ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಾಲಯ ಭಾರತದ ಪಶ್ಚಿಮ ಕರಾವಳಿ ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧ. ಇದರಲ್ಲಿ ತುಳುನಾಡು ಅಥವಾ ದಕ್ಷಿಣಕನ್ನಡ ಜಿಲ್ಲೆ ದೇವಸ್ಥಾನ ಹಾಗೂ ದೈವಸ್ಥಾನಗಳಿಂದ ತುಂಬಿ ಪುನೀತವಾಗಿದೆ.
ಗಣಪತಿ, ದುರ್ಗೆ, ಶಿವ ಹಾಗೂ ವಿಷ್ಣು ದೇವಾಲಯಗಳು ಇಲ್ಲಿ ಅಧಿಕ. ವಿಷ್ಣುವಿನ ಅವತಾರಗಳಾದ ರಾಮ, ಕೃಷ್ಣ ನರಸಿಂಹ, ಪರಶುರಾಮನಿಗೆ ಸಂಬಂಧಿಸಿದ ದೇವಸ್ಥಾನಗಳು ಸಾಕಷ್ಟಿವೆ. ಕೃಷ್ಣನೇ ಇತರ ಎಲ್ಲರಿಗಿಂತ ಹೆಚ್ಚು ಜನಪ್ರಿಯನಾದ ದೇವರು ಸ್ಮಾರ್ತ ವೈಷ್ಣವ ಭೇದವಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಆದ್ಯಂತ ಶ್ರೀಕೃಷ್ಣನನ್ನು ಜನರು ಪೂಜಿಸುತ್ತಾರೆ.
ಭಗವಂತನ ದಶಾವತಾರಗಳಲ್ಲೆಲ್ಲಾ ಕೃಷ್ಣಾವತಾರವೇ ಪೂರ್ಣಾವತಾರವೆಂದು ಪರಿಗಣಿಸಲ್ಪಟ್ಟಿದೆ. ಅಂತಹ “ ಪೊಡವಿಗೊಡೆಯನಾದ” ಶ್ರೀ ಕೃಷ್ಣನೇ ಗೋಪೀನಾಥನೆಂಬ ನಾಮಾಂಕಿತದಿಂದ ಅತ್ತಾವರ ಚಕ್ರಪಾಣಿ ದೇವಸ್ಥಾನದಲ್ಲಿ ನೆಲೆನಿಂತು ಭಕ್ತಾದಿಗಳಿಗೆ ಮಂಗಲಪ್ರದಾಯಕನಾಗಿ ಸದಾ ಕಂಗೋಳಿಸುತ್ತಿದ್ದಾನೆ.
ಈ ಕ್ಷೇತ್ರವು ದಕ್ಷಿಣ ಜಿಲ್ಲೆಯ ಹಲವು ಪುರಾತನ ದೇವಾಲಯಗಳಲ್ಲೊಂದಾಗಿದ್ದು ತುಂಬಾ ಚಾರಿತ್ರ್ಯದಿಂದ ಕೂಡಿದೆ. ಹಿಂದೆ ಕದಂಬ ವಂಶದ ಮಯೂರವರ್ಮನೆಂಬ ಅರಸನ ಕಾಲದಲ್ಲಿ ಈ ದೇವಸ್ಥಾನದ ಪ್ರದೇಶ ’ಅರ್ಥಪುರ’ ಎಂಬ ಅಗ್ರಹಾರವಾಗಿತ್ತು. ಅಂದಿನ ಅರ್ಥಪುರವೇ ಇಂದಿನ ಅತ್ತಾವರ. ವಿಶಾಲವಾದ ಈ ಗ್ರಾಮದ ಅಧಿಪತಿಯೇ ಶ್ರೀ ಗೋಪೀನಾಥ. ಮಂಗಳೂರು ನಾಥಪಂಥದ ಕೇಂದ್ರಗಳಲ್ಲಿ ಒಂದೆನಿಸಿದುದರಿಂದ ಈ ದೇವಸ್ಥಾನ ಕೂಡ ಆ ಸಂಪ್ರದಾಯದ ಪ್ರಭಾವಕ್ಕೆ ಹೊರತಾಗಿಲ್ಲ. ಅದಕ್ಕೆಂದೇ ಇಲ್ಲಿಯ ದೇವರ ಹೆಸರು “ಗೋಪಿನಾಥ”.
ಇಲ್ಲಿ ಸ್ಥಾಪನೆಗೊಂಡಿರುವ ಕೃಷ್ಣನ ಶಿಲಾಮೂರ್ತಿಯು ದ್ವಾಪರಯುಗದಲ್ಲಿ ಋಷಿಮುನಿಗಳಿಂದ ಪೂಜಿಸಿಕೊಂಡಿದ್ದು ಅನಂತರ ಕಲಿಯುಗದಲ್ಲಿ ಪ್ರಖ್ಯಾತರಾದ ಮತ್ಸ್ಯೇಂದ್ರನಾಥ ಗೋರಖನಾಥರೆಂಬ ನಾಥ ಪಂಥಕ್ಕೆ ಸೇರಿದ ಮಹಾಯೋಗಿಗಳ ಅಧೀನದಲ್ಲಿದ್ದು ಗುರುವರ್ಯರ ಆದೇಶದಂತೆ ಗೋರಖನಾಥರು ಈ ವಿಗ್ರಹವನ್ನು ಈ ಕ್ಷೇತ್ರದಲ್ಲಿ “ಶ್ರೀ ಚಕ್ರ” ಯಂತ್ರವನ್ನು ರಚಿಸಿ ಪ್ರತಿಷ್ಠಾಪಿಸಿದರೆಂದು ಪ್ರತೀತಿ.
ಈ ದೇವಸ್ಥಾನದ ಪ್ರಧಾನ ದೇವತೆಯಾಗಿ ಪೂಜೆಗೊಳ್ಳುತ್ತಿರುವ ವಿಗ್ರಹ ಹೊಯ್ಸಳ ಶೈಲಿಯದ್ದಾಗಿದ್ದು ತುಂಬ ಮನಮೋಹಕವಾಗಿದೆ. ಸಮಭಂಗದಲ್ಲಿ ನಿಂತ ದ್ವಿಭುಜಮೂರ್ತಿ 2.25 ಅಡಿ (ಎರಡೂ ಕಾಲು ಅಡಿ) ಎತ್ತರವಿದೆ. ಇದರ ಕಾಲ ಕ್ರಿಸ್ತಶಕ 11ನೇಯ ಶತಮಾನ ಎಂದು ಅಭಿಪ್ರಾಯಪಡಲಾಗಿದೆ. ದೇವಾಲಯದ ಪ್ರವೇಶದ್ವಾರದ ಬಲಬದಿಯಲ್ಲಿ ವಿಜಯನಗರದ ಒಂದನೇ ಬುಕ್ಕರಾಯನ (ವೀರಬುಕ್ಕಣ್ಣ ಒಡೆಯ) ಕಾಲದ ಶಿಲಾಶಾಸನವಿದ್ದು ಈ ಗುಡಿಯ ಗತವೈಭವಕ್ಕೆ ಐತಿಹಾಸಿಕ ಸಾಕ್ಷಿಯಾಗಿದೆ.
ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಈ ಚಕ್ರಪಾಣಿ ಗೋಪೀನಾಥ ಕ್ಷೇತ್ರ ಮಹಿಮೆಯ ವರ್ಣನೆ ಇದೆ ಎನ್ನಲಾಗಿದೆ. ಹಿಂದೆ ಅರಸರ ಆಡಳಿತದಲ್ಲಿ ನಿತ್ಯವೂ ರಾಜೋಪಚಾರಗಳೊಡನೆ ಪೂಜೆ ಪುರಸ್ಕಾರಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಕಾಲಕ್ರಮೇಣ ಆಡಳಿತ ವ್ಯತ್ಯಾಸ ಹಾಗೂ ದತ್ತಿ, ಉಂಬಳಿಗಳ ಅಭಾವದಿಂದಾಗಿ ವೈಭವವೆಲ್ಲಕ್ಷೀಣಿಸಿದೆ.
ಉತ್ತರಭಾರತವು ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದ್ದರೆ, ದಕ್ಷಿಣಭಾರತವು ದೇವಾಲಯಗಳಿಗೆ ಪ್ರಸಿದ್ಧ ಅಂದರೆ ಈ ಕ್ಷೇತ್ರವು ತುಳುನಾಡಿನ ಇತರ ಕೆಲವು ಕ್ಷೇತ್ರಗಳಂತೆಯೇ ಯಾತ್ರಾತೀರ್ಥ ಮತ್ತು ದೇವಸ್ಥಾನ ಎರಡುನ್ನೂ ಒಳಗೊಂಡ ವಿಶಿಷ್ಟ ಸನ್ನಿಧಿ. ಈ ದೇವಸ್ಥಾನದ ಮುಂಭಾಗದಲ್ಲಿ ತಿಳಿನೀರಿನ ಕೆರೆಯಿದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದ ಪ್ರಕಾರ ಈ ತೀರ್ಥದಲ್ಲಿ ಪಿತೃಗಳಿಗೆ ಪಿಂಡಪ್ರಧಾನ ಹಾಗೂ ತಿಲೋದಕಗಳನ್ನು ಕೊಟ್ಟರೆ, ಗಯಾ ಕ್ಷೇತ್ರದಲ್ಲಿ ಪಿಂಡವನ್ನು ಹಾಕಿದ ಫಲವೇ ದೊರೆಯುತ್ತದೆ. ಮಾತ್ರವಲದೇ ಕ್ಷಯ, ಕುಷ್ಠ, ಅಪಸ್ಮಾರಾದಿ ರೋಗಗಳನ್ನು ನಿವಾರಿಸಿದ ಕೀರ್ತಿಯುಳ್ಳ “ ಚಕ್ರ” ತೀರ್ಥವಿದು. ಮಾಘ ಕೃಷ್ಣ ಅಮಾವಾಸ್ಯೆಯಂದು ಇಲ್ಲಿ ತೀರ್ಥಸ್ನಾನ ವಿಶೇಷ. ಈ ವೈಷ್ಣವ ತೀರ್ಥಕ್ಷೇತ್ರವು ಈ ಮುಂದಿನ ಮೂರು ವಿಷಯಗಳಿಗೆ ವಿಶಿಷ್ಟವೆನಿಸಿದೆ.
1995ರಲ್ಲಿ ಧಾರ್ಮಿಕ ಕಾರ್ಯಗಳೂ ವಿಜೃಂಭಣೆಯಿಂದ ಜರಗಿತು. ಕೈಗೆತ್ತಿಕೊಂಡು ಬ್ರಹ್ಮಕಲಶ ಮಹೋತ್ಸವಾದಿ ಧಾರ್ಮಿಕ ಕಾರ್ಯಗಳೂ ನೂತನವಾಗಿ ನಿರ್ಮಿಸಲಾಯಿತು. ತೀರ್ಥಬಾವಿ ಮತ್ತು ದೇವಸ್ಥಾನದ ಚಕ್ರತೀರ್ಥಕೆರೆಯನ್ನು ಅಭಿವೃದ್ಧಿಪಡಿಸಲಾಯಿತು.
ಭಗವನ್ ಪ್ರೇರಣೆಯಂತೆ ಸಕಲ ಸಜ್ಜನ, ಸಹೃದಯ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಿರ್ವಿಘ್ನವಾಗಿ ವಿಜೃಂಭಣೆಯಿಂದ ಜರಗುತ್ತಿವೆ. ಭಕ್ತಾದಿಗಳು ಈ ಸತ್ಕರ್ಮಗಳಿಂದ ಕೂಡಿದ ಸತ್ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಪಡೆಯುತ್ತಿದ್ದಾರೆ.
ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….