ದೊಡ್ಡಬಳ್ಳಾಪುರ: ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜ ವತಿಯಿಂದ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಕಾರೇಪುರ ಗ್ರಾಮದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ (National Farmers’ Day) ಮತ್ತು ವಿವಿಧ ಇಲಾಖೆಗಳ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪಿ ಮಾತನಾಡಿ, ಪ್ರತಿವರ್ಷ ಡಿಸೆಂಬರ್ 23 ರಂದು ಮಾಜಿ ಪ್ರಧಾನ ಮಂತ್ರಿಗಳಾದ ಚೌಧರಿ ಚರಣ್ ಸಿಂಗ್ ಅವರು ಕೃಷಿಗೆ ಅಪಾರ ಸೇವೆಯನ್ನು ನೀಡಿರುವ ಸಲುವಾಗಿ ಜನ್ಮ ದಿನವನ್ನು ರಾಷ್ಟೀಯ ರೈತರ ದಿನವನ್ನಾಗಿ ದೇಶದ್ಯಾಂತ 2001 ರಿಂದ ಆಚರಿಸುತ್ತಿದ್ದಾರೆ.
ಚೌಧರಿ ಚರಣ್ ಸಿಂಗ್ ಅವರು ಕೃಷಿಗೆ ಸಂಬಂಧಿಸಿದ ಕಾಯಿದೆ ಮತ್ತು ಮಸೂದೆಗಳನ್ನು ಜಾರಿ ಮಾಡಿರುವ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತ ನಮ್ಮ ದೇಶದ ಬೆನ್ನಲುಬಾಗಿದ್ದು ಪ್ರತಿದಿನ ರೈತರ ನೆನಯಬೇಕು ಎಂದು ಸ್ಮರಿಸಿದರು.
ಶಾಸಕ ಧೀರಜ್ ಮುನಿರಾಜು ಅವರು ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ರೈತರನ್ನು ಪ್ರತಿದಿನ ನೆನಯಬೇಕು. ರೈತ ನಮ್ಮ ದೇಶದ ಬೆನ್ನುಲುಬು. ರೈತರಿಗಾಗಿ ಹಲವು ಕಾರ್ಯಕ್ರಮಗಳನ್ನು ಕೃಷಿ ಇಲಾಖೆಯಿಂದ ಆಯೋಜಿಸುತ್ತಿದ್ದು, ರೈತರು ಸದರಿ ಕಾರ್ಯಕ್ರಮದ ಮತ್ತು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಹಾಗೂ ಕೃಷಿಯಲ್ಲಿ ರೈತರು ವಿವಿಧ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಕುಮಾರಿ ಸುಪ್ರಿಯಾ, ಗೋಪಿಕಾ ಮಾತನಾಡಿ, ರೈತರು ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿ, ಬೀಜೋತ್ಪಾದನೆಯ ಮುಖಾಂತರ ಕೃಷಿಯಲ್ಲಿ ಹೆಚ್ಚು ಲಾಭಗಳಿಸುವುದರ ಜೊತೆಗೆ ತಮಗೆ ಬೇಕಾಗುವ ಬಿತ್ತನೆ ಬೀಜಗಳನ್ನು ತಮ್ಮ ಜಮೀನಿನಲ್ಲೇ ಬೆಳೆದುಕೊಳ್ಳಬಹುದೆಂದು ತಿಳಿಸಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮುರಳಿಧರ್, ರೈತ ಸಂಘದ ಜಿಲ್ಲಾ ಅಧ್ಯಕರಾದ ಪ್ರಸನ್ನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರನ್ನು ಸನ್ಮಾನಿಸಿಲಾಯಿತು. ನಂತರ ತುಂತುರು ನೀರಾವರಿ ಘಟಕ, ಕೃಷಿ ಯಾಂತ್ರೀಕರಣ ಯೋಜನೆಯಡಿ ರೋಟೋವೇಟರ್ ಗಳನ್ನು ಫಲಾನುಭವಿ ರೈತರಿಗೆ ವಿತರಿಸಲಾಯಿತು.

ದೊಡ್ಡಬಳ್ಳಾಪುರ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಅರಸೇಗೌಡ ಸೇರಿದಂತೆ, ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕರುಗಳು, ರೈತ ಸಂಘದ ಮುಖಂಡರಾದ ಹನುಮೇಗೌಡ, ಹನುಮಂತರಾಯಪ್ಪ, ಕೇಶವಮೂರ್ತಿರವರು, ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕಲಾವತಿ ಸೇರಿದಂತೆ ಸದಸ್ಯರುಗಳು, ಕೃಷಿ ಸಂಬಂಧಿತ ಇಲಾಖೆಯ ಎಲ್ಲಾ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿಗಳು, ಪ್ರಗತಿ ಪರ ರೈತರು ಮತ್ತು ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.