ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಜೆಡಿಎಸ್ (JDS) ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಬಳಿಕ ದೊಡ್ಡಬಳ್ಳಾಪುರ ಜೆಡಿಎಸ್ ಬಣಗಳ ಅಂತರ ಹೆಚ್ಚಾಗುತ್ತಿದೆ.
ಹೌದು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆ.ವಿ.ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಬಳಿಕ ಸುದ್ದಿಗೋಷ್ಠಿಯನ್ನು ಮಾಡಲಾಗಿದೆ. ಆದರೆ ಈ ಸಭೆಯಲ್ಲಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಸೇರಿದಂತೆ ಅವರ ಬೆಂಬಲಿಗ ಬಣದ ಅನೇಕ ಮುಖಂಡರು ಗೈರಾಗಿದ್ದು ಕಾರ್ಯಕರ್ತರಲ್ಲಿನ ಅನೇಕ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ..
ಶಾಸಕ ಧೀರಜ್ ಮುನಿರಾಜ್ಗೆ ಎಚ್ಚರಿಕೆ..!
ಸುದ್ದಿಗೋಷ್ಠಿ ಆರಂಭದಲ್ಲಿಯೇ ಜೆಡಿಎಸ್ ಕಾರ್ಯಕರ್ತರ ಆಪರೇಷನ್ ಕಮಲ ಚರ್ಚೆಗೆ ಬಂದಿದ್ದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು, ತನ್ನದೇ ಆದ ಅಸ್ತಿತ್ವ ಹೊಂದಿದೆ. ಇಲ್ಲಿನ ಶಾಸಕರು ಬಿಜೆಪಿ ಪಕ್ಷ ಸಂಘಟನೆ ಮಾಡಿಕೊಳ್ಳಲಿ. ಆದರೆ ಆಸೆ, ಆಮಿಷವೊಡ್ಡಿ ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದನ್ನ ಇಲ್ಲಿಗೆ ಬಿಡಬೇಕು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್ ಎಚ್ಚರಿಕೆ ನೀಡಿದರು.
ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದೆಯೇ ಹೊರತು, ನಮ್ಮ ಕಾರ್ಯಕರ್ತರನ್ನು ನಿಮ್ಮ ಪಕ್ಷಕ್ಕೆ ಸೇರಿಸುತ್ತೇವೆ ಎಂದು ಮಾತು ನೀಡಿಲ್ಲ. ನಮ್ಮ ಪಕ್ಷಕ್ಕೆ ಕಾರ್ಯಕರ್ತರಿಗೆ ತನ್ನದೇ ಆದ ಶಕ್ತಿ ಇದೆ. ಶಾಸಕ ಧೀರಜ್ ಮುನಿರಾಜು ಅವರು ನಮ್ಮ ಪಕ್ಷದವರನ್ನು ಆಮಿಷವೊಡ್ಡಿ ಸೆಳೆಯುವುದನ್ನು ನಿಲ್ಲಿಸಬೇಕಿದೆ ಎಂದರು.
ಪಕ್ಷ ನಿಷ್ಠೆಗೆ ಒಲಿದ ಸ್ಥಾನ
ಮುಂದುವರಿದು ಮಾತನಾಡಿ, ಜೆಡಿಎಸ್ ವರಿಷ್ಟರಾದ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಕೃಷ್ಣಾ ರೆಡ್ಡಿ ಅವರ ಸೂಚನೆಯಂತೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಾಗುತ್ತೇನೆ. ಆದರೆ ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇಲ್ಲದಿರುವುದು ಬೇಸರದ ಸಂಗತಿ..
ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡರಾದಿಯಾಗಿ ಎಲ್ಲಾ ಕಾರ್ಯಕರ್ತರು ಮುಖಂಡರು ಒಳಗೊಂಡಂತೆ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ. ನಾನು ಪ್ರತಿನಿತ್ಯ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು. ಆದರೆ ಮುನೇಗೌಡರ ಗೈರಾಗಲು ಕಾರಣ ಏನು ಎಂಬುದಕ್ಕೆ ಉತ್ತರ ಸಿಗಲಿಲ್ಲ.
ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎನ್ನುತ್ತಲೇ, ಎಲ್ಲರೂ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ನಿಷ್ಟರಾಗಿರಬೇಕು ಎನ್ನುವ ಮೂಲಕ ಬಿ.ಮುನೇಗೌಡರ ಬಣಕ್ಕೆ ಹೆಸರೇಳದೆ ಚುಚ್ಚಿದರು.
ಜಾತ್ಯಾತೀತವಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಎಲ್ಲಾ ಧರ್ಮ, ಜಾತಿಯವರನ್ನು ಒಗ್ಗೂಡಿಸಿ ಪಕ್ಷ ಕಟ್ಟುವುದೇ ನಮ್ಮ ಗುರಿ. ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು, ಹೋಬಳಿ ಸಮಿತಿ ರಚಿಸಿ, ಪ್ರತಿ ಬೂತ್ ಸಮಿತಿಯಲ್ಲಿ ಕನಿಷ್ಠ 10 ರಿಂದ 15 ಜನ ಸಕ್ರಿಯ ಕಾರ್ಯಕರ್ತರನ್ನು ತಯಾರು ಮಾಡಿ ಪಕ್ಷ ಬಲವರ್ಧನೆ ಮಾಡುತ್ತೇವೆ.
ನಾನು ಯಾರಿಂದಲೂ ಒತ್ತಡ ಹಾಕಿಸಿ ಅಧ್ಯಕ್ಷನಾಗಿಲ್ಲ. ಪಕ್ಷದ ವರಿಷ್ಠರು ನನ್ನ ಪಕ್ಷ ನಿಷ್ಠೆ ನೋಡಿ ಈ ಜವಾಬ್ದಾರಿ ನೀಡಿದೆ. ಮುಂದಿನ 20 ದಿನಗಳಲ್ಲಿ ತಾಲೂಕು ಸಮಿತಿ ರಚನೆ ಮಾಡುತ್ತೇವೆ ಎಂದರು.
ಮೈತ್ರಿ ವರಿಷ್ಟರ ತೀರ್ಮಾನಕ್ಕೆ ಬದ್ಧ
ಆರಂಭದಲ್ಲಿ ಶಾಸಕ ಧೀರಜ್ ಮುನಿರಾಜು ಅವರಿಗೆ ವಾರ್ನಿಂಗ್ ನೀಡಿ ಅಂತಿಮವಾಗಿ, ಎನ್ ಡಿಎ ಮೈತ್ರಿಕೂಟ ಇದೆ, ಆದರೆ ಪಕ್ಷಾಂತರ ಇಲ್ಲ. ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಕುರಿತಂತೆ ವರಿಷ್ಟರ ತೀರ್ಮಾನಕ್ಕೆ ಬದ್ದವಾಗಿರುತ್ತೇವೆ ಎಂದು ತೇಪೆ ಹಚ್ಚಿದರು.
ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಮಾತನಾಡಿ, ನಗರಸಭೆಯಲ್ಲಿ ಮಾತಿನಂತೆ ಜೆಡಿಎಸ್ಗೆ ಅಧಿಕಾರ ಬಿಟ್ಟುಕೊಡಬೇಕಿದೆ. ಈ ಬಗ್ಗೆ ಪಕ್ಷದ ವರಿಷ್ಠರು ತ್ವರಿತವಾಗಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.