ಬೆಂಗಳೂರು: ಜೆಡಿಎಸ್ (JDS) ಪಕ್ಷಕ್ಕೆ ಐದು ವರ್ಷಗಳ ಕಾಲ ಒಂದೇ ಒಂದು ಬಾರಿ ಅವಕಾಶ ನೀಡಿ. ಈ ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನು ಸಂಪೂರ್ಣವಾಗಿ ಬಿಡಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತಾಡಿದ ಕೇಂದ್ರ ಸಚಿವರು; ಕೇವಲ ಒಮ್ಮೆ ಮಾತ್ರ ಅವಕಾಶ ಕೊಟ್ಟು ನೋಡಿ. ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಹಿಡಿದಿರುವ ಗ್ರಹಣಕ್ಕೆ ಮುಕ್ತಿ ಹಾಡುತ್ತೇನೆ. ಇವರು ಮಾಡಿರುವ ಕೊಳಕನ್ನೆಲ್ಲಾ ಸ್ವಚ್ಛ ಮಾಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ನಾನು ಎರಡು ಬಾರಿ ಸಿಎಂ ಆಗಿದ್ದೆ. ಆದರೆ, ನನ್ನದು ಬಹುಮತದ ಸ್ವತಂತ್ರ ಸರ್ಕಾರ ಆಗಿರಲಿಲ್ಲ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದ್ದೆ. ಹೀಗಾಗಿ ನನಗೆ ಒಮ್ಮೆ ಪೂರ್ಣ ಪ್ರಮಾಣದ ಸರ್ಕಾರ ಕೊಟ್ಟು ನೋಡಿ ಎಂದು ರಾಜ್ಯದ ಜನತೆಯನ್ನು ಕಳಕಳಿಯಿಂದ ಕೋರಿದರು ಕೇಂದ್ರ ಸಚಿವರು.
ರಾಜ್ಯ ಯಾವ ಸ್ಥಿತಿಗೆ ಹೋಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದೀರಿ. ಹಾಗೆಯೇ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಕೆಂಪೇಗೌಡರು ಕಟ್ಟಿದ ಈ ಮಹಾನಗರವನ್ನು ಇಂತಹ ದುಸ್ಥಿತಿಗೆ ತಂದ ವ್ಯಕ್ತಿಗಳಿಗೆ ಪಾಠ ಕಲಿಸಬೇಕು. ಜತೆಗೆ ನಗರಕ್ಕೆ ಮರುವೈಭವ ತಂದುಕೊಡಬೇಕಾಗಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು
ಬೆಂಗಳೂರು ಅಭಿವೃದ್ಧಿಗೆ ದೇವೇಗೌಡರು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಸುಸಜ್ಜಿತ ಫ್ಲೈ ಓವರ್ ಗಳ ಯುಗ ಆರಂಭವಾಗಿದ್ದೇ ದೇವೇಗೌಡರಿಂದ. ಐಟಿಬಿಟಿಗೆ ನಾಂದಿ ಹಾಡಿ ಈ ನಗರಕ್ಕೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿದ ಹೆಗ್ಗಳಿಕೆಯು ಈ ರೈತನ ಮಗನದು. ನನ್ನ ಕಾಲದಲ್ಲೂ ಬೆಂಗಳೂರು ಭಾರೀ ಮುನ್ನಡೆಯನ್ನು ಕಂಡಿತ್ತು. ಇವತ್ತು ನಗರದ ಸಾಮೂಹಿಕ ಸಂಚಾರಕ್ಕೆ ಅತ್ಯಂತ ಸುಲಭ ಮಾರ್ಗವಾಗಿರುವ ಮೆಟ್ರೋ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದೆ ನಾನು ಎಂಬುದನ್ನು ಜನ ಮರೆತಿಲ್ಲ ಎಂದು ನಂಬಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಕೇವಲ ರೈತರಿಗೆ ಸೀಮಿತವಾದ ಪಕ್ಷವಲ್ಲ. ಹಾಗೆಂದು ನಾವು ರೈತರನ್ನು ಎಂದು ನಿರ್ಲಕ್ಷ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ. ಕೆಂಪೇಗೌಡರು ಕಟ್ಟಿದ ಮಹಾನಗರದಲ್ಲಿ ಎಷ್ಟು ರೈತರ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ, ಅವರ ಕ್ಷೇಮದ ಮುಂದಾಲೋಚನೆ ಇಟ್ಟುಕೊಂಡು ನಾನು ಮತ್ತು ದೇವೇಗೌಡರು ಕೆಲಸ ಮಾಡಿದ್ದೇವೆ. ಆದರೆ ಈಗ ಏನಾಗುತ್ತಿದೆ? ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಲೂಟಿಯ ಮೇಲೆ ಲೂಟಿ ನಡೆಯುತ್ತಿದೆ ಎಂದು ಅವರು ಆರೋಪ ಮಾಡಿದರು.
ಬೆಂಗಳೂರು ನಗರದಲ್ಲಿ ಎಲ್ಲಿ ನೋಡಿದರೂ ಕಸ ಕಣ್ಣಿಗೆ ರಾಚುತ್ತದೆ. ಕಸ ಎತ್ತಲು ಸಮಸ್ಯೆ ಏನಿದೆ? ವೈಜ್ಞಾನಿಕವಾಗಿ ಕಸ ವಿಲೇವಾರಿ ವ್ಯವಸ್ಥೆ ಮಾಡುವುದಕ್ಕೆ ನಿಮಗೆ ಏನು ತೊಂದರೆ? ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜಧಾನಿಯಲ್ಲಿ ಕಸದ ಸಮಸ್ಯೆ ಎನ್ನುವುದೇ ಇರಲಿಲ್ಲ. ದೇಶದಲ್ಲಿಯೇ ಬೆಂಗಳೂರು ಅತ್ಯಂತ ಸುಂದರ ನಗರವಾಗಿತ್ತು. ಕರ್ನಾಟಕಕ್ಕೆ ನೀವು ಈಗ ಗ್ರಹಣ ಹಿಡಿಸಿದ್ದೀರಿ, ಆ ಗ್ರಹಣ ಬಿಡಿಸುವ ದಿನಗಳು ಹತ್ತಿರದಲ್ಲೇ ಇವೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ನಗರ ಅಭಿವೃದ್ಧಿಗೆ ದೂರದೃಷ್ಟಿ ಮತ್ತು ಪಾರದರ್ಶಕ ಆಡಳಿತದ ಅಗತ್ಯವಿದೆ. ಇವರೆಲ್ಲ ಈಗ ಸುರಂಗ ಮಾರ್ಗ ಎಂದು ಈಗ ಜಪ ಮಾಡುತ್ತಿದ್ದಾರೆ. ಆದರೆ ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ನಗರಕ್ಕೆ ಸುರಂಗ ಮಾರ್ಗ ತರುವ ಚಿಂತನೆ ಮಾಡಿದ್ದೇ. ನನ್ನ ಕಾಲದಲ್ಲಿ ಔಟರ್ ಪೇರಿಫೆರಲ್ ರಸ್ತೆಗೆ ನಿರ್ಧಾರ ಮಾಡಲಾಗಿತ್ತು, ಈಗ ಈ ಸರ್ಕಾರವು ಅದೇ ಯೋಜನೆಗೆ 29 ಸಾವಿರ ಕೋಟಿ ವೆಚ್ಚ ಆಗುತ್ತದೆ ಎಂದು ಹೇಳುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಜನ ಈಗ ಕೆಂಡದಂತ ಬೇಸಿಗೆ ನೋಡುತ್ತಿದ್ದಾರೆ. ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರ ಅಗಾಧವಾಗಿ ಬೆಳೆಯುತ್ತಿದೆ, ಆದರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈ ಸರ್ಕಾರ ವಿಫಲವಾಗಿದೆ. ದೇವೇಗೌಡರು ತಾವು ಪ್ರಧಾನಿಯಾಗಿದ್ದಾಗಲೇ ನಗರದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಮುಂದಿನ ವರ್ಷಗಳಲ್ಲಿ ಬೆಂಗಳೂರು ಹೇಗೆ ಬೆಳೆಯುತ್ತದೆ ಎಂದು ಯೋಚಿಸಿ ಕಾವೇರಿ ನೀರನ್ನು ನಗರಕ್ಕೆ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ಜನ ಈ ಸಾಧನೆಯನ್ನು ಮರೆಯಬಾರದು ಎಂದು ನಾನು ಮನವಿ ಮಾಡುತ್ತೇನೆ ಅವರು ಕೋರಿದರು.
ತಾನು ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಕ್ರಮವಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿರುವ ಶ್ರೀಮಂತರನ್ನು ರಕ್ಷಿಸುತ್ತಿದೆ. ಸಣ್ಣದಾಗಿ ಗುಡಿಸಲು ಹಾಕಿಕೊಂಡಿರುವ ಬಡವರನ್ನು ಹೊರದಬ್ಬುತ್ತಿದೆ. ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಭೂಮಿ ಲೂಟಿ ಮಾಡುವ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರವು ಪೂರ್ಣವಾಗಿ ವಸೂಲಿಯಲ್ಲಿ ಮುಳುಗಿಹೋಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ನಾನು ಯಾವತ್ತೂ ಕೂಡ ಕೇಂದ್ರ ಸರ್ಕಾರದ ಮುಂದೆ ಕೈಕಟ್ಟಿ ನಿಂತವನಲ್ಲ. ಮುಖ್ಯಮಂತ್ರಿಯಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ನನ್ನ ಮನೆಗೆ ಸೂಟುಬೂಟು ಹಾಕುವವರು ಯಾರು ಬರುವುದಿಲ್ಲ. ಕಷ್ಟಜೀವಿಗಳು, ಬಡವರು ದೀನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಸಿದ್ದರಾಮಯ್ಯನವರೇ.. ಕೇವಲ ₹2000 ಕೊಟ್ಟರೆ ಕಿಡ್ನಿ, ಹೃದಯರೋಗ ಇರುವ ವ್ಯಕ್ತಿಗಳನ್ನು ರಕ್ಷಿಸಲು ಸಾಧ್ಯವೇ? ಎಂದು ಸಚಿವರು ಪ್ರಶ್ನಿಸಿದರು.
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡದೆ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುತ್ತಿದ್ದಾರೆ. 70,000 ಶಿಕ್ಷಕರನ್ನು ನೇಮಕ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಧಾರವಾಡದಲ್ಲಿ ಯುವಕರು ಬೀದಿಗೆ ಬಂದು ಹೋರಾಟ ನಡೆಸಿದರು. ಒಳ ಮೀಸಲಾತಿ ವಿಷಯ ಏನಾಗಿದೆ ಎನ್ನುವುದನ್ನು ಹೇಳಿ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.
ಸಮಾಜಗಳನ್ನು ಒಡೆದುಕೊಂಡು ಬರುತ್ತಿದ್ದೀರಿ. ಆಯೋಗದ ಮೇಲೆ ಆಯೋಗ ರಚನೆ ಮಾಡಿದ್ದೀರಿ. ನಿಮ್ಮ ಕಾಂತರಾಜು ವರದಿ ಎಲ್ಲಿ ಹೋಯಿತು? ಜಯಪ್ರಕಾಶ್ ಹೆಗಡೆ ಅವರಿಂದ ಪಡೆದುಕೊಂಡ ವರದಿಯನ್ನು ಎಲ್ಲಿ ಮಡಗಿದ್ದೀರಿ? ಎಂದು ಕುಮಾರಸ್ವಾಮಿಯವರು ಖಾರವಾಗಿ ಪ್ರಶ್ನಿಸಿದರು.
ಅಭಿವೃದ್ಧಿ ವಿಷಯದಲ್ಲಿ ಪದೇಪದೇ ಅಡ್ಡಿ ಮಾಡುತ್ತಿದ್ದೀರಿ. ಕುದುರೆಮುಖ ಕಂಪನಿಯನ್ನು ಪುನರಾರಂಭ ಮಾಡಲು ಬಿಡುತ್ತಿಲ್ಲ. ಅದಕ್ಕೆ ಸ್ವತಃ ನೀವೇ ಹಂಚಿಕೆ ಮಾಡಿರುವ ಗಣಿಯಿಂದ ಕಬ್ಬಿಣದ ಅದಿರು ತೆಗೆಯಲು ಬಿಡುತ್ತಿಲ್ಲ. ಹೆಚ್ ಎಂಟಿ ಕಾರ್ಖಾನೆಗೆ ಮರುಜೀವ ಕೊಡಲು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಿ. ನಿಮಗೆ ಏನಾಗಿದೆ? ಯಾಕೆ ಇಷ್ಟೊಂದು ಅಸಹನೆ? ಎಂದು ಕುಮಾರಸ್ವಾಮಿಯವರು ಬೇಸರ ವ್ಯಕ್ತಪಡಿಸಿದರು.
ನಾನು ಆರೂವರೆ ಕೋಟಿ ಕನ್ನಡಿಗರ ಆಶೀರ್ವಾದದಿಂದ ಸಿಎಂ ಆಗಲಿಲ್ಲ. ಆದರೆ ಕನ್ನಡಿಗರು ಯಾವತ್ತೂ ತಲೆತಗ್ಗಿಸುವಂತೆ ಆಡಳಿತ ನಡೆಸಲಿಲ್ಲ. ಅನುದಾನ ಬರಲಿಲ್ಲ ಎಂದು ಕೇಂದ್ರ ಜೊತೆ ಕಾಲು ಕೆರೆದು ಜಗಳಕ್ಕೆ ಹೋಗಲಿಲ್ಲ. ನಿಮ್ಮನ್ನು ಎದುರು ಹಾಕಿಕೊಂಡೆ ರೈತರ ಸಾಲ ಮನ್ನಾ ಮಾಡಿದೆ. ಕೇವಲ ಗ್ಯಾರಂಟಿಗಳಿಂದ ಜನರ ಬದುಕು ಸರಿ ಹೋಗುವುದಿಲ್ಲ. ಇಡೀ ಬೆಂಗಳೂರಿಗೆ ಗತವೈಭವ ಮರಳಿ ತರುವ ಅಗತ್ಯವಿದೆ. ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯಅವರು ಪ್ರತಿಪಾದಿಸಿದರು.
ನಾವು ಬಿಜೆಪಿ ಮೈತ್ರಿಯಲ್ಲಿದ್ದೇವೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿದೆ. ಮೈತ್ರಿ ಧರ್ಮಕ್ಕೆ ನಾವು ಸದಾ ಬದ್ಧರು. ಅದರ ಬಗ್ಗೆ ಚರ್ಚೆ ಮಾಡಲು ನನಗೆ ಬಿಡಿ. ಹಾದಿಬೀದಿಯಲ್ಲಿ ಯಾರು ಮಾತನಾಡುವುದು ಬೇಡ. ಕಾರ್ಯಕರ್ತರಿಗೆ ರಕ್ಷಣೆ ಕೊಡುವುದು ನನ್ನ ಜವಾಬ್ದಾರಿ, ಪಕ್ಷವನ್ನು ಉಳಿಸಿಕೊಳ್ಳುವುದು ನನ್ನ ಹೊಣೆ ಎಂದರು ಕೇಂದ್ರ ಸಚಿವರು.
ಸ್ಥಳೀಯ ಶಾಸಕರ ವಿರುದ್ಧ ಹೆಚ್ಡಿಕೆ ಕಿಡಿ
ಈ ಭಾಗದ ಶಾಸಕ ತನ್ನ ರಾಜಕೀಯಕ್ಕೆ ಯಾವ ಪಕ್ಷವಾದರೇನು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಬೇಕಿದ್ದರೆ ನಾನು ಕಾಂಗ್ರೆಸ್ ನಿಂದ ಬೇಕಾದರೂ ನಿಲ್ಲುತ್ತೇನೆ ಅಥವಾ ಬಿಜೆಪಿಯಿಂದ ಬೇಕಾದರೂ ನಿಲ್ಲುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಆ ವ್ಯಕ್ತಿ ಜೆಡಿಎಸ್ ಹೆಸರನ್ನು ಮಾತ್ರ ಹೇಳುತ್ತಿಲ್ಲ. ಅವರಿಗೆ ಗೊತ್ತಿರಲಿ, ಜೆಡಿಎಸ್ ಮಾರಾಟದ ಪಕ್ಷವಲ್ಲ. ಹಾಲಿ ವಿಧಾನ ಪರಿಷತ್ ಸದಸ್ಯರಾದ ಜವರಾಯಿಗೌಡರು ನಾಲ್ಕು ಬಾರಿ ಸೋತಿದ್ದಾರೆ. ಕೆಲವರಿಂದ ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ನಾನು ಮಾಡಿದ್ದೇನೆ ಎಂದು ಸಚಿವರು ಗುಡುಗಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು, ಯುವ ಜನತಾದಳ ರಾಜ್ಯ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ, ಶಾಸಕರಾದ ಟಿ.ಎ. ಶರವಣ, ಜವರಾಯಿಗೌಡ, ಎಸ್.ಎಲ್.ಭೋಜೇಗೌಡ, ಮಂಜೇಗೌಡ, ಶಾಸಕಿ ಕರೆಮ್ಮ ನಾಯಕ್, ವಿವೇಕಾನಂದ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ವೆಂಕಟರಾವ್ ನಾಡಗೌಡ, ಹೆಚ್.ಕೆ. ಕುಮಾರಸ್ವಾಮಿ, ಆಲ್ಕೋಡ್ ಹನುಮಂತಪ್ಪ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಭಾಗಿಯಾಗಿದ್ದರು.