ದೊಡ್ಡಬಳ್ಳಾಪುರ, (ಆಗಸ್ಟ್.15); ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಸಿ.ದಿನಕರ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, “ಮಕ್ಕಳಾದ ತಾವುಗಳು ಚೆನ್ನಾಗಿ ಓದಿ ಭಾರತೀಯ ರಕ್ಷಣಾ ವ್ಯವ್ಯಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ದೇಶಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿ ವಿದ್ಯಾರ್ಥಿಯು ಸಮಯ ಪಾಲನೆ, ಮಹಿಳೆ ಮತ್ತು ಗುರು ಹಿರಿಯರಿಗೆ ಗೌರವ, ವೈಯಕ್ತಿಕ ಸ್ವಚ್ಛತೆ, ನಿರಂತರ ಪ್ರಯತ್ನ, ಮೌಲ್ಯಯುತ ವಿಚಾರಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಮಾತನಾಡಿ, “ಭಾರತ ದೇಶ ಇಂದು ಜಗದ್ವಿಖ್ಯಾತಿಯನ್ನು ಪಡೆಯುತ್ತಿರುವ ರಾಷ್ಟ್ರವಾಗಿದೆ. ದೇಶದ ಯುವಕರಿಗೆ ದೇಶ ಬದಲಾಯಿಸುವ ಸಾಮರ್ಥ್ಯವಿರುತ್ತದೆ. ಪ್ರತಿ ರಂಗದಲ್ಲಿಯೂ ಇಂದು ದೇಶ ಅಭಿವೃದ್ಧಿ ಹೊಂದುತ್ತಿರುವುದು ಯುವ ಶಕ್ತಿಯ ಇಚ್ಛಾಶಕ್ತಿ, ಉತ್ತಮ ಆಡಳಿತ ಹಾಗೂ ಪ್ರತಿಯೊಬ್ಬರ ಹೃದಯ ದೇಶಾಭಿಮಾನದಿಂದ ಮಾತ್ರ.
ದೇಶವನ್ನು 200 ವರ್ಷಗಳ ಕಾಲ ಬ್ರಿಟೀಷರ ಕಪಿಮುಷ್ಠಿಯಿಂದ ನಮ್ಮ ದೇಶ ಸ್ವಾತಂತ್ರ ಪಡೆದ ಸಂಭ್ರಮ. ಅದಕ್ಕಾಗಿ ದೇಶದ ಜನ ವೈಯಕ್ತಿಕ ಜೀವನದ ಸ್ವಾತಂತ್ರ್ಯ ಬದಿಗೊತ್ತಿ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಡುವಲ್ಲಿ ತಮ್ಮ ಜೀವನ-ಜೀವವನ್ನು ತ್ಯಾಗ ಮಾಡಿದ್ದು, ಇವೆಲ್ಲವನ್ನೂ ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸುದಿನ ಇದು. ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ನಾವು ಸವಿಯುತ್ತಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ದೇಶವನ್ನು ಶಕ್ತಿಯುತಗೊಳಿಸುವುದು ನಮ್ಮ ಕರ್ತವ್ಯವಾಗಿದೆ” ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯ ಬೋಧಕೇತರ ಸಿಬ್ಬಂದಿಯಾದ ನಾರಾಯಣ ಗೌಡ ಅವರ ಕಾರ್ಯದಕ್ಷತೆ, ಸೇವಾ ಸಮರ್ಪಣೆ ಹಾಗೂ ಆದರ್ಶಗಳಿಗಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್ ಎಸ್., ಆಡಳಿತಾಧಿಕಾರಿ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ, ಶಿಕ್ಷಕವೃಂದ, ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಮಹಾನ್ ನಾಯಕರ ವೇಷಭೂಷಣಗಳು, ದೇಶಭಕ್ತಿ ಗೀತೆ, ನೃತ್ಯ, ಹಾಗೂ ಪಿರಾಮಿಡ್ ಶೋ ಗಳು ನೋಡುಗರ ಮನಸೂರೆಗೊಂಡವು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….