ದೊಡ್ಡಬಳ್ಳಾಪುರ: ಬಮೂಲ್ (Bamul) ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಮತ ದೊರಕಿಸಿ, ವಿಜೇತರನ್ನಾಗಿಸುವ ಮೂಲಕ, ಜೆಡಿಎಸ್ (JDS) ಪಕ್ಷಕ್ಕೆ ಶಕ್ತಿಯಿಲ್ಲವೆಂದು ಅವಹೇಳನ ಮಾಡಿದವರಿಗೆ ತಕ್ಕ ಉತ್ತರ ನೀಡಲು ಶಕ್ತಿ ಮೀರಿ ಹೋರಾಟ ನಡೆಸೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ (B.Munegowda) ಅವರು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 25 ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವರು, ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅನುಮತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
MPCS ನಲ್ಲಿ ಹೆಚ್ಚು ಅಧ್ಯಕ್ಷರನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ನಿರ್ದೇಶಕ ಸ್ಥಾನಗಳಿಗೆ ಜೆಡಿಎಸ್ ಬೆಂಬಲಿತರ ಸ್ಪರ್ಧೆ ಕುರಿತು ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಬಹಳಷ್ಟು ಶ್ರಮಪಟ್ಟು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಆದಾಗ್ಯೂ ಕೆಲವರು ಆಸೆ ಆಮಿಷಗಳನ್ನು ಒಡ್ಡುವ ಮೂಲಕ ನಮ್ಮ ಪಕ್ಷದ ಶಕ್ತಿ ಕುಂದಿಸಲು ಮುಂದಾಗಿರುವ ಮಾತುಗಳು ಕೇಳಿಬಂದಿದೆ.
ಈ ಬಮೂಲ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಶಕ್ತಿ, ಒಗ್ಗಟ್ಟು ಎಷ್ಟಿದೆ ಎಂಬುದನ್ನು ನಮ್ಮ ಪಕ್ಷವನ್ನು ಅವಹೇಳನ ಮಾಡಿದವರಿಗೆ ತೋರಿಸಬೇಕಿದೆ.
ಇತರೆ ಪಕ್ಷದ ಪ್ರತಿ ಸ್ಪರ್ಧಿ ಗೆಳೆಯ, ಸಂಬಂಧಿಕ ಯಾರೇ ಆಗಿರಲಿ. ಈ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ, ಆತ್ಮಸಾಕ್ಷಿಯಿಂದ ಜೆಡಿಎಸ್ ಅಭ್ಯರ್ಥಿಗೆ ಮತ ದೊರಕಿಸಬೇಕಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ತಾಲೂಕಿನಲ್ಲಿ ಎಂಪಿಸಿಎಸ್ ಅಧ್ಯಕ್ಷರಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚಾಗಿದ್ದಾರೆ. ಇವರ ಗೆಲುವಿಗೆ ಪಕ್ಷದ ಕೊಡುಗೆ ಅಪಾರವಾಗಿದೆ. ಆದ್ದರಿಂದ ಎಂಪಿಸಿಎಸ್ ಅಧ್ಯಕ್ಷರು, ಯಾವುದೇ ಆಸೆ, ಆಮಿಷಗಳಿಗೆ ಬೆಲೆ ಕೊಡದೆ, ಪ್ರಾಮಾಣಿಕವಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮುನೇಗೌಡ ಕೋರಿದ್ದಾರೆ.