ಬೆಂಗಳೂರು: ಜೆಡಿಎಸ್ನವರು (JDS) ಏನೇ ಹೇಳಿದರೂ ಮಾತಾಡಬೇಡಿ ಎಂದು ನಮ್ಮವರಿಗೆ ಹೇಳಿದ್ದೇನೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಮಾತನಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೋಸ್ತಿಗಳಲ್ಲಿ ಮುಂದಿನ ಸಿಎಂ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಾಲ್ಕು ಗೋಡೆ ಮಧ್ಯೆ ಕೂತು ಮಾತಾಡುವ ವಿಚಾರ ಇದು. ನಾವ್ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ. ನಮ್ಮ ರಾಷ್ಟ್ರೀಯ ನಾಯಕರು ಮೈತ್ರಿ ತೀರ್ಮಾನ ತಗೊಂಡಿದಾರೆ. ನಾವ್ಯಾರೂ ವಿರೋಧ ಮಾಡದೇ ಒಪ್ಪಿಕೊಂದ್ದೇವೆ.
ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ತಲೆ ಬಾಗಲೇಬೇಕು. ಆ ನಿರ್ಣಯ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರಿಗೆ ಅನ್ವಯ. ಜೆಡಿಎಸ್ನವರು ಏನೇ ಹೇಳಿದ್ರೂ ಮಾತಾಡಬೇಡಿ ಅಂತ ನಮ್ಮವರಿಗೆ ಹೇಳಿದ್ದೇನೆ. ಕುಮಾರಸ್ವಾಮಿ ಜೊತೆಗೂ ಮಾತಾಡೇನೆ. ಈ ನಾಲಾಯಕ್ ಸರಕಾರವನ್ನು ತೆಗೆಯುವುದೇ ನಮ್ಮ ಉದ್ದೇಶ ಎಂದರು.
ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವು ಇನ್ನೂ ಬೆಳೆಯಬೇಕು, ಸಂಘಟನೆ ಬಲಪಡಿಸಬೇಕು. ಹಲವು ವಿಚಾರವಿದೆ. ನಾನೇ ಖುದ್ದಾಗಿ ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡ್ತೀನೆ. ನಮ್ಮ ಎರಡೂ ಪಕ್ಷಗಳ ಮಧ್ಯೆ ಸಹಕಾರ ಚೆನ್ನಾಗಿದೆ. ಯಾರೋ ಒಬ್ಬಿಬ್ಬರು ಸಹಕಾರ ಇಲ್ಲ ಅಂತ ಮಾತಾಡ್ತಾರೆ ಅಂತ ಪ್ರತಿಕ್ರಿಯೆ ಕೊಡಲು ಆಗಲ್ಲ ಎಂದರು.
ಶಾಸಕರಿಗೆ ವಿದೇಶ ಪ್ರವಾಸ ಭಾಗ್ಯ ದಯಪಾಲಿಸಿದ ಮುಖ್ಯಮಂತ್ರಿಯವರು ಆರೋಗ್ಯ ಸಚಿವರನ್ನೂ ಆಸ್ಟ್ರೇಲಿಯ, ನ್ಯೂಜಿಲೆಂಡ್ಗೆ ಕಳಿಸಿದರೆ ಬಡವರ ಪರಿಸ್ಥಿತಿ ಏನಾದೀತು ಎಂದು ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಇದೀಗ ಔಷಧಿ ಸಿಗದೇ ಬಡಜನರು ಪರದಾಡುತ್ತಿದ್ದಾರೆ. ಎಷ್ಟೋಕಡೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿದ ಮಾಹಿತಿ ಬರುತ್ತಿದೆ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಇದರ ಕುರಿತು ಗಮನ ಹರಿಸಿಲ್ಲ ಎಂದು ಟೀಕಿಸಿದರು. ಸಚಿವರು, ಶಾಸಕರನ್ನು ಹೊರಕ್ಕೆ ಕಳಿಸುವ ಮುಂಚಿತವಾಗಿ ಔಷಧಿ ಸಮರ್ಪಕ ಸರಬರಾಜಿಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಜನಪ್ರಿಯತೆಯನ್ನು ಸಹಿಸಲು ಸಾಧ್ಯವಾಗದೇ ಜನೌಷಧಿ ಕೇಂದ್ರಗಳಿಗೂ ಕಲ್ಲು ಹಾಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿತ್ತು. ಗ್ರಾಮೀಣ ಭಾಗದಲ್ಲಿ ಕೃತಕವಾಗಿ ಔಷಧಿ ಕೊರತೆಯನ್ನು ಸೃಷ್ಟಿಸಿ, ಟೆಂಡರ್ ಕರೆಯದೇ ತುರ್ತು ಖರೀದಿ ಎಂದು ಕಳ್ಳ ದಂಧೆ ಮಾಡಲು ಸರಕಾರ ಹೊರಟಿದೆಯೇ ಎಂಬ ವಿಚಾರ ರಾಜ್ಯದ ಜನರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ರಾಜ್ಯ ಸರಕಾರ, ಸಚಿವರು ಎಚ್ಚತ್ತುಕೊಂಡು ಇದರ ಕುರಿತು ಗಮನ ಹರಿಸಬೇಕು. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಿಎಂ ರಾಜೀನಾಮೆ ಕುರಿತು ಸೂಕ್ಷ್ಮವಾಗಿ ತಿಳಿಸಿದ ಸುಪುತ್ರ
ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಅವರು ಶಿವರಾತ್ರಿ ಕಳೆದ ಮೇಲೆ ಡಿಕೆ ಶಿವಕುಮಾರ್ ಅವರಿಗೂ ಒಳ್ಳೆಯದಾಗಲಿದೆ; ಎಲ್ಲರಿಗೂ ಒಳ್ಳೆಯದಾಗಲಿದೆ ಎಂದಿದ್ದಾರೆ ಎಂದರಲ್ಲದೇ, ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದನ್ನು ಬಹಳ ಸೂಕ್ಷ್ಮವಾಗಿ ಮುಖ್ಯಮಂತ್ರಿಯ ಸುಪುತ್ರರು ಬಿಚ್ಚಿಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿ ರಾಜೀನಾಮೆ ಕೊಟ್ಟರೆ ತಾವು ಕ್ಯಾಬಿನೆಟ್ ಸೇರುವ ಸುಳಿವನ್ನೂ ಯತೀಂದ್ರ ಅವರು ನೀಡಿದ್ದಾರೆ ಎಂದರು.
ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇಡೀ ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ, ದ್ರೋಹ ಎಸಗಿದೆ ಎಂಬುದನ್ನು ಯತೀಂದ್ರ ಅವರು ಒಪ್ಪಿರುವುದು ಜಗಜ್ಜಾಹೀರಾಗಿದೆ ಎಂದು ನುಡಿದರು. ಅವರ ಅಂತರಾಳದ ಮಾತನ್ನು ಅವರು ಆಡಿದ್ದಾರೆ. ಜೊತೆಗೇ ನಾಡಿನ ಜನರ ನಾಡಿಮಿಡಿತವನ್ನೂ ಯತೀಂದ್ರ ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡೇ ಶಿವರಾತ್ರಿ ಬಳಿಕ ಒಳ್ಳೆಯದಾಗಲಿದೆ ಎಂಬ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಸ್ಪಷ್ಟ ಎಂದು ತಿಳಿಸಿದರು.
ಕುರಿ ಕಾಯುವವರ ಸಮಸ್ಯೆ ಪರಿಹರಿಸಿ
ಸಿದ್ದರಾಮಯ್ಯನವರಿಗೆ ಸಮುದಾಯದವರು ರಾಜಕೀಯ ಶಕ್ತಿ ಕೊಡಬೇಕು ಎಂದಿದ್ದಾರೆ. ಇನ್ನೆಷ್ಟು ರಾಜಕೀಯ ಶಕ್ತಿ ಬೇಕು ಸ್ವಾಮೀ ಎಂದು ಪ್ರಶ್ನಿಸಿದರು. ಕನಿಷ್ಠ ರಾಜ್ಯದಲ್ಲಿರುವ ಕುರಿ ಕಾಯುವವರ ಸಮಸ್ಯೆ ಪರಿಹರಿಸಿ ಎಂದು ಒತ್ತಾಯಿಸಿದರು. ಕುರಿಗಳು ಅಚಾನಕ್ ಸತ್ತಾಗ ಅನುಗ್ರಹ ಯೋಜನೆಯಡಿ ರಾಜ್ಯ ಸರಕಾರ ಪರಿಹಾರವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು. 90 ಸಾವಿರ ಕುರಿ, ಮೇಕೆಗಳು ಸತ್ತಿದ್ದು, 45 ಕೋಟಿ ಬಾಕಿ ಉಳಿದಿದೆ ಎಂದು ಗಮನ ಸೆಳೆದರು. ಕೇವಲ 30 ಸಾವಿರಕ್ಕೆ ಪರಿಹಾರ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಅದನ್ನಾದರೂ ಕೊಡಿಸಿ ಯತೀಂದ್ರ ಅವರೇ ಎಂದರು.
ಕನಿಷ್ಠ ಒಂದು ಸಾವಿರ ಕೋಟಿ ಕೊಡಿಸಿ..
ಶೋಷಿತ- ಪೀಡಿತ ಸಮುದಾಯಗಳ ಯುವಜನರ ಅಭಿವೃದ್ಧಿಗಾಗಿ ಹಿಂದೆ ಯಡಿಯೂರಪ್ಪನವರು ವಿವಿಧ ಮಂಡಳಿಗಳ ಮೂಲಕ 550 ಕೋಟಿ ನೀಡಿದ್ದರು. ನಿಮ್ಮ ತಂದೆ ಬಜೆಟ್ ಮಂಡಿಸಿದರೆ ಕನಿಷ್ಠ ಒಂದು ಸಾವಿರ ಕೋಟಿ ಕೊಡಿಸಿ ಎಂದು ಒತ್ತಾಯವನ್ನು ಮುಂದಿಟ್ಟರು. ಪರಿಶಿಷ್ಟ ವರ್ಗ, ಪಂಗಡಗಳಿಗೂ ಶಕ್ತಿ ತುಂಬಿ ಎಂದು ಆಗ್ರಹಿಸಿದರು.
ಕರಾವಳಿ ಜಿಲ್ಲೆ ಬಗ್ಗೆ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ನೀವು ಐಟಿ, ಬಿಟಿ ಸಚಿವರಾಗಿ ಕರಾವಳಿ ಜಿಲ್ಲೆಗಳಿಗೆ, ಗುಲ್ಬರ್ಗ ಜಿಲ್ಲೆಗೆ ಎಷ್ಟು ಐಟಿ ಬಿಟಿ ಕೈಗಾರಿಕೆ ತಂದಿದ್ದೀರಿ ಎಂಬುದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದರು. ಬೆಂಗಳೂರು ಬಿಟ್ಟರೆ ಕರಾವಳಿಯ ಜಿಲ್ಲೆಗಳು ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ ಎಂದು ಗಮನ ಸೆಳೆದರು.