ದೊಡ್ಡಬಳ್ಳಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಅವರು ಎನ್ಡಿಎ (ND ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿದ್ದು, ಬಿಜೆಪಿ (BJP) ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಈ ಕುರಿತಂತೆ ಈಗಾಗಲೇ ಬಿಜೆಪಿಯ ಕೆಲ ನಾಯಕರು ಕಮಲ-ದಳ ಮೈತ್ರಿ ಅಗತ್ಯವಿಲ್ಲ ಎಂಬಂತೆ ಮಾತನಾಡುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ.
ಬಿಜೆಪಿ ನಾಯಕರ ಮಾತಿಗೆ ಜೆಡಿಎಸ್ ಕಡೆಯಿಂದ ತಿರುಗೇಟು ಬರುತ್ತಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಮೈತ್ರಿಯನ್ನು ಮುಕ್ತವಾಗಿ ಇರಿಸಿಕೊಂಡಿರುವುದಾಗಿ ಸೂಚ್ಯವಾಗಿ ಹೇಳಿದರೆ, ನಿಖಿಲ್ ಕುಮಾರಸ್ವಾಮಿ ಅವರು ಮೈತ್ರಿ ಬೇಡ ಎಂದ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರದ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಅವರು, ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ದೊಡ್ಡಬಳ್ಳಾಪುರ ನಗರಸಭೆ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಿಂದ ಬಿಜೆಪಿಗೆ ಅನುಕೂಲವಾಗಿದೆಯೇ ಹೊರತು, ಜೆಡಿಎಸ್ ಅಭ್ಯರ್ಥಿಗಳು ಸ್ವಂತ ಬಲದ ಮೇಲೆ ವಿಜೇತರಾಗಿದ್ದಾರೆ.
ಜೆಡಿಎಸ್ ಪ್ರಭಾವ ಇರುವ ಹಳೆ ಮೈಸೂರು ವ್ಯಾಪ್ತಿಯಲ್ಲಿ ಬಿಜೆಪಿ ಎಂಪಿಗಳು ಗೆಲ್ಲಲು ಕಾರಣ ಜೆಡಿಎಸ್, ಇಲ್ಲವಾದರೆ ಉತ್ತರ ಕರ್ಣಾಟಕದಲ್ಲಿ ನೆಲಕಚ್ಚಿದಂತೆ ಇಲ್ಲಿಯೂ ಕೂಡ ಬಿಜೆಪಿ ಕಾಂಗ್ರೆಸ್ ಅಲೆಯ ಎದುರು ತತ್ತಿರಿಸುತ್ತಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪ್ರತಿರೋಧ ತೋರಿಸುವ ಶಕ್ತಿಯನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಹೊಂದಿದೆ. ಇದನ್ನು ಅರಿಯದೇ ಬಿಜೆಪಿ ನಾಯಕರು ಬೇಕಾಬಿಟ್ಟಿ ಮಾತನಾಡುವುದು. ಸರಿಯಲ್ಲ, ಪದೇ ಪದೇ ಜನರನ್ನು, ಹಣದಿಂದ, ವಿವಿಧ ಕಾರ್ಯಗಳ ಮೂಲಕ ಮರಳು ಮಾಡಲು ಸಾಧ್ಯವಿಲ್ಲ.
ಕೇಂದ್ರದ ವರಿಷ್ಠರು ಮೈತ್ರಿ ಧರ್ಮ ಪಾಲನೆ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಅಂತೆಯೇ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರ ಹಂಚಿಕೆ ಕುರಿತು ನೀಡಿರುವ ಮಾತಿಗೆ ಬದ್ದರಾಗಿ, ಅಧಿಕಾರ ಬಿಟ್ಟುಕೊಡುವಂತೆ ಬಿಜೆಪಿ ನಾಯಕರಿಗೆ ಆಗ್ರಹಿಸಿರುವ ಹರೀಶ್ ಗೌಡ ಅವರು, ತಾಳ್ಮೆಯನ್ನು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.