ಬೆಂಗಳೂರು: “ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಕಟ್ಟುವ ಬದಲು ಅದನ್ನು ರೈತರಿಗೆ ಹಂಚಲಾಗುತ್ತಿದೆ. ಅಧಿಕಾರಿಗಳು ಆದಾಯ ತೆರಿಗೆ ಕಟ್ಟಬೇಕು ಎಂದರು. ನಾನು ಲಾಭ ತೋರಿಸಿದರೆ ಮಾತ್ರ ಅಲ್ಲವೇ ತೆರಿಗೆ ಕಟ್ಟಬೇಕು. ನಮ್ಮ ರೈತರ ಹಣ ರೈತರಿಗೆ ಮರಳಿ ಹೋಗಬೇಕು ಎಂದು 60 ಕೋಟಿ ಹಣವನ್ನು ಮರಳಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh) ಹೇಳಿದರು.

ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಬುಧವಾರ ನಡೆದ ಬಮೂಲ್ ಒಕ್ಕೂಟ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಿಶೇಷ ಪ್ರೋತ್ಸಾಹ ಧನದ ಚೆಕ್ ವಿತರಣಾ ಸಮಾರಂಭದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮಾತನಾಡಿದರು.
“ನಾನು ಲಾಭ ತೋರಿಸಿಲ್ಲ. 1,28,400 ರೈತರಿಗೆ 1 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡುತ್ತಿದ್ದೇನೆ. 2025 ರ ಏಪ್ರಿಲ್ 1 ರಿಂದ 2026 ಮಾರ್ಚ್ 31 ರವರೆಗೆ ಲೆಕ್ಕಾಚಾರ ಹಾಕಿ ಪ್ರೋತ್ಸಾಹ ಧನ ನೀಡಲಾಗಿದೆ. ಆನೇಕಲ್, ಬೆಂಗಳೂರು ದಕ್ಷಿಣ, ಕನಕಪುರಕ್ಕೆ ಮೊದಲು ನೀಡಲಾಗಿದೆ ಏಕೆಂದರೆ ಇವರು ಎಲ್ಲಾ ದತ್ತಾಂಶಗಳನ್ನು ಮೊದಲಿಗೆ ಸಲ್ಲಿಕೆ ಮಾಡಿದ್ದರು. ಯಾರಿಗೂ ಮೋಸವಾಗದಂತೆ ಪ್ರತಿಯೊಬ್ಬರಿಗೂ ಹಣ ತಲುಪಿಸಬೇಕು. ಇದಕ್ಕೆ ರೈತರೇ ಜವಾಬ್ದಾರರು” ಎಂದರು.
“ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡು ಹೊಸ ನಿಯಮಗಳನ್ನು ಮಾಡಿ ಬಮುಲ್ 70 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಕೆಎಂಎಫ್ 180 ಕೋಟಿ ಲಾಭ ಗಳಿಸಿದೆ. ಆದರೆ 60- 70 ಕೋಟಿ ಆದಾಯ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿದೆ. ಇದು ಯಾರ ಹಣ? ಬೆವರು ಸುರಿಸಿ ದುಡಿದ ನಮ್ಮ ರೈತರ ಹಣ. ಆಗ ನಾನು ಅಧಿಕಾರಿಗಳಿಗೆ ಹೇಳಿದೆ. ನಿಮಗೆ ಯಾರಿಗೂ ಲೆಕ್ಕಾಚಾರ ಗೊತ್ತಿಲ್ಲ ಎಂದು ಹೇಳಿದ್ದೇ” ಎಂದರು.
ಹಾವುಗಳಿಗಿಂತ ಇಲಿ ಹೆಗ್ಗಣ, ಇರುವೆಗಳು ಹೆಚ್ಚಿವೆ
“ಬಮುಲ್ ಈ ಹಿಂದೆ ಹೇಗೆ ಕಾರ್ಯನಿರ್ವಹಣೆ ಮಾಡುತ್ತಾ ಇತ್ತು ಎನ್ನುವ ವ್ಯಾಖ್ಯಾನ ಬೇಡ. ಮುಂದಿನ ಪ್ರಗತಿಯ ಬಗ್ಗೆ ಮಾತ್ರ ಚಿಂತನೆ ಬೇಕು. ರೈತರ ಉದ್ದಾರದ ಬಗ್ಗೆ ಆಲೋಚನೆ ಮಾಡಬೇಕು. ನನ್ನ ನಂಬಿದ ನಾಯಕರ ನಂಬಿಕೆ ಉಳಿಯಬೇಕು” ಎಂದರು.
“ಬಮುಲ್ ಬಗ್ಗೆ ಇನ್ನೂ ತಿಳಿದುಕೊಳ್ಳುತ್ತಲೇ ಇದ್ದೇನೆ. ಹಾವು ಬುಸುಗುಡುತ್ತಾ ಓಡಾಡಿದರೆ ಎಚ್ಚರಿಕೆವಹಿಸಬಹುದು. ಆದರೆ ಇಲ್ಲಿ ಇಲಿ ಹೆಗ್ಗಣಗಳು ಸೇರಿಕೊಂಡಿವೆ. ಜೊತೆಗೆ ಇರುವೆಗಳ ಗೂಡೇ ಇದೆ. ಒಂದೊಂದು ಇರುವೆಯನ್ನು ಪೈಸೆಗೆ ಹೋಲಿಸಿದರೂ ಕೋಟಿ ಲೆಕ್ಕಾಚಾರ. ಆದರೂ ಮುಖಂಡರುಗಳು ಇನ್ನೂ ಇದೆ ಎನ್ನುತ್ತಾರೆ” ಎಂದು ಮಾರ್ಮಿಕವಾಗಿ ನುಡಿದರು.
ಬಮುಲ್ ನಷ್ಟದಿಂದ ಲಾಭಕ್ಕೆ
“ಸರ್ಕಾರ ಹಾಲಿನ ಬೆಲೆಯನ್ನು 4 ರೂಪಾಯಿ ಹೆಚ್ಚಳ ಮಾಡಿತು ಆದರೆ ಈ ಹಣವನ್ನು ನೇರ ರೈತರಿಗೆ ನೀಡಬೇಕು ಎಂದು ತಿಳಿಸಿತು. ಈ ಸಂದರ್ಭದಲ್ಲಿ 14 ಹಾಲು ಒಕ್ಕೂಟಗಳಿಂದ 1.5 ಕೋಟಿ ಲೀಟರ್ ಹಾಲನ್ನು ನಾವು ಸಂಗ್ರಹ ಮಾಡುತ್ತಿದ್ದೆವು. ಬಮುಲ್ 18 ಲಕ್ಷ ಲೀ. ಹಾಲು ಸಂಗ್ರಹ ಮಾಡುತ್ತಿತ್ತು. ನೇರ ಹಾಲಿನ ಮಾರಾಟ 9-10 ಲಕ್ಷ ಲೀಟರ್ ಮಾತ್ರ. ಮಿಕ್ಕ 8 ಲಕ್ಷ ಲೀಟರ್ ಹಾಲಿಗೆ 4 ರೂಪಾಯಿಯನ್ನು ಒಕ್ಕೂಟವೇ ಪಾವತಿ ಮಾಡಬೇಕಾಗಿತ್ತು. ಇದರಿಂದ ತಿಂಗಳಿಗೆ 10 ಕೋಟಿ ರೂ. ನಷ್ಟ ಅಂದಾಜು ಮಾಡಲಾಗಿತ್ತು. ಆಗ ನಿರ್ದೇಶಕರು ಹಣ ಕಡಿತದ ಬಗ್ಗೆ ಹೇಳಿದರು. ನಾನು ಯಥಾಸ್ಥಿತಿ ಮುಂದುವರೆಯುಲಿ ಎಂದು ಮನವಿ ಮಾಡಿದೆ. ನಂತರ ಎಲ್ಲಾ ವಿಭಾಗಗಳ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ. ಕಳೆದ ಡಿಸೆಂಬರ್ ನಲ್ಲಿ 3 ಕೋಟಿ ರೂ. ಲಾಭ ಮಾಡಿದೆವು. ನಂತರ ಕ್ರಮೇಣ ತಿಂಗಳಿಗೆ 10 ಕೋಟಿ ರೂ.ಗೆ ತಲುಪಿದೆವು” ಎಂದರು.
“ಒಂದು ಲೀಟರ್ ಹಾಲಿನ ಪುಡಿ ಮಾಡಿದರೆ 7 ರೂಪಾಯಿ ನಷ್ಟವಾಗುತ್ತದೆ. ಎಲ್ಲಾ ಹಾಲು ಒಕ್ಕೂಟಗಳಿಗೆ ಹೋಲಿಸಿದರೆ ಬಮುಲ್ ನಲ್ಲಿ ಉತ್ಪಾದನಾ ವೆಚ್ಚ ಹೆಚ್ಚಿದೆ. 300 ರೂಪಾಯಿಗಿಂತ ಹೆಚ್ಚು ದರಕ್ಕೆ ಮಾರಾಟ ಮಾಡಿದರೆ ಮಾತ್ರ ಹಾಲಿನ ಪುಡಿ ಲಾಭ ಮಾಡಬಹುದು. ಆದರೆ ಸರ್ಕಾರಿ ಸಂಸ್ಥೆ ಕಡಿಮೆಗೆ ನೀಡಬೇಕು. ಜೊತೆಗೆ ಗುಣಮಟ್ಟ ಉಳಿಸಿಕೊಳ್ಳಬೇಕು ಎಂಬುದು ನಮ್ಮ ಧ್ಯೇಯ” ಎಂದರು.
“6 ಸಾವಿರ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಿದರೆ, ಒಂದೊಂದು ಕೇಂದ್ರದಿಂದ 200 ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾದರೆ, 20 ಲಕ್ಷ ಹಾಲು ಉತ್ಪಾದನೆ ಕಷ್ಟವೇನಲ್ಲ. ಮಂಡ್ಯದಿಂದ 75 ಸಾವಿರ, ಶಿವಮೊಗ್ಗ ವಿಭಾಗದಿಂದ 50 ಸಾವಿರ, ಖಾಸಗಿಯವರಿಂದ ವಾರಕ್ಕೆ 1.5 ಲಕ್ಷ ಲೀಟರ್ ಹಾಲು ಪಡೆಯಲಾಗುತ್ತಿದೆ. ಅದರ ಬದಲು ನಮ್ಮ ರೈತರೇ ಹೆಚ್ಚು ಹಾಲು ನೀಡುವಂತಾಗಬೇಕು. ಕನಕಪುರವೊಂದರಲ್ಲೇ 12 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಗುರಿ ಹೊಂದಲಾಗಿದೆ” ಎಂದು ತಿಳಿಸಿದರು.
ಬಮುಲ್ ನಿಂದ ಜಾನುವಾರು ವಿಮೆ
ಬೇರೆ ಕಂಪೆನಿಗಳಿಗೆ ವಿಮೆ ನೀಡುವ ಬದಲು ಬಮುಲ್ ನಿಂದಲೇ ಜಾನುವಾರು ವಿಮೆಯನ್ನು ಈ ವರ್ಷದಿಂದ ನೀಡಲಾಗುವುದು. 60-80 ಸಾವಿರಕ್ಕೆ ಒಂದು ದರ, 1 ಲಕ್ಷದ ಮೇಲೆ ಇನ್ನೊಂದು ದರ ಹೀಗೆ ಚರ್ಚೆ ಮಾಡಿ ನಿಗದಿ ಮಾಡಲಾಗುವುದು. ರೈತರು ಒಳ್ಳೆಯ ಬ್ರೀಡ್ ಹಸುಗಳನ್ನು ಸಾಕಿ 15,20 ಲೀಟರ್ ಗಿಂತ ಹೆಚ್ಚು ಹಾಲು ಪಡೆದರೆ ಲಾಭ ಕಾಣಬಹುದು ಎಂದು ನಾವು ಈ ವಿಚಾರವಾಗಿ ಮಾರ್ಗದರ್ಶನ ನೀಡುತ್ತಿದ್ದೇವೆ” ಎಂದರು.
ಸೊಸೈಟಿಗಳಿಂದ ಅಂಗಡಿ ತೆರೆಯಲು ಅನುಮತಿ
“ಸಿಬ್ಬಂದಿಗಳಿಗೆ ಎಲ್ಲಾ ಉತ್ಪನ್ನಗಳ ಉಡುಗೊರೆ ನೀಡಲಾಗುತ್ತಿದೆ. ಏಕೆಂದರೆ ಪ್ರತಿ ಊರಿನಲ್ಲೂ ನಂದಿನಿಯ ಚಾಕೊಲೇಟ್, ಬಿಸ್ಕತ್ತ್ ಸೇರಿದಂತೆ ಇತರೇ ಉತ್ಪನ್ನಗಳ ಮಾರುಕಟ್ಟೆ ಸೃಷ್ಟಿ ಮಾಡಬೇಕು. 2295 ಸೊಸೈಟಿಗಳಿಂದ ಪ್ರತಿ ತಿಂಗಳು 10- 20 ಸಾವಿರ ವ್ಯಾಪಾರ ಮಾಡಿದರೆ ಒಕ್ಕೂಟದ ಲಾಭ ತಿಂಗಳಿಗೆ 10 ಕೋಟಿ ರೂ. ಹೆಚ್ಚಾಗಲಿದೆ. ಸೊಸೈಟಿಗಳ ಅಡಿಯಲ್ಲಿ ಹಾಲು ಮೊಸರು ಹೊರತಾಗಿ ಉತ್ಪನ್ನಗಳ ಮಾರಾಟಕ್ಕೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು” ಎಂದರು.
“ಎಲ್ಲರೂ ಮುಂದಿನ ಎರಡು ತಿಂಗಳಲ್ಲಿ ಜಿಎಸ್ ಟಿ ರಿಜಿಸ್ಟ್ರೇಷನ್ ಮಾಡಿಸಬೇಕು. ಏಕೆಂದರೆ ಹಾಲು ಹೊರತಾಗಿ ಮಿಕ್ಕ ಉತ್ಪನ್ನಗಳಿಗೆ ಜಿಎಸ್ ಟಿ ಇದೆ. ಟಿಡಿಎಸ್ ಕಟ್ ಮಾಡಿ ಸಂಘಗಳಿಗೆ ಹಣ ನೀಡಿದರೂ ಜಿಎಸ್ ಟಿ ಇಲ್ಲದೇ ಇರುವುದು ತೊಂದರೆಯಾಗುತ್ತಿದೆ. 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ಮಾಡಿದರೆ ಜಿಎಸ್ ಟಿ ಅವರು ಬಂದು ಕಿರುಕುಳ ನೀಡಬಹುದು” ಎಂದರು.
“ನಾನು ಅಧ್ಯಕ್ಷ ಆಗುತ್ತಿದ್ದಂತೆ ರೈತರಿಗೆ ನನ್ನ ಮೇಲೆ ಭರವಸೆ ಬಂದಿದೆ. ಏನಾದರೂ ಸಹಾಯ ಮಾಡುತ್ತೇನೆ ಎಂದು ನಂಬಿದ್ದಾರೆ. ಜೊತೆಗೆ ಸಿಬ್ಬಂದಿ ವರ್ಗದವರು ಕೂಡ ಬದಲಾವಣೆ ಕಾಣುತ್ತೇವೆ ಎಂದು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾನು ನೀಡಿದ ಸೂಚನೆಗಳನ್ನು ಸಿಬ್ಬಂದಿ ವರ್ಗ ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಅವರಿಗೆ ಕೋಟಿ ವಂದನೆಗಳು. ನಾನು ನಿಮಗೆ ಹಿಂದೆಯೊಂದು ಮುಂದೆಯೊಂದು ಮಾಡುವವನಲ್ಲ. ನಿಮ್ಮ ಪರವಾಗಿ ಇರುವವನು. ಜಿಲ್ಲಾ ಮಟ್ಟದ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದ್ದೇನೆ. ಏಕೆಂದರೆ ನಾನು ಅವರಿಗೆ ಆರು ತಿಂಗಳ ಕಾಲಾವಕಾಶ ನೀಡಿದ್ದೇ. ಆದರೆ ಈಗ ನನ್ನ ತಾಳ್ಮೆ ಮೀರಿದೆ. ಆದರೂ ಅವರಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.
“ಬಮುಲ್ ಭವಿಷ್ಯದಲ್ಲಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಚರ್ಚೆ ನಡೆಸಲು ನಾವು ಸೇರಿದ್ದೇವೆ. ಈ ಸಂದರ್ಭದಲ್ಲಿ ನೀವು ನನ್ನನ್ನು ಹೊಗಳಿ ಹೊಡೆಯುತ್ತಿರುವ ಚಪ್ಪಾಳೆಗಳು ನನ್ನ ಜವಾಬ್ದಾರಿ ಹೆಚ್ಚಿಸಿದೆ. ನೀವು ಕೊಟ್ಟ ಜವಾಬ್ದಾರಿಯಿಂದ ನನಗೆ ನಿದ್ದೆ ಬರುತ್ತಿಲ್ಲ” ಎಂದರು.
“ಕಳೆದ 20-25 ವರ್ಷಗಳಿಂದ ಕೆಎಂಎಫ್, ಬಮುಲ್ ಗೆ ಯಾರು ನಿರ್ದೇಶಕರಾಗಬೇಕು, ಅಧ್ಯಕ್ಷರಾಗಬೇಕು ಎಂದು ಸೂಚಿಸುತ್ತಾ ಬಂದಿದ್ದೆ. ನಮಗಾಗಿ ದುಡಿಯುವ ನಾಯಕರಿಗೆ ಮೀಸಲಾದ ಸ್ಥಾನದಲ್ಲಿ ನಾನು ಕುಳಿತುಕೊಳ್ಳುವುದು ಸರಿಯಲ್ಲ ಎಂದು ಭಾವಿಸಿದ್ದೆ. ಆದರೆ ಶಾಸಕರಾದ ರವಿ, ಬಾಲಕೃಷ್ಣ, ಶರತ್ ಬಚ್ಚೇಗೌಡ, ಸೋಮಶೇಖರ್ ಅವರು ಸೇರಿದಂತೆ ಅನೇಕ ಮುಖಂಡರು ನನಗೆ ಒತ್ತಾಯ ಮಾಡಿದರು. ಕನಕಪುರದಿಂದ ಬಮುಲ್ ಚುನಾವಣೆಗೆ ನಿಂತು ಕಳೆದ 9 ತಿಂಗಳಿನಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ಒಂದಷ್ಟು ಕಾಲ ವಿಶ್ರಾಂತಿಯಿಂದ ಇರಬೇಕು ಎಂದು ಬಯಸಿದ್ದೆ” ಎಂದರು.