ದೊಡ್ಡಬಳ್ಳಾಪುರ: ಬೇಸಿಗೆ ಬಿಸಿ, ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ (Police) ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಕೆ.ಎಸ್.ನಾಗರಾಜ್ ಅವರ ಕಟ್ಟುನಿಟ್ಟಿನ ವಾರ್ನಿಂಗ್ ರೌಡಿ ಶೀಟರ್ಗಳ ಬೆವರಿಳಿಯುವಂತೆ ಮಾಡಿದ ಘಟನೆ ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಭಾನುವಾರ ಕಂಡು ಬಂತು.
ಈ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಕೆ.ಎಸ್.ನಾಗರಾಜ್, ರೌಡಿ ಶೀಟರ್ಗಳು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದರೆ ಗಡಿಪಾರು ಮಾಡುವುದು ಖಚಿತ ಎನ್ನುವ ಎಚ್ಚರಿಕೆ ನೀಡಿದರು.
ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಮತ್ತು ರೌಡಿಶೀಟರ್ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ರೌಡಿಶೀಟರ್ಗಳ ಪರೇಡ್ ನಡೆಸಿದರು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ನಾಗರಾಜ್, ದೊಡ್ಡಬಳ್ಳಾಪುರ ಡಿವೈಎಸ್ಪಿ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ 248 ರೌಡಿಶೀಟರ್ಗಳು ಇದ್ದಾರೆ. ಇದರಲ್ಲಿ ಭಾನುವಾರ ನಡೆದ ಪರೇಡ್ ನಲ್ಲಿ 118 ಜನ ಮಾತ್ರ ಹಾಜರಾಗಿದ್ದಾರೆ. ಕೆಲವರು ಅನಾರೋಗ್ಯ ಕಾರಣದಿಂದ ಬಂದಿಲ್ಲ, ಮತ್ತೆ ಕೆಲವರು ಜೈಲಿನಲ್ಲಿದ್ದಾರೆ. ಇದರಲ್ಲಿ 25 ಜನ ಕೊಲೆ ಆರೋಪಿಗಳಿದ್ದಾರೆ ಎಂದರು.
ಉದ್ದೇಶ ಪೂರ್ವಕವಾಗಿ ಕಾನೂನಿನ ಭಯವಿಲ್ಲದೇ ಜನಸಾಮಾನ್ಯರಿಗೆ ತೊಂದರೆ ನೀಡುವವರನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. ಕೆಲವರಿಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದ್ದು, ಮತ್ತೆ ಕೆಲವರಿಗೆ ಇನ್ನೂ ತಿಳುವಳಿಕೆ ಬರದೇ ಪುನರಾರ್ವತಿತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಇಂತಹವರಿಗೆ ಮತ್ತಷ್ಟು ಕಾನೂನಿನ ಕಠಿಣ ಶಿಕ್ಷೆ ವಿಧಿಸಲಾಗುವುದು. ಗಡಿಪಾರು ಸಹ ಮಾಡಲಾಗುವುದು ಎಂದರು.
ರೌಡಿ ಶೀಟರ್ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಇಂತಹ ಕೃತ್ಯಗಳಿಗೂ ಸಹ ಕುಮ್ಮಕ್ಕು ನೀಡಬಾರದು. ತಪ್ಪು ಮಾಡಿದ್ದು ಕಂಡುಬಂದರೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾರೇ ಶಿಫಾರಸ್ಸು ಮಾಡಿದರೂ ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಿಲ್ಲ
ರೌಡಿಶೀಟರ್ ಪಟ್ಟಿಯಲ್ಲಿ ಹೆಸರು ಸೇರಲು ಕೇವಲ ಒಂದು ಗಂಟೆ ಸಾಕು, ಆದರೆ ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಕ್ಕೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು.
ಯಾವ ಅಪರಾಧದಲ್ಲಿ ಭಾಗಿಯಾಗದೇ ಸನ್ನಡತೆಯಿಂದ ಜೀವನ ಸಾಗಿಸುತ್ತಿರುವ ಹಾಗೂ 60 ವರ್ಷ ಮೇಲ್ಪಟ್ಟವರ ರೌಡಿಶೀಟರ್ ಗಳ ಚಲನವಲನ ಗಮನಿಸಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರವಿ, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷಾ, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ಗೌಡ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಲ್ಲಪ್ಪ ಶಂಸಕರಪ್ಪ ಖರಾತ್ ಇದ್ದರು.