ದೊಡ್ಡಬಳ್ಳಾಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ (SSLC Exam) ಹಿಂದಿ (Hindi) ಸೇರಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲು ಮುಂದಾಗಿರುವ ಸರ್ಕಾರದ ಪ್ರಸ್ತಾವನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಈ ಕುರಿತಂತೆ ನ್ಯಾಯಾಲಯದ ಆದೇಶ ಸ್ವಾಗತಿಸಿರುವ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯಾಲಯ ನೀಡಿದ ಜಯವೆಂದು ಶ್ಲಾಘಿಸಿದ್ದು, ಇದು ಹಿಂದಿಹೇರಿಕೆ ಪರವಾಗಿ ವಕಾಲತ್ತು ವಹಿಸುತ್ತಿದ್ದವರಿಗೆ ಕಪಾಳಮೋಕ್ಷವಾಗಿದೆ ಎಂದಿದ್ದಾರೆ.

ಕನ್ನಡ ಪರ ಮನಸ್ಸುಗಳು ಎಂದಿಗೂ ಬೇರೆ ಭಾಷೆಗಳನ್ನು ವಿರೋಧ ಮಾಡಿಲ್ಲ. ಕೇವಲ ಕನ್ನಡದ ವಿದ್ಯಾರ್ಥಿಗಳಿಗೆ ಬಲವಂತವಾಗಿ ಹಿಂದಿ ಹೇರಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ.
ಆದಾಗ್ಯೂ ಕೆಲವರು ಹಿಂದಿ ಹೇರಿಕೆಯನ್ನು ಸಮರ್ಥನೆ ಮಾಡುತ್ತಾ ಹೋರಾಟಗಾರರನ್ನು ಆ ಪಕ್ಷದ ಪರ, ಈ ಪಕ್ಷದ ಪರ ಎಂದು ಅವಹೇಳನ ಮಾಡುತ್ತಾ, ಚರ್ಚೆ ಮೂಲಕ ವಿವರಿಸಿದರೆ ವಿಷಯಾಂತರ ಮಾಡುತ್ತಾ, ವಾಸ್ತವ ತಿಳಿಯದೆ ವಿನಾಕಾರಣ ವಾದ ಮಾಡುತ್ತಿದ್ದವರಿಗೆ ನ್ಯಾಯಾಲಯದ ಆದೇಶ ಸರಿಯಾದ ಉತ್ತರ ನೀಡಿದೆ.
ಕನ್ನಡಪರ ಸಂಘಟನೆಗಳು, ಚಿಂತಕರು, ಕನ್ನಡದ ಮನಸ್ಸುಗಳು ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ.
ಈ ಆದೇಶದಿಂದ ಹಿಂದಿ ಹೇರಿಕೆ ಪರ ವಕಲಾತ್ತು ವಹಿಸುತ್ತಾ, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಿರುವುದು ಪ್ರಶಂಸನೀಯ ಎಂದಿದ್ದಾರೆ.
ಹಿಂದಿ ಗ್ರೇಡಿಂಗ್ ಪ್ರಶ್ನಿಸಿದ್ದಕ್ಕೆ ದಂಡ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸಂಬಂಧ ಸರಕಾರದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳ ವರದಿ ಆಧರಿಸಿ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಬೆಂಗಳೂರಿನ ಎಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ವಿಭು ಬಬ್ರು ಮತ್ತು ನ್ಯಾ.ಸಿ.ಎಂ. ಪೂಣಚ್ಚ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಶ್ರೇಣಿಗಳನ್ನು ನೀಡುವ ವ್ಯವಸ್ಥೆಯ ಕುರಿತ ಶಿಕ್ಷಣ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕಾ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಿದ್ದಾರೆ. ಅರ್ಜಿದಾರರ ಈ ನಡೆ ಅತ್ಯಂತ ಅಗೌರವಯುತವಾಗಿದೆ. ಇಂತಹ ಪತ್ರಿಕಾ ಹೇಳಿಕೆಗಳನ್ನು ರದ್ದು ಗೊಳಿಸುವುದಕ್ಕೆ ಹೈಕೋರ್ಟ್ಗೆ ಅಸಾಧಾರಣವಾದ ವಿಶೇಷ ನ್ಯಾಯವ್ಯಾಪ್ತಿ ಚಲಾಯಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಜತೆಗೆ, ಇದೊಂದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದ್ದು, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವ ತಿಸಬೇಕು ಎಂದು ಪೀಠ ತಿಳಿಸಿತು. ಒಂದು ವೇಳೆ ದಂಡದ ಮೊತ್ತವನ್ನು ಪಾವತಿ ಮಾಡದಿದ್ದಲ್ಲಿ, ಅವರ ಭೂ ಕಂದಾಯಕ್ಕೆ ಬಾಕಿ ಮೊತ್ತವನ್ನಾಗಿ ಪರಿಗಣಿಸಿ ವಸೂಲಿ ಮಾಡಬಹುದಾಗಿದೆ ಎಂದು ತಿಳಿಸಿತು.
ಅರ್ಜಿ ವಿವರ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಹಿಂದಿ ಭಾಷೆ ಸೇರಿದಂತೆ ತೃತೀಯ ಭಾಷೆಗಳು ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ಗಳನ್ನಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕ ವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ತೆಗೆದು ಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.