ದೊಡ್ಡಬಳ್ಳಾಪುರ: ಹೃದಯಾಘಾತದಿಂದ (Heart attack) ಸಾವನ್ನಪ್ಪುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಆತಂಕಗೊಳ್ಳಬೇಕಿಲ್ಲ. ಹೃದಯದ ಕಾಯಿಲೆಗಳನ್ನು ತಡೆಗಟ್ಟಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡುವುದು ಅತ್ಯಗತ್ಯವಾಗಿದ್ದು, ಮುಂಜಾಗ್ರತೆಯಿಂದ ಪ್ರತಿಯೊಬ್ಬರೂ ನಿಯಮಿತ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ತಜ್ಞರಾದ ಡಾ.ಎಚ್.ಜಿ.ವಿಜಯಕುಮಾರ್ (Dr. Vijayakumar) ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಹೃದಯಾಘಾತ ಮತ್ತು ತುರ್ತು ಚಿಕಿತ್ಸೆ ಜಾಗೃತಿ ಮತ್ತು ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಹದ ಅತಿ ಪ್ರಮುಖ ಅಂಗವಾಗಿರುವ ಹೃದಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಸಂಭವಿಸುತ್ತಿರುವ ಸಾವಿನ ಪ್ರಕರಣಗಳಲ್ಲಿ ಹೃದಯಾಘಾತದ ಕಾರಣಗಳೇ ಹೆಚ್ಚಾಗುತ್ತಿರುವುದು ಗಂಭೀರವಾದ ವಿಚಾರ.
ಕಿಡ್ನಿ, ಕಣ್ಣು, ಕೈ, ಕಾಲು ಮೊದಲಾದ ಅಂಗಗಳಿಗೆ ಮತ್ತೊಂದು ಬದಲಿ ಇವೆ. ಆದರೆ ಹೃದಯಕ್ಕೆ ಯಾವುದೇ ಬದಲಿ ಇಲ್ಲ. ನಿರಂತರವಾಗಿ ಕಾರ್ಯಾ ನಿರ್ವಹಿಸುವ ದೇಹದ ಒಂದೇ ಅದು ಹೃದಯ. ಇದು ವಿಶ್ರಾಂತಿ ಪಡೆದರೆ ಸಾವು ಖಚಿತ. ಈ ದಿಸೆಯಲ್ಲಿ ಹೃದಯಕ್ಕೆ ಮಾರಕವಾಗಿರುವ ಅಂಶಗಳನ್ನು ಅನುಸರಿಸದೇ ಇರುವುದು ಒಳ್ಳೆಯದು. ಹೃದಯಾಘಾತ ಸಂಭವಿಸಿದಾಗ ಆಸ್ಪತ್ರೆಗೆ ಹೋಗುವುದು ಮುಖ್ಯ, ಆದರೆ ಅದಕ್ಕಿಂತ ಮುಂಚೆ ನಮ್ಮ ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆಯ ಅರಿವು ಇರಬೇಕು.
ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬರುವವರೆಗೆ ನಾವು ಮಾಡುವ ಸಣ್ಣ ಸಹಾಯ ಒಬ್ಬರ ಜೀವ ಉಳಿಸಬಹುದು. ರಕ್ತದೊತ್ತಡ, ಮಧುಮೇಹ ಇರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು.ಈ ನಿಟ್ಟಿನಲ್ಲಿ 30 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ತಪಾಸಣೆ ಮಾಡಿಸಿಕೊಳ್ಳಬೇಕು.
ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಬೇಕು. ಪೌಷ್ಟಿಕಯುಕ್ತ ವಾಹಾರಗಳನ್ನು ಸೇವಿಸಬೇಕು. ಜಂಕ್ ಫುಡ್ಗಳ ಸೇವನೆ ಬೇಡ. ದಿನಕ್ಕೆ ಕನಿಷ್ಠ 30 ನಿಮಿಷಗಳಾದರೂ ನಡೆಯುವುದು, ಯೋಗ, ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಒತ್ತಡದ ಬದುಕು ಸಹ ಹೃದಯದ ಆರೋಗ್ಯಕ್ಕೆ ಘಾಸಿ ಮಾಡುತ್ತದೆ.
ಧ್ಯಾನ ಮಾಡುವುದು, ಸಂಗೀತ ಕೇಳುವುದು, ಅಥವಾ ಹವ್ಯಾಸಗಳಲ್ಲಿ ತೊಡಗುವ ಮೂಲಕ ಒತ್ತಡವನ್ನು ಕಡಿಮೆ ಮಾಡಬೇಕಿದೆ. ವಿಶೇಷವಾಗಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು.
ಕನ್ನಡ ವೈದ್ಯ ಬರಹಗಾರರ ಉಪ ಸಮಿತಿಯ ಡಾ. ಇಂದಿರಾ ಶ್ಯಾಮ ಪ್ರಸಾದ್ ಮಾತನಾಡಿ, ಕ್ಯಾನ್ಸರ್ ಎಂಬುದು ಕೇವಲ ಕಾಯಿಲೆಯಲ್ಲ, ಅದು ಸಮಯಕ್ಕೆ ಸರಿಯಾಗಿ ಪತ್ತೆಯಾಗದಿದ್ದರೆ ಜೀವಕ್ಕೆ ಕಂಟಕವಾಗುವ ರೋಗ. ಆದರೆ, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಇದನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಭಾರತದಲ್ಲಿ ಮಹಿಳೆಯರಲ್ಲಿ ಮುಖ್ಯವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಈ ಮೂರು ವಿಧದ ಕ್ಯಾನ್ಸರ್ಗಳು ಹೆಚ್ಚಾಗಿ ಕಂಡುಬರುತ್ತವೆ.
ಸ್ತನದಲ್ಲಿ ಅಥವಾ ಕಂಕುಳಿನ ಭಾಗದಲ್ಲಿ ನೋವಿಲ್ಲದ ಗಡ್ಡೆಗಳು., ಸ್ತನದ ಗಾತ್ರ ಅಥವಾ ಆಕಾರದಲ್ಲಿ ಅಸಹಜ ಬದಲಾವಣೆ, ಅಸಹಜ ಯೋನಿ ರಕ್ತಸ್ರಾವ ಹೊಟ್ಟೆಯಲ್ಲಿ ನಿರಂತರ ನೋವು ಅಥವಾ ಅತಿಯಾದ ಸುಸ್ತು. ವಿವರಿಸಲಾಗದ ತೂಕ ಇಳಿಕೆಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕಿದೆ.
ಪ್ರತಿ ತಿಂಗಳು ಮಹಿಳೆಯರು ತಾವೇ ಸ್ತನ ಪರೀಕ್ಷೆ ಮಾಡಿಕೊಳ್ಳಬೇಕು. 40 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಎಳೆಯ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್ಪಿವಿ ಲಸಿಕೆ ಕೊಡಿಸುವುದು ಉತ್ತಮ. ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ತಂಬಾಕಿನಿಂದ ದೂರವಿರುವುದು ಅತ್ಯಗತ್ಯ.
ಮುನ್ನೆಚ್ಚರಿಕೆ ಚಿಕಿತ್ಸೆಗಿಂತ ಮೇಲು. ನಾಚಿಕೆ ಅಥವಾ ಭಯದಿಂದ ಲಕ್ಷಣಗಳನ್ನು ಮುಚ್ಚಿಡಬೇಡಿ. ಕ್ಯಾನ್ಸರ್ ಬಗ್ಗೆ ಅರಿವು ಹೊಂದೋಣ ಮತ್ತು ಆರೋಗ್ಯವಂತ ಸಮಾಜವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.
ಸ್ತ್ರೀ ರೋಗ ತಜ್ಞರಾದ ಡಾ. ಮಾಲಾ ವಿಜಯ ಕುಮಾರ್ ಮಾತನಾಡಿ, ಮಹಿಳೆಯರಲ್ಲಿ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳ ಕುರಿತು ಮಾಹಿತಿ ನೀಡಿ, ಗರ್ಭಕಂಠದ ಕ್ಯಾನ್ಸರ್ ತಡೆಯಲು ಇಂದು ಎಚ್ಪಿಪಿ ಮಲಸಿಕೆಯಿದೆ, ಹೆಪಟೈಟಿಸ್ ಬಿ ಲಸಿಕೆ ಇದು ಯಕೃತ್ತಿನ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಅದು ಬರದಂತೆ ತಡೆಯುವುದು ಸುಲಭ ಮತ್ತು ಸುರಕ್ಷಿತ. ಬರಿ ಲಸಿಕೆ ಹಾಕಿಸಿಕೊಂಡರೆ ಸಾಲದು, 30 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ತುರ್ತು ಚಿಕಿತ್ಸಾ ವಿಭಾಗ ಪರಿಣಿತರಾದ ಡಾ.ಮಹೇಶ್ ಮೈಲಾರಪ್ಪ ಮಾತನಾಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ. ವತ್ಸಲ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ವಿ.ನಿರ್ಮಲ, ಗೌರವ ಕಾರ್ಯದರ್ಶಿ ಬಿ.ಎ.ಗಿರಿಜ, ಸಹ ಕಾರ್ಯದರ್ಶಿ ಎಸ್.ವೀಣಾ, ಖಜಾಂಚಿ ಬಿ.ಸಿ.ಕವಿತ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.