
ಮೈಸೂರು: ಮಾನ್ಯ ಉಪ ಮುಖ್ಯಮಂತ್ರಿಗಳೇ ನಿಖಿಲ್ ಏನು ಅಂತ ಮುಂದೆ ತೋರಿಸ್ತೀನಿ. ಚುನಾವಣೆಯಲ್ಲಿ ಸೋಲು- ಗೆಲುವು ಶಾಶ್ವತವಲ್ಲ. ಇದು ಪ್ರಜಾಪ್ರಭುತ್ವ ಯಾರನ್ನ ಸೋಲಿಸಬೇಕು, ಗೆಲ್ಲಿಸಬೇಕು ಅಂತ ಜನ 2028ಕ್ಕೆ ಜನ ತೀರ್ಮಾನ ಮಾಡ್ತಾರೆ ಎಂದು ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಟಾಂಗ್ ನೀಡಿದರು.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಎರಡನೇ ಹಂತದ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
7 ಲಕ್ಷದ 64ಸಾವಿರ ಕೋಟಿ ಸಾಲ ಮಾಡಿರೋದೆ ನಿಮ್ಮ ಸಾಧನೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷ ಆಗಿದೆ. ಹಾವೇರಿಯಲ್ಲಿ ಸಾವಿರ ದಿನಗಳ ಸಮಾವೇಶ ಸರ್ಕಾರದ ದುಡಲ್ಲಿ ಮಾಡಿದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಹಿರಿತನಕ್ಕೆ ಗೌರವವಿದೆ. ದಾಖಲೆ ಪ್ರಾಮಾಣದಲ್ಲಿ ಶಾಸಕರಿದ್ದಾರೆ. ಆದರೆ ನಿಮ್ಮ ದಾಖಲೆ 7 ಲಕ್ಷದ 64ಸಾವಿರ ಕೋಟಿ ಸಾಲ ಮಾಡಿರೋದೆ ನಿಮ್ಮ ಸಾಧನೆ ಎಂದು ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ಕೀರ್ತಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಗೆ ಸಲ್ಲುತ್ತೆ. ಕುಮಾರಣ್ಣ ಅವರು ಕಾಂಗ್ರೆಸ್ ಜತೆ ಸರ್ಕಾರ ಮಾಡಿದ ಸಂದರ್ಭದಲ್ಲಿ ನಾಡಿನ ರೈತರ ಸಾಲ ಮನ್ನಾ ಮಾಡಿದ್ರು, ಸಾಲ ಮನ್ನಾ ಮಾಡಿದ್ರು ಕೂಡ, ರಾಜ್ಯದ ಪ್ರಜೆಗಳನ್ನ ಸಾಲಗಾರರನ್ನಾಗಿ ಮಾಡಿಲ್ಲ ಎಂದು ಹೇಳಿದರು.
ಕುಮಾರಣ್ಣ ಮುಖ್ಯಮಂತ್ರಿ ಆಗ್ಬೇಕು ಅನ್ನೋದು ನಿಖಿಲ್ ಕುಮಾರಸ್ವಾಮಿ ಭಾವನೆಯಲ್ಲ, ನಾನು 9 ಸಾವಿರ ಕಿ.ಲೋ ರಾಜ್ಯ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಜನ ಕುಮಾರಣ್ಣ ಆಡಳಿತವನ್ನ ನೆನಸಿಕೊಂದಿರೋದನ್ನ ನಾನು ಹತ್ತಿರದಿಂದ ನೋಡಿದ್ದೇನೆ. ಅದನ್ನ ನಾನು ಮಾಧ್ಯಮಗಳಲ್ಲಿ ಹೇಳಿದೆ. ನನಗೂ ರಾಜಕೀಯ ಪ್ರಜ್ಞೆಯಿದೆ ಎಂದು ಒತ್ತಿಹೇಳಿದರು.
ಜೆಡಿಎಸ್ ರೈತರ ಪಕ್ಷ, ಕಾರ್ಯಕರ್ತರೇ ನಮ್ಮ ಪಕ್ಷದ ಬೆನ್ನೆಲುಬು
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ನಾನು ನಿಮ್ಮ ಜತೆಯಲ್ಲಿ ಇರ್ಬೇಕು ಅಂತ ಜನರೊಂದಿಗೆ ಜನತಾದಳ ಪ್ರವಾಸ ಮಾಡ್ತಿದ್ದೇನೆ.ಇವತ್ತು 25ವರ್ಷದ ಬೆಳ್ಳಿಹಬ್ಬ ಮಾಡ್ತಿದೆ ಅಂದ್ರೆ ನಿಮ್ಮ ಶ್ರಮ. ನಮ್ಮ ಪಕ್ಷದ ಕಾರ್ಯಕರ್ತರು ಯೋಧರು. ನಿಮ್ಮ ಜತೆ ನಾನಿರುತ್ತೇನೆ ಎಂದು ನಿಖಿಲ್ ಅವರು ಒತ್ತಿ ಹೇಳಿದರು.
ಜನತಾದಳಪಕ್ಷ ಇದು ನಿಮ್ಮ ಪಕ್ಷ , ರೈತರ ಪಕ್ಷ . ಕಾರ್ಯಕರ್ತರೇ ನಮ್ಮ ಪಕ್ಷದ ಬೆನ್ನೆಲುಬು. ಮೈಸೂರು ಭಾಗದಲ್ಲಿ ಪಕ್ಷವನ್ನು ಹಿಂದೆಗಿಂತಲೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟೋಣ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಾವು ನಿಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇವೆ. 2028ಕ್ಕೆ ಪಿರಿಯಾಪಟ್ಟಣದಿಂದ ನಮ್ಮ ಪಕ್ಷದ ಶಾಸಕರನ್ನು ಆಯ್ಕೆ ಮಾಡುವ ಮೂಲಕ NDA ಸರ್ಕಾರ ರಚಿಸಲು ಸಂಕಲ್ಪಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಮಾಜಿ ಶಾಸಕ ಕೆ.ಮಹದೇವ್, ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ವಿವೇಕಾನಂದ, ಮಂಜೇಗೌಡ, ಪ್ರಸನ್ನ ಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ಜತೆಯಲ್ಲಿದ್ದರು.