬಿದ್ದರು.
ಆದರೆ ಸೋಮವಾರ ನಡು ರಾತ್ರಿ ಗಂಗಾಧರಪುರ ಮನೆಯ ಹೊರಗೆ ಟರ್ಪಂಟೈಲ ಸುರಿದು ಕೊಂಡಿರುವ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಇದನ್ನು ಕಂಡ ಕುಟುಂಬಸ್ಥರು, ಗೆಳೆಯರು ನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದರಾದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ಮಡದಿ, ಮಗ ಮತ್ತು ಮಗಳನ್ನು ಅಗಲಿದ್ದು, ಅಂತ್ಯ ಕ್ರಿಯೆ ಮುಕ್ತಿಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರವೇ ಶಿವರಾಮೇ ಗೌಡ ಬಣದ ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಲೋಕೇಶ್ ಅವರು ಅನೇಕ ಕನ್ನಡಪರ ಹೋರಾಟ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು ಅವರ ಅಗಲಿಕೆ ತುಂಬಲಾಗದ ನಷ್ಟ ಎಂದು ಕರವೇ ಶಿವರಾಮೇ ಗೌಡ ಬಣದ ಅಧ್ಯಕ್ಷ ಮುರುಳಾರಾಧ್ಯ ಅವರು ಕಂಬನಿ ಮಿಡಿದಿದ್ದಾರೆ.