ಬೆಂಗಳೂರು: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ಎರಡು ವರ್ಷಗಳ ನಂತರ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು, ಇದೇ ಮೊದಲ ಬಾರಿಗೆ ಸೋಮವಾರ ವಿಧಾನಸೌಧಕ್ಕೆ ತೆರಳಿ ರಾಜ್ಯ ಸರ್ಕಾರದ ಬೃಹತ್ ಕೈಗಾರಿಕೆ ಖಾತೆ ಸಚಿವ ಎಂ.ಬಿ. ಪಾಟೀಲ್ (M.B. Patil) ಅವರೊಂದಿಗೆ ಕೈಗಾರಿಕೆ ಅಭಿವೃದ್ಧಿಯ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.

ವಿಧಾನಸೌಧದಲ್ಲಿರುವ ಸಚಿವ ಎಂ.ಬಿ. ಪಾಟೀಲ್ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದಲ್ಲಿ ಉದ್ಯಮಗಳನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿಯವರು ವಿಸ್ತೃತವಾಗಿ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು. ಇವರ ಜೊತೆ ಮಂಡ್ಯದ ಜನಪ್ರತಿನಿಧಿಗಳು ಹಾಗೂ ಮಾಜಿ ಮಂತ್ರಿಗಳು, ಮಾಜಿ ಶಾಸಕರು ಭಾಗಿಯಾಗಿದ್ದರು.
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು ಹೇಳಿದ್ದು ಎಷ್ಟು; ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಹಂಚಿಕೆ ಮಾಡುವ ಬಗ್ಗೆ ಈಗಾಗಲೇ ಹಲವು ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡಲಾಗಿದೆ. ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ನೀವೇ ಒಂದು ಸಭೆಯನ್ನು ಕರೆಯಿರಿ, ನಾನು ಕೂಡ ಬರುತ್ತೇನೆ ಎಂದು ಎಂ.ಬಿ. ಪಾಟೀಲ್ ಅವರಿಗೆ ಹೇಳಿದ್ದೆ. ಅದರಂತೆ ಅವರು ಸಭೆ ಕರೆದಿದ್ದರು ಹಾಗೂ ಆ ಸಭೆಯಲ್ಲಿ ಬಹಳ ಉತ್ತಮ ರೀತಿಯಲ್ಲಿ ಚರ್ಚೆಗಳು ನಡೆದವು. ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ತಿಳಿಸಿದರು
ARAI ಕೇಂದ್ರ ಸ್ಥಾಪನೆ ಬಗ್ಗೆ ವಿಸ್ತೃತ ಚರ್ಚೆ
ನನ್ನ ನಿರ್ವಹಣೆಯ ಬೃಹತ್ ಕೈಗಾರಿಕೆ ಇಲಾಖೆಯ ಅಧೀನದಲ್ಲಿ ಬರುವ ಆಟೋಮೋಟಿವ್ ರಿಸರ್ಚ್ ಇನ್ಸ್ಟಿಟ್ಯೂಟ್ (The Automotive Research Association of India-ARAI) ಪರೀಕ್ಷಾ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತಹ ಕೇಂದ್ರಗಳು ಇಡೀ ರಾಷ್ಟ್ರದಲ್ಲಿ ನಾಲ್ಕು ಕಡೆ ಮಾತ್ರ ಇವೆ. ಐದನೇ ಕೇಂದ್ರವನ್ನು ಕರ್ನಾಟಕಕ್ಕೆ ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ.
ನಮ್ಮ ಇಲಾಖೆಗೆ ಸಂಭಂದಿಸಿದ ARAI
ಅಂತಾರಾಷ್ಟ್ರೀಯ ಮಟ್ಟದ ಟೆಸ್ಟಿಂಗ್ ಕೇಂದ್ರ ಆಗಬೇಕಿದೆ. ಈ ಟೆಸ್ಟಿಂಗ್ ಕೇಂದ್ರದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಅತಿ ಹೆಚ್ಚು ಉತ್ತೇಜನ ದೊರೆಯಲಿದೆ. ಈ ಬಗ್ಗೆ ಸಚಿವರೊಂದಿಗೆ ವ್ಯಾಪಕ ನೆಲಗಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ARAI ಕೇಂದ್ರವು ಸೇರಿದಂತೆ ಅದಕ್ಕೆ ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವ ಉದ್ದೇಶದಿಂದ ಸುಮಾರು 500-600 ಎಕರೆ ಭೂಮಿ ಬೇಕಿದೆ. ಅದು ನನ್ನ ಲೋಕಸಭಾ ಕ್ಷೇತ್ರ ಮಂಡ್ಯದಲ್ಲೇ ಆಗಬೇಕು ಎಂದು ನಿರ್ಧರಿಸಿದ್ದೇನೆ. ಯಾರ ಯಾರ ಹೃದಯದಲ್ಲಿ ಏನೇನಿದೆ ಎನ್ನುವುದು ನನಗೇನು ಗೊತ್ತು? ಮಂಡ್ಯದ ಜನತೆಯ ಖುಣ ತೀರಿಸಬೇಕಿದೆ ನಾನು. ಅಷ್ಟೇ ಅಲ್ಲದೆ ಎಂಬಿ ಪಾಟೀಲ್ ಅವರು ಭರವಸೆ ನೀಡಿದಂತೆ ಉತ್ತಮ ಸಹಕಾರ ನೀಡಿದ್ದೆ ಆದರೆ ರಾಜ್ಯಕ್ಕೆ ಮತ್ತಷ್ಟು ಕೈಗಾರಿಕೆಗಳನ್ನು ತರಬಹುದು ಎಂದರು ಕೇಂದ್ರ ಸಚಿವರು.
ARAI ಕೇಂದ್ರಕ್ಕೆ ಈಗಾಗಲೇ ಎರಡು ಮೂರು ಜಾಗ ನೋಡಿದ್ದೇವೆ. ಅಲ್ಲಿ ಲಭ್ಯವಿರುವ ಜಾಗ ಬಹಳ ಸೀಮಿತವಾಗಿದೆ. ಆ ಅಂಶದ ಬಗ್ಗೆಯೂ ರಾಜ್ಯದ ಕೈಗಾರಿಕಾ ಸಚಿವರ ಜತೆ ಚರ್ಚಿಸಲಾಯಿತು. ಕೈಗಾರಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಮಾನಂತರವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಏಪ್ರಿಲ್ 30 ತಾರೀಖಿನ ಒಳಗಡೆ ಜಾಗದ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಸಚಿವರನ್ನು ಕೋರಿದ್ದೇನೆ. ಏಕೆಂದರೆ ಮೇ ತಿಂಗಳಲ್ಲಿ ಟೆಸ್ಟಿಂಗ್ ಕೇಂದ್ರ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸುವ ಉದ್ದೇಶವನ್ನು ನನ್ನ ಸಚಿವಾಲಯ ಹೊಂದಿದೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ನಾನು ಕೂಡ ಭೂಮಿ ಬಗ್ಗೆ ಒಂದು ಸಲಹೆಯನ್ನು ಸಚಿವರಿಗೆ ನೀಡಿದ್ದೇನೆ. ಒಂದೆಡೆ 500 ಎಕರೆ ಸರ್ಕಾರಿ ಭೂಮಿ ಇದೆ. ಭೂಮಿಯಲ್ಲಿ ಯಾರಾದರೂ ರೈತರು ಅನುಭೋಗದಲ್ಲಿ ಇದ್ದರೆ ಅವರಿಗೆ ಸೂಕ್ತ ಪರಿಹಾರ ನೀಡಿ ಭೂಮಿಯನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ನಾನು ಕೂಡ ಆ ರೈತರ ಜೊತೆ ಒಮ್ಮೆ ಚರ್ಚಿಸಿದೆ ಅದಕ್ಕೆ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿತ್ತು. ಅದೇ ರೀತಿ ಮುಂಗಡಪತ್ರದಲ್ಲಿ 100 ಎಕರೆ ಇರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಎಂದು ಸಚಿವರು.ಹೇಳಿದರು.
ಮಂಡ್ಯ ಕೃಷಿ ಆಧಾರಿತ ನೀರಾವರಿ ಜಿಲ್ಲೆ. ಅಲ್ಲಿ ಸರ್ಕಾರಿ ಮತ್ತು ಒಣಭೂಮಿ ಲಭ್ಯತೆ ಅತ್ಯಂತ ಕಡಿಮೆ ಇದೆ. ಆದರೆ ಉದ್ದೇಶಿತ ಟೆಸ್ಟಿಂಗ್ ಕೇಂದ್ರಕ್ಕೆ ಸರ್ಕಾರ 100 ಎಕರೆ ನೀಡುವುದಾಗಿ ತಿಳಿಸಿದೆ ಎಂಬುದೇನು ಸರಿ. ಆದರೆ, ಇನ್ನು ಹೆಚ್ಚಿನ ಜಾಗ ಕೊಟ್ಟರೆ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಬಹುದು. ಈ ಬಗ್ಗೆ ಸಚಿವ ಎಂ.ಬಿ..ಪಾಟೀಲ್ ಅವರು ಉತ್ತಮವಾಗಿ.ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಕಾಂಗ್ರೆಸ್ ಪಕ್ಷದ ಒಳಗೆ ಉಂಟಾಗುವ ಉಂಟಾಗಿರುವ ಗೊಂದಲಗಳ ಬಗ್ಗೆ ನಾನೇಕೆ ಉತ್ತರಿಸಲಿ. ಏನಿದು ಅವರ ಪಕ್ಷದ ಆಂತರಿಕ ವಿಚಾರ ಎಂದು ಈ ಬಗ್ಗೆ ಪ್ರಶ್ನೆಸಿದ ಮಾಧ್ಯಮಗಳಿಗೆ ಕೇಂದ್ರ ಸಚಿವರು ಉತ್ತರಿಸಿದರು.
ನಾನು ಈ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದೆ ಸಮಸ್ಯೆ ಸರಿ ಮಾಡಿಕೊಳ್ಳುವುದು ಅಥವಾ ಬಿಡುವುದು ಆ ಪಕ್ಷಕ್ಕೆ ಬಿಟ್ಟದ್ದು. ಆದರೆ ಒಂದು ಸಮುದಾಯದ ಹಿನ್ನೆಲೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ಈವರೆಗೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಯಾವೊಬ್ಬ ಮುಖಂಡರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ನೇರವಾಗಿ ಉತ್ತರಿಸಿದರು.
ನನ್ನ ಸಂಪರ್ಕದಲ್ಲಿ ಯಾವೊಬ್ಬ ನಾಯಕರು ಇಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದರೆ ನಮ್ಮ ಪಕ್ಷದ ಹಿರಿಯ ನಾಯಕನ ಜೊತೆ ಚರ್ಚಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.