ಬೆಂಗಳೂರು: ರಾಜ್ಯ ಬಿಜೆಪಿಯ ವಿಧಾನಸಭಾ ಮತ್ತು ಲೋಕಸಭಾ ಸದಸ್ಯರುಗಳಿಗೆ, ಪ್ರಮುಖ ಮುಖಂಡರುಗಳಿಗೆ ಎಲ್ಲಾ ಸತ್ಯಗಳು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೇ, ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ನಮ್ಮ ಮೆಟ್ರೋ ಉದ್ಘಾಟನೆಯೊಂದಿಗೆ ವಂದೇ ಭಾರತ್ ಮೂರು ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಈ ಕುರಿತಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕ್ರೆಡಿಟ್ ವಾರ್ ತೀವ್ರವಾಗಿದೆ. ಈ ಕುರಿತಂತೆ ಅಂಕಿಅಂಶಗಳ ಸಹಿತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ರಾಮಲಿಂಗಾ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
2006 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ, ರಾಜ್ಯದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದಾಗ , ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಎಂ.ಜಿ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ನಮ್ಮ ಮೆಟ್ರೋ ಜನರದ್ದು – ಯಾವ ಪಕ್ಷದ ಸ್ವತ್ತು ಅಲ್ಲ! ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಬಿ.ಜೆ.ಪಿ ಅವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚು.
ಕರ್ನಾಟಕ ಸರ್ಕಾರ ಸರಳ ಪಾಲುದಾರ ಅಲ್ಲ — ಅನೇಕ ಸಂದರ್ಭಗಳಲ್ಲಿ ಅದು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತದೆ, ವಿಶೇಷವಾಗಿ ಜಮೀನು ಖರೀದಿ, ವೆಚ್ಚ ಮಿತಿಗೆ ಮೇಲ್ಪಟ್ಟ ಭಾಗಗಳು ಮತ್ತು ಪ್ರಮುಖ ಯೋಜನಾ ಅಂಶಗಳಿಗಾಗಿ ಕರ್ನಾಟಕ ಸರ್ಕಾರವು ಖರ್ಚು ಮಾಡುತ್ತಿದೆ.
ಅರ್ಧ ಸತ್ಯಗಳನ್ನು ಹರಡುವುದನ್ನು ನಿಲ್ಲಿಸಿ, ಕರ್ನಾಟಕ ಸರ್ಕಾರಕ್ಕೆ ಅದರ ನಿಜವಾದ ಗೌರವ ನೀಡಿ. ನಿಜವಾದ ಮಾಹಿತಿ ಇಲ್ಲಿದೆ ಎಂದಿರು ರಾಮಲಿಂಗಾ ರೆಡ್ಡಿ ಅವರು ಈ ರೀತಿಯ ಅಂಕಿಅಂಶಗಳನ್ನು ನೀಡಿದ್ದಾರೆ.
ಫೇಸ್ 1: ಕರ್ನಾಟಕ ಸರ್ಕಾರ – 30% (ಜಮೀನು ಸೇರಿ), ಕೇಂದ್ರ – 25%, ಉಳಿದ 45% ಸಾಲದ ರೂಪದಲ್ಲಿ.
ಫೇಸ್ 2: ಕರ್ನಾಟಕ – 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ, ಕೇಂದ್ರ – 20%, ಉಳಿದ 50% ಸಾಲ.
ಫೇಸ್ 3: ಕರ್ನಾಟಕ – 20% + ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ – 20%, ಉಳಿದ 60% ಸಾಲ.
ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನಿಗಾಗಿ ದೊಡ್ಡ ಮೊತ್ತ ಹಾಕುತ್ತದೆ, ಮತ್ತು ಯೋಜನೆಗಳನ್ನು ಮುನ್ನಡೆಸಲು ನಿರಂತರವಾಗಿ ಹಣ ನೀಡುತ್ತದೆ — ಅನೇಕ ಬಾರಿ ಕೇಂದ್ರದಷ್ಟು ಅಥವಾ ಅದಕ್ಕಿಂತ ಹೆಚ್ಚು.
ನಿಜ ಹೇಳುವುದಾದರೆ, ಎಷ್ಟು ಕಾಲ ಬಿ.ಜೆ.ಪಿ ನಾಯಕರು ತಮ್ಮದೇ ರಾಜ್ಯವನ್ನು ಇಂಥ ನಿರ್ಲಕ್ಷ್ಯದಿಂದ ಅವಮಾನಿಸುತ್ತಾ, ನಮ್ಮ ಮೆಟ್ರೋ ಕೇಂದ್ರದ ಉಡುಗೊರೆ ಎಂದು ನಟಿಸುತ್ತಾರೆ? ನಂಬಿಸುತ್ತಾರೆ? ಎಂದು ರಾಮಲಿಂಗಾ ರೆಡ್ಡಿ ಅವರು ಲೇವಡಿ ಮಾಡಿದ್ದಾರೆ