ದೊಡ್ಡಬಳ್ಳಾಪುರ: ನಮ್ಮ ಯಾವುದೇ ಕೆಲಸಕ್ಕೆ ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ಆದರೆ ಇಂದು ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೇ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ (D. Srikanth) ಕಳವಳ ವ್ಯಕ್ತಪಡಿಸಿದರು.

ನಗರದ ಮುಖ್ಯರಸ್ತೆಯ ಬಸವೇಶ್ವರ ದೇವಾಲಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಲಾಗಿರುವ 21 ದಿನಗಳ ಮಕ್ಕಳ ಉಚಿತ ವಸಂತ ಯೋಗ ಮತ್ತು ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ಆದರೆ ಇಂದು ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೇ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ, ಈ ನಿಟ್ಟಿನಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುವ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿಸಬೇಕಿದೆ ಎಂದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಮುಖ ಯೋಜ ಶಿಕ್ಷಕ ಎನ್.ವೆಂಕಟೇಶ್ ಮಾತನಾಡಿ, ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುವ ಪ್ರಾಚೀನ ಭಾರತದ ಜೀನ ಕ್ರಮವಾಗಿದೆ. ಪತಂಜಲಿ ಮಹರ್ಷಿಗಳಿಂದ ಪ್ರತಿಪಾದಿತವಾದ, ಆಸನ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಮನಸ್ಸಿನ ಶಾಂತಿ ಹಾಗೂ ದೇಹದ ಸದೃಢತೆಯನ್ನು ಸಾಧಿಸುವ ಮಾರ್ಗವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ದಿಸೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಯೋಗವನ್ನು ಕಲಿಸಿಕೊಡಲಾಗುತ್ತಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ನಮ್ಮ ಸಂಸ್ಖೃತಿ , ಪರಂಪರೆಗಳನ್ನು ಪರಿಚಯಿಸುವುದು ಮುಖ್ಯವಾಗಿದ್ದು, ಯೋಗದ ಜೊತೆಗೆ ಸಂಸ್ಕಾರ ಕಲಿಯುವುದು ಸಹ ಮುಖ್ಯವಾಗಿದೆ. ಹೀಗಾಗಿ ಯೋಗದ ಜೊತೆಗೆ ಸಂಸ್ಕಾರ, ಧ್ಯಾನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಎಸ್.ಎ.ಶೈಲಜ, ಶಿವರಾಜಮ್ಮ ಮೊದಲಾದವರು ಹಾಜರಿದ್ದರು.
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ

ನವದೆಹಲಿ: ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ (Asha Bhosle) ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಭೋಂಸ್ಲೆ ಅವರನ್ನು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ನನ್ನ ತಾಯಿ ಇಂದು ನಿಧನರಾದರು. ಸಾರ್ವಜನಿಕರಿಗೆ ನಾಳೆ ಬೆಳಿಗ್ಗೆ 11 ಗಂಟೆಗೆ ಅವರು ವಾಸಿಸುತ್ತಿದ್ದ ಲೋವರ್ ಪರೇಲ್ನ ಕಾಸಾ ಗ್ರಾಂಡೆಯಲ್ಲಿ ಅಂತಿಮ ನಮನ ಸಲ್ಲಿಸಬಹುದು. ಅವರ ಅಂತ್ಯಕ್ರಿಯೆಯನ್ನು ನಾಳೆ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ನಲ್ಲಿ ನಡೆಸಲಾಗುವುದು” ಎಂದು ಭೋಸ್ಲೆ ಅಗಲಿಕೆಯನ್ನು ಅವರ ಪುತ್ರ ಆನಂದ್ ಭೋಸ್ಲೆ ಸುದ್ದಿಯನ್ನು ದೃಢಪಡಿಸಿದ್ದಾರೆ.
ಭೋಸ್ಲೆ ಅವರು ಸೆಪ್ಟೆಂಬರ್ 8, 1933 ರಂದು ಮಹಾರಾಷ್ಟ್ರದ ಸಾಂಗ್ಲಿಯ ಗೋರ್ನಲ್ಲಿ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಅವರ ಪತ್ನಿ ಶೇವಂತಿಗೆ ಜನಿಸಿದರು. ಪಂಡಿತ್ ದೀನನಾಥ್ ಒಬ್ಬ ಶಾಸ್ತ್ರೀಯ ಗಾಯಕ ಮತ್ತು ನಟರಾಗಿದ್ದರು.
ತಂದೆಯ ಅಗಲಿಕೆ ತರುವಾಯ, ಕುಟುಂಬವು ಕೊಲ್ಹಾಪುರಕ್ಕೆ ಮತ್ತು ನಂತರ ಮುಂಬೈಗೆ ಸ್ಥಳಾಂತರಗೊಂಡಿತು, ಅಲ್ಲಿ ಭೋಂಸ್ಲೆ ಮತ್ತು ಅವರ ಅಕ್ಕ ಲತಾ ಮಂಗೇಶ್ಕರ್ ಅವರು ಚಲನಚಿತ್ರಗಳಲ್ಲಿ ಗಾಯಕರು ಮತ್ತು ನಟರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 1943 ರ ಹೊತ್ತಿಗೆ, ಅವರು ಮಜಾ ಬಾಲ್ ಎಂಬ ಮರಾಠಿ ಚಿತ್ರಕ್ಕಾಗಿ “ಚಲಾ ಚಲಾ ನವ್ ಬಾಲಾ” ಎಂಬ ಜನಪ್ರಿಯ ಹಾಡನ್ನು ಧ್ವನಿಮುದ್ರಣ ಮಾಡುತ್ತಿದ್ದರು.
ಗಾಯಕಿಯಾಗಿ ಭೋಂಸ್ಲೆ ಅವರು ಹಿಂದಿ ಚಲನಚಿತ್ರಗಳಲ್ಲಿ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು, ಆದಾಗ್ಯೂ “ಅಂಧೋನ್ ಕಿ ದುನಿಯಾ” ಚಿತ್ರದಲ್ಲಿನ ಅವರ ಹಾಡುಗಳು ಅದೇ ವರ್ಷ ಚುನಾರಿಯಾಕ್ಕಿಂತ ಮೊದಲು ಬಿಡುಗಡೆಯಾದವು. ಅವರ ಮೊದಲ ಏಕವ್ಯಕ್ತಿ ಹಿಂದಿ ಚಲನಚಿತ್ರ ಗೀತೆ 1949 ರಲ್ಲಿ ರಾತ್ ಕಿ ರಾಣಿಗಾಗಿತ್ತು.
ದೊಡ್ಡಬಳ್ಳಾಪುರ: ಡೈರಿಗಳಲ್ಲಿ ಫೀಡ್ ಕೊರತೆ.. ರೈತರ ಪರದಾಟ..!

ದೊಡ್ಡಬಳ್ಳಾಪುರ: ತಾಲೂಕಿನ ಹಾಲು ಉತ್ಪಾದಕರ ಸಹಾಕರ ಸಂಘಗಳ ಡೈರಿಗಳಲ್ಲಿ (Dairies) ಫೀಡ್ (feed) ಕೊರತೆ ಎದುರಾಗಿದ್ದು, ರೈತರು ಪರದಾಡುತಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿ (KMF) ರೈತರಿಗಾಗಿ ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಗುಣಮಟ್ಟದ ಪಶು ಆಹಾರವನ್ನು (Cattle Feed) ಪೂರೈಸುತ್ತದೆ. ಇದು ಹಸುಗಳ ಆರೋಗ್ಯ ಮತ್ತು ಹಾಲಿನ ಇಳುವರಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸಮತೋಲಿತ ಪಶು ಆಹಾರವಾಗಿದೆ.
ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮೇವು ಮತ್ತು ಆಹಾರವನ್ನು ಒದಗಿಸಿ, ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಡೈರಿ ಫೀಡ್ ಕೊರತೆಯಿಂದ ರೈತರು ಪರದಾಡುವಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಡೈರಿಗಳಲ್ಲಿ ಫೀಡ್ ದಾಸ್ತಾನು ಇಲ್ಲವಾಗಿದೆ. ಏಪ್ರಿಲ್ 1 ರಿಂದ ಇಂಡೆಂಟ್ ಹಾಕಲಾಗುತ್ತಿದ್ದರು ಪೂರೈಕೆ ಇಲ್ಲವಾಗಿದೆ.
ಫೀಡ್ ಕೊರತೆಯಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ. ಈ ಕುರಿತು ಡೈರಿಗಳ ಬಳಿ ಅಲೆದು ಅಲೆದು ಸಾಕಾಗಿದ್ದು, ಯಾವ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ ಎಂದು
ಯುವ ರೈತ ಮಲ್ಲೋಹಳ್ಳಿ ಪುನೀತ್ ಗೌಡ ಅಳಲು ತೋಡಿಕೊಂಡಿದ್ದಾರೆ.
ತ್ವರಿತ ಪೂರೈಕೆಗೆ ಸೂಚನೆ
ಈ ಕುರಿತಂತೆ ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಡೈರಿ ಕಾರ್ಯದರ್ಶಿಗಳು ಮಾರ್ಚ್ ತಿಂಗಳಲ್ಲಿ ದಾಸ್ತಾನು ಮಾಡಿಕೊಳ್ಳದ ಕಾರಣ ಫೀಡ್ಗಳಲ್ಲಿ ಅಭಾವ ಉಂಟಾಗಿದೆ.
ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಏಪ್ರಿಲ್ ತಿಂಗಳಲ್ಲಿ ಏಕಾಏಕಿ 23 ಸಾವಿರ ಟನ್ ಫೀಡ್ಗೆ ಇಂಡೆಂಟ್ ಹಾಕಿರುವ ಕಾರಣ ರಾಜಾನುಕುಂಟೆ ಘಟಕದಿಂದ ಪೂರೈಕೆ ಮಾಡಲು ವಿಳಂಬವಾಗುತ್ತಿದೆ.
ಸಾಂಗ್ಲಿ ಘಟಕದಿಂದ ಫೀಡ್ ಪೂರೈಕೆಗೆ ಸಿದ್ಧವಿದ್ದರು, ಸ್ಥಳೀಯ ಹಸುಗಳಿಗೆ ಫೀಡ್ ಹೊಂದದ ಕಾರಣ ತಡೆಹಿಡಿಯಲಾಗಿದೆ. ಆದಾಗ್ಯೂ ರಾಜಾನುಕುಂಟೆ ಘಟಕದಿಂದ ಹೆಚ್ಚುವರಿ ಉತ್ಪಾದನಗೆ ಒತ್ತು ನೀಡಿ, ತ್ವರಿತವಾಗಿ ರೈತರಿಗೆ ಫೀಡ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬಿ.ಸಿ. ಆನಂದ್ ಕುಮಾರ್ ಅವರು ತಿಳಿಸಿದ್ದಾರೆ.