ಬೆಂಗಳೂರು: ಕೋಗಿಲು ಕ್ರಾಸ್ ನಲ್ಲಿ ಇರುವವರು ಬಾಂಗ್ಲಾ ನಿವಾಸಿಗಳೆಂದು ಸಾಬೀತಾಗಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದಿಂದ ಸ್ಪಷ್ಟೀಕರಣ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲು ಕ್ರಾಸ್ ಗೆ ಈ ಹಿಂದೆ ಭೇಟಿ ನೀಡಿದಾಗ ಅಲ್ಲಿ ಇರುವವರೆಲ್ಲರೂ ಬಾಂಗ್ಲಾ ದೇಶದವರು ಎಂದು ಸಾಬೀತಾಗಿತ್ತು. ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ರಾಹುಲ್ ಗಾಂಧಿಯ ಮಾತು ಕೇಳಿಕೊಂಡು ಅಲ್ಲಿ ಎಲ್ಲರಿಗೂ ಮನೆ ನೀಡುವುದಾಗಿ ಘೋಷಣೆ ಮಾಡಿತ್ತು. ವಸತಿ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಳೆಯೇ ಮನೆ ನೀಡುವುದಾಗಿ ಹೇಳಿದ್ದರು. ಈಗ ಅವರೆಲ್ಲರೂ ಫ್ರಾಡ್ ಗಳು ಎಂದು ಗೊತ್ತಾಗಿದೆ ಎಂದರು.
ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಈಗ ಅದು ಸಾಬೀತಾಗಿದೆ. ಮುಸ್ಲಿಮರನ್ನು ಓಲೈಕೆ ಮಾಡುವುದರಿಂದ ಕೇರಳ ಚುನಾವಣೆಗೆ ನೆರವಾಗಲಿದೆ ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹೀಗೆ ಘೋಷಣೆ ಮಾಡಿತ್ತು. ಈಗ ಬಾಂಗ್ಲಾ ನಿವಾಸಿಗಳಿರುವ ಕಡೆ ಪರಿಶೀಲನೆ ಮಾಡಿ ವಲಸಿಗರನ್ನು ಸರ್ಕಾರ ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಕುರಿತು ನೀಡಿದ್ದ ಹೇಳಿಕೆಗಳಿಗೆ ಈಗ ಸ್ಪಷ್ಟೀಕರಣ ನೀಡಬೇಕಿದೆ. ಬಿಜೆಪಿ ಹೋರಾಟ ಮಾಡಿಲ್ಲದಿದ್ದರೆ 300 ಕೋಟಿ ಬೆಲೆಬಾಳುವ ಜಮೀನು ಬಾಂಗ್ಲಾ ನಿವಾಸಿಗಳ ಪಾಲಾಗುತ್ತಿತ್ತು. ಈಗ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ಮುಡಾದ 3 ಸಾವಿರ ಕೋಟಿ ಹಗರಣದಲ್ಲಿ ಕಾಂಗ್ರೆಸ್ ಗೆ ಸಹಾಯ ಮಾಡಿದ ಅಧಿಕಾರಿಗೆ ಋಣ ತೀರಿಸಲು ಉತ್ತಮ ಹುದ್ದೆ ನೀಡಲಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಗೆ ಈತ ಬಹಳ ಸಹಾಯ ಮಾಡಿದ್ದ. ಇವನಿಗೆ ಉತ್ತಮ ಹುದ್ದೆ ನೀಡಿ ತನಿಖೆ ಮುಚ್ಚಿ ಹಾಕಲಾಗುತ್ತಿದೆ ಎಂದರು.