Daily story: ಕಳ್ಳರ ಗುಂಪೊಂದು ಒಂದೂರಿನಲ್ಲಿ ದೊಡ್ಡ ಜಮೀನುದಾರನ ಮನೆಗೆ ಕನ್ನ ಹಾಕಿ ಬಂದ ಚಿನ್ನ, ಬೆಳ್ಳಿ, ಹಣ, ಬಟ್ಟೆಗಳನ್ನೆಲ್ಲ ಸಮನಾಗಿ ಹಂಚಿಕೊಂಡರು. ಆ ಮನೆ ಕೆಲಸದಾಳನ್ನು ಸಹ ಕದ್ದು ತಂದಿದ್ದರು! ಕಳವು ಸಾಮಾನು ಬಹಳ ಇತ್ತು. ಅವನ್ನು ಹೊತ್ತು ತರಲು ಇರಲೆಂದು ಕೆಲಸದವನನ್ನು ಕರೆತಂದಿದ್ದರು. ಚಿನ್ನ, ಹಣವನ್ನೇನೋ ಹಂಚಿಕೊಂಡರು. ಆದರೆ ಎಲ್ಲರಿಗೂ ಚಿಂತೆಯಾಯಿತು.
ಕರೆತಂದ ಕೆಲಸದಾಳು ಎಲ್ಲರ ಕೆಲಸಗಳನ್ನು ಮಾಡಿಕೊಂಡು ಹಾಯಾಗಿರಲಿ ಎಂದು ಕಳ್ಳರ ಮುಖಂಡನು ತೀರ್ಮಾನಿಸಿದನು. ‘ಏ ಹುಡುಗ ನಿನ್ನ ಹೆಸರೇನು?’ ಎಂದು ಕೆಲಸದಾಳನ್ನು ಪ್ರಶ್ನಿಸಿದಾಗ, ಅವನು ನಡುಗುತ್ತಲೇ ‘ತಿಮ್ಮಣ್ಣ’ ಎಂದನು. ‘ನಾವು ಹೇಳಿದ ಹಾಗೆ ಕೇಳುತ್ತಿಯಾ?’ ಎಂದು ಕಳ್ಳರ ನಾಯಕ ಆರ್ಭಟಿಸಿದ.
ಕೆಲಸದಾಳು ನಿತ್ಯ ಎಲ್ಲಿ ಯಾದರೂ ಒಂದು ಕಡೆ ಕಳ್ಳರು ಕಳವು ಮಾಡುತ್ತಿದ್ದರು. ಹಾಗೆ ತಂದ ಮಾಲನ್ನು ಪಾಲು ಮಾಡಿಕೊಂಡ ನಂತರ ಕೇಕೆ ಹಾಕಿ ಕುಣಿಯುತ್ತಿದ್ದರು. ತಿಮ್ಮಣ್ಣ ಅವರ ಕೈಕೆಳಗಿನ ಎಲ್ಲ ಕೆಲಸಗಳನ್ನು ಕೇಳುತ್ತಿದ್ದ, ಚಹ, ಊಟ ಸಿದ್ಧಪಡಿಸುವುದು, ಕಳವಿನ ಸಾಮಾನುಗಳನ್ನು ಜೋಡಿಸಿ ಒಂದು ಪೆಟ್ಟಿಗೆಯಲ್ಲಿಡುವುದು ಅವನ ನಿತ್ಯದ ಕೆಲಸವಾಗಿತ್ತು.
ಕಳ್ಳರು ತಿಮ್ಮಣ್ಣನಿಗೆ ಸರಿಯಾಗಿ ಊಟ ಕೊಡದೆ ತಾವು ತಿಂದುಂಡು ಬಿಟ್ಟ ಆಹಾರವನ್ನು ಮಾತ್ರ ತಿನ್ನಲು ಕೊಡುತ್ತಿದ್ದರು, ತಿಮ್ಮಣ್ಣ ಹಸಿವೆ ತಾಳದೆ ಏನಾದರೂ ತಿಂದುಬಿಟ್ಟರೆ ಅವನ ಮೈಯೊಳೆಗೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿದ್ದರು. ತಿಮ್ಮಣ್ಣನಿಗೆ ಈ ನರಕದ ಜೀವನ ಸಾಕು ಸಾಕಾಗಿತ್ತು.
ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ವಿಚಾರಿಸುತ್ತಿದ್ದ. ಆದರೆ ಸಾಧ್ಯವಾಗಲಿಲ್ಲ. ಒಂದು ಸಲ ಯಾವುದೋ ಸಣ್ಣ ತಪ್ಪಿಗೆ ಒಬ್ಬ ಕಳ್ಳ ತಿಮ್ಮಣ್ಣನಿಗೆ ಚೆನ್ನಾಗಿ ಹೊಡೆದನು. ಹೊಡೆತದ ಭರಸಕ್ಕೆ ಕಳ್ಳನ ಪಾಕೇಟಿನಿಂದ ಮೋಬೈಲ್ ಫೋನ್ ಬಿದ್ದು ಬಿಟ್ಟಿತು. ಆದರೆ ಕಳ್ಳನಿಗೆ ತಿಳಿಯಲಿಲ್ಲ. ಅಂದು ರಾತ್ರಿ ತಿಮ್ಮಣ್ಣನು ಮೆಲ್ಲಗೆ ಆ ಫೋನಿನಿಂದಲೇ ಪೋಲೀಸರಿಗೆ ಕಳ್ಳರ ಗುಂಪಿನ ಸುಳಿವನ್ನು ಕೊಟ್ಟನು.
ಕಳ್ಳರು ರಾತ್ರಿಯೆಲ್ಲ ತಿಂದುಂಡು ಮೈಮರೆತು ಮಲಗಿದ್ದರು, ಬೆಳಕು ಹರಿಯುತ್ತಲೇ ಕಣ್ಣು ಬಿಟ್ಟು ನೋಡಿದಾಗ ಸುತ್ತಲು ಪೋಲೀಸರು, ಕೈಗೆ ಕೋಳ ಬಿಗಿದಿದ್ದರು.
ತಿಮ್ಮಣ್ಣನಿಗೆ ಹೊಟ್ಟೆ ತುಂಬಾ ಅನ್ನ ಹಾಕಿದ್ದರೆ ಅವನು ನಮ್ಮ ಸೇವೆ ಮಾಡುತ್ತಿದ್ದ. ಅವನಿಗೆ ಹಿಂಸೆ ಕೊಟ್ಟಿದ್ದರಿಂದಲೇ ನಮಗೆ ಈ ಗತಿ ಎಂದು ಕಳ್ಳರು ಪರಿತಾಪ ಪಟ್ಟರು. ಕಳ್ಳರನ್ನು ಪೋಲೀಸರು ಎಳೆದುಕೊಂಡು ಹೋದರು, ತಿಮ್ಮಣ್ಣ ಕಳ್ಳರ ಕಪಿಮುಷ್ಠಿಯಿಂದ ಬಿಡುಗಡೆ ಗೊಂಡನು.
ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)