ಚಿಕ್ಕಬಳ್ಳಾಪುರ: ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ Murder) ಅಂತ್ಯವಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ತಾಲೂಕಿನ ಅಗಲಿಗುರ್ಕಿ ಬಳಿಯಲ್ಲಿರುವ ಖಾಸಗಿ ಹೋಂಸ್ಟೇ ರೆಸಾರ್ಟ್ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ ಮೂಲದ ಮೋಹನ್ (27 ವರ್ಷ) ಮೃತ ದುರ್ದೈವಿ.
ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ ಮೂಲದ ಹರಿಧನ್, ದಿನೇಶ್ ಮತ್ತು ಧ್ಯಾನಚಂದ್ ಬಂಧಿತ ಕೊಲೆ ಆರೋಪಿಗಳು.
ಹ್ಯಾಪಿ ರಿಟ್ರೇಟ್ ಹೋಂಸ್ಟೇಯಲ್ಲಿ ಎಲ್ಲಾ ಆರೋಪಿಗಳು ಮತ್ತು ಮೃತನು 3 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಎಲ್ಲ ನಾಲ್ವರು ಮದ್ಯ ಸೇವಿಸಿದ್ದಾರೆ. ನಂತರ ಜಗಳವಾಗಿದೆ.
ಜಗಳವಾಡುವ ಸಮಯದಲ್ಲಿ ಹರಿಧನ್ ತನ್ನ ಮನೆಗೆ ಪೋನ್ ಮಾಡಿ ಮನೆಯವರ ಜೊತೆ ಮಾತನಾಡುತ್ತಿದ್ದ ವೇಳೆ ಮೃತ ಮೋಹನ್ ಹರಿಧನ್ ನ ಮೊಬೈಲ್ ಅನ್ನು ಕಸಿದುಕೊಂಡು ಹರಿಧನ್ ಬಗ್ಗೆ ಅವ ಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೋಪದ ಭರದಲ್ಲಿ, ಹರಿಧನ್ ಮರದ ತುಂಡನ್ನು ಎತ್ತಿಕೊಂಡು ಮೋಹನ್ ಕುತ್ತಿಗೆಯ ಎಡಭಾಗಕ್ಕೆ ಇರಿದಾಗ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಬೆಳಗ್ಗೆ ಬೇರೆ ಕೆಲಸದವರು ಬಂದು ನೋಡಿದಾಗ ರೂಂನಲ್ಲಿ ಮೋಹನ್ ಸಾವನ್ನಪ್ಪಿದ್ದನು.
ಸಿಸಿಕ್ಯಾಮೆರಾ ಚೆಕ್ ಮಾಡಿ ಮೋಹನ್ ಜೊತೆಗೆ ಕೆಲಸ ಮಾಡುವ ಸ್ನೇಹಿತರು ಹೊಡೆದಾಡಿರುವುದು ಕಂಡುಬಂದ ಹಿನ್ನೆಲೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ನಂದಿ ಗಿರಿಧಾಮ ಪೊಲೀಸರು ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆಸಾಗಿಸಿ, ಮೂವರನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಕೆ ಭೇಟಿ ನೀಡಿದ್ದರು.