ಬೆಂಗಳೂರು: ಪ್ರತಿಯೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರ್ (Ambedkar) ಅವರ ಆಶಯಗಳಲ್ಲಿ ನಂಬಿಕೆ ಇರಿಸಿ ಅವರ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಸ್ಪಷ್ಟ ಕರೆ ನೀಡಿದರು.

ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಮಗೆ ಜೈಕಾರ ಹಾಕಿದ ಕಾರ್ಯಕರ್ತರಿಗೆ ನಯವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಅಥವಾ ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ. ಅಂಬೇಡ್ಕರ್ ಅವರ ಜಯಂತಿ ದಿನ ನನ್ನ ಬಗ್ಗೆ ಘೋಷಣೆಗಳನ್ನು ಕೂಗುವುದು ಬೇಡ. ಹಾಗೆ ಮಾಡುವುದು ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದಂತೆ ಆಗುತ್ತದೆ. ನನ್ನ ವೈಭವಿಕರಣ ಬೇಡ ಎಂದು ಬುದ್ಧಿಮಾತು ಹೇಳಿದರು.
ಈಗಷ್ಟೇ ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ ಮತ್ತು ಮಾಜಿ ಮಂತ್ರಿಗಳಾದ ವೆಂಕಟರಾವ್ ನಾಡಗೌಡರು ಹಾಗೂ ಮಾಜಿ ಶಾಸಕ ಅನ್ನದಾನಿ ಅವರೆಲ್ಲರೂ ಕುಮಾರಣ್ಣನೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ. ಎಲ್ಲರ ಭಾಷಣವನ್ನು ನಾನು ಆಲಿಸಿದೆ. ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸುವ ಈ ವೇದಿಕೆಯಲ್ಲಿ ಮುಖ್ಯಮಂತ್ರಿ ವಿಷಯದ ಬಗ್ಗೆ ಚರ್ಚಿಸುವುದು ಸರಿಯಲ್ಲ. ನಾವು ಬಾಬಾ ಸಾಹೇಬರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಕೆಲಸ ಸಚಿವರು ಕರೆ ನೀಡಿದರು.
ದೇವರ ದಯೆಯಿಂದ ನಾನು ಎರಡು ಬಾರಿ ಈ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಪೂರ್ಣಪ್ರಮಾಣದ ಬಹುಮತ ಇಲ್ಲದೆ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಸಮಾಜದ ಎಲ್ಲಾ ವರ್ಗದ ಜನರನ್ನು ಸಮಾನ ದೃಷ್ಟಿಯಲ್ಲಿ ನೋಡಿದ್ದೇನೆ. ಹೀಗಾಗಿ ನನ್ನ ಮೇಲೆ ಎಲ್ಲರಿಗೂ ಪ್ರೀತಿ ವಿಶ್ವಾಸ ಇದೆ. ನೆನ್ನೆಯ ದಿನ ನಾನು ವಿಧಾನಸೌಧಕ್ಕೂ ಭೇಟಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿಯೂ ಕೆಲ ಮಾಧ್ಯಮ ಸ್ನೇಹಿತರು ನೀವು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಶುಭ ಹಾರೈಸಿದರು. ಇದೆಲ್ಲವೂ ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ನಂಬಿಕೆಯನ್ನು ಸೂಚಿಸುತ್ತದೆ. ಇಂತಹ ವೇದಿಕೆಯಲ್ಲಿ ರಾಜಕೀಯ ಮಾತನಾಡುವುದು ಬೇಡ ಎಂದು ಅವರು ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು.
ಪಕ್ಷವನ್ನು ನಾವು ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಕಟ್ಟಬೇಕು. ಗ್ರಾಮ ಹೋಬಳಿ ಮತ್ತು ಮತಗಟ್ಟೆಗಳ ಮಟ್ಟದಲ್ಲಿಯೂ ಬಲಿಷ್ಠವಾಗಿ ಕಾರ್ಯಕರ್ತರ ಪಡೆಯಲು ಸೃಷ್ಟಿ ಮಾಡಬೇಕು. ಶೋಷಿತರ ಮತ್ತು ಧನಿ ಇಲ್ಲದವರ ದನಿಯಾಗಿ ನಾವು ಕೆಲಸ ಮಾಡಬೇಕು. ಇದುವೇ ಬಾಬಾ ಸಾಹೇಬ್ ಅವರು ಹೇಳಿದ ಸಂದೇಶ. ಆದರೆ ಕೆಲವರು ಅವರು ಬರೆದ ಸಂವಿಧಾನದ ಪೀಠಿಕೆಯನ್ನು ಪ್ರಚಾರಕಷ್ಟೇ ಓದುತ್ತಾರೆ. ಅವರು ತಪಸ್ಸಿನಂತೆ ರಚಿಸಿದ ಸಂವಿಧಾನವನ್ನು ಕೇವಲ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಅನ್ನದಾನಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕರಾದ ಟಿ ಎ ಶರವಣ, ಟಿ ಜವರಾಯಿಗೌಡ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಐದು ಪಾಲಿಕೆಗಳ ಅಧ್ಯಕ್ಷರುಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.