ಮೆಕ್ಸನ, (ಅಹಮ್ಮದಾಬಾದ್): ಸಾವನ್ನಪ್ಪಿದಾನೆ ಎನ್ನಲಾದ ಉದ್ಯಮಿಯೋರ್ವ ತನ್ನದೇ ತಿಥಿ ಕಾರ್ಯಕ್ರಮದಂದು ಮನೆಗೆ ಆಗಮಿಸಿ ಕುಟುಂಬಸ್ಥರು ಸೇರಿ ನೆರೆದಿದ್ದವರನ್ನು ಅಚ್ಚರಿಗೊಳಿಸಿರುವ ಘಟನೆಯೊಂದು ಗುಜರಾತ್ನ (gujarat) ಮೆಕ್ಸನ ಜಿಲ್ಲೆಯ ನರೋದ ಬಳಿ ನಡೆದಿದೆ.
ಪ್ರಭುನಗರ ಸೊಸೈಟಿಯ ನಿವಾಸಿ 33 ವರ್ಷದ ಬ್ರಿಜೇಶ್ ಸುಥರ್ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿ ಬಳಿಕ ತಿಥಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಸ್ಥಳೀಯರನ್ನು ಆಹ್ವಾನಿಸಿದ್ದಾರೆ. ತಿಥಿ ದಿನ ಆಗಮಿಸಿದ ಜನರು ಮಧ್ಯಾಹ್ನ ಊಟಕ್ಕೆ ಕುಳಿತಿದ್ದಾರೆ. ಖಾದ್ಯಗಳನ್ನು ಬಡಿಸುತ್ತಿರುವಾಗ ಇದೇ ಬ್ರಿಜೇಶ್ ಸುಥರ್ ನಡೆದುಕೊಂಡು ತನ್ನದೇ ತಿಥಿಗೆ ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹಲವು ಕಂಪನಿ, ಉದ್ಯಮಗಳಲ್ಲಿ ಕೆಲಸ ಮಾಡಿ ಬಳಿಕ ಷೇರುಮಾರುಕಟ್ಟೆಯಲ್ಲಿ ಬ್ರಿಜೇಶ್ ಸುಥರ್ ಸಕ್ರಿಯರಾಗಿದ್ದರು. ಆದರೆ ಮಾರುಕಟ್ಟೆಯ ಏರಿಳಿತದಿಂದ ಬ್ರಿಜೇಶ್ ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದರು. ಅಪಾರ ನಷ್ಟ ಅನುಭವಿಸಿದ ಬ್ರಿಜೇಷ್ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು.
ಹೀಗಿರುವಾಗ ಅಕ್ಟೋಬರ್ 27 ರಂದು ಬ್ರಿಜೇಶ್ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದು, ಎಲ್ಲಿ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಲಾಗಿತ್ತು.
ಈ ನಡುವೆ ನವೆಂಬರ್ 10 ರಂದು ಸಬರಮತಿ ನದಿ ಸೇತುವೆ ಬಳಿ ಕೊಳೆತ ಮೃತದೇಹವೊಂದು ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಕುರಿತಂತೆ ಬ್ರಿಜೇಶ್ ಸುಥರ್ ಕುಟುಂಬಸ್ಥರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಗುರುತ ಪತ್ತೆಗೆ ಸೂಚನೆ ನೀಡಲಾಗಿತ್ತು. ಸ್ಥಳಕ್ಕೆ ಬಂದ ಕುಟುಂಬಸ್ಥರು ಆಗಮಿಸಿ ಇದು ಬ್ರಿಜೇಶ್ ಮೃತದೇಹ ಎಂದು ಖಚಿತಪಡಿಸಿದ್ದರು. ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಅಲ್ಲದೆ ಅದರ ಮರು ದಿನ ತಿಥಿ ಕಾರ್ಯಕ್ರಮ ಆಯೋಜಿಸಿದ್ದರು.
ಆದರೆ ತಿಥಿಯ ದಿನವೇ ಬ್ರಿಜೇಶ್ ಅವರ ಮನೆಗೆ ಮರಳಿದರು, ಇದು ಅವರ ಕುಟುಂಬಕ್ಕೆ ಆಘಾತ ಮತ್ತು ಸಂತೋಷವನ್ನುಂಟುಮಾಡಿತು. ಇನ್ನೂ ಅಪನಂಬಿಕೆಯಲ್ಲಿರುವ ಕುಟುಂಬವು ಅವನ ಸ್ಥಳದಲ್ಲಿ ಯಾರು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆಶ್ಚರ್ಯ ಪಡುತ್ತಾರೆ.
ನಿಜವಾಗಿ ಯಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಸೇತುವೆ ಬಳಿ ಪತ್ತೆಯಾಗಿರುವ ಮೃತದೇಹ ಅಪರಿಚಿತ ವ್ಯಕ್ತಿಯದ್ದಾಗಿದ್ದು, ಮೃತರ ಕುಟುಂಬ ಹಾಗೂ ಸಂಬಂಧಿಕರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ.