ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಸ್ಥಳೀಯ ಗ್ರಾಮಸ್ಥರಿಗೆ ಹಲವು ಗಣ್ಯರಿಂದ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಹೇಗಾದರು ಮಾಡಿ ಧರಣಿಯನ್ನು ಅಂತ್ಯಗೊಳಿಸಲು ಬಿಬಿಎಂಪಿ ರೂಪಿಸಿದ್ದ ತಂತ್ರದಂತೆ ಶನಿವಾರ ಧರಣಿ ನಿರತ ರೈತರನ್ನು ಬಲಪ್ರಯೋಗ ನಡೆಸುವ ಮೂಲಕ ಬಂಧಿಸಿ ಸಂಜೆಯ ವೇಳೆಗೆ ಬಿಡುಗಡೆ ಮಾಡಲಾಗಿದೆ.
ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ಖಾನ್ ನೇತೃತ್ವದಲ್ಲಿ ಮಾರ್ಷಲ್ಗಳು ಹಾಗೂ ಸ್ಥಳೀಯ ಪೊಲೀಸರುಸ ಶನಿವಾರ ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ಧರಣಿ ನಿರತರು ಹಾಕಿದ್ದ ಶಾಮಿಯಾನವನ್ನು ತೆರವು ಮಾಡಲು ಮಾರ್ಷ್ಲ್ಗಳು ಮುಂದಾಗುತ್ತಿದ್ದಂತೆ ಇದಕ್ಕೆ ಅಡ್ಡಿಪಡಿಸಿದ ಸ್ಥಳೀಯ ಗ್ರಾಮಸ್ಥರು ಹಾಗೂ ಮುಖಂಡರನ್ನು ಮಾರ್ಷ್ಲ್ಗಳು, ಪೊಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸುವ ಮೂಲಕ ಸುಮಾರು 50 ಜನರನ್ನು ಬಂಧಿಸಿ ಧರಣಿ ಸ್ಥಳದಿಂದ ಬೇರೆಡೆಗೆ ಕರೆದೊಯ್ದುರು.
ಪೊಲೀಸರು ಬಂಧಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಕಸ ಘಟಕದ ಸಮೀಪದ ತಣ್ಣೀರನಹಳ್ಳಿ ಗ್ರಾಮದ ರೈತ ಸುರೇಶ್ ಅವರ ಮೂತಿಗೆ ಪೊಲೀಸರು ಲಾಠಿ ಏಟಿನಿಂದ ಹಲ್ಲುಗಳು ಮುರಿದಿವೆ. ಧರಣಿಗೆ ಬೆಂಬಲ ಸೂಚಿಸಿ ಶನಿವಾರ ಧರಣಿಯಲ್ಲಿ ಕಾರ್ಯಕರ್ತರೊಂದಿಗೆ ಭಾಗವಹಿಸಿದ್ದ ಕೊರಟಗೆರೆ ತಾಲ್ಲೂಕು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ಭಾಷ ಅವರ ಸೊಂಟಕ್ಕೆ ತೀವ್ರ ಪಟ್ಟಾಗಿದೆ.
ಧರಣಿ ಸ್ಥಳಕ್ಕೆ ಶನಿವಾರ ಬೆಳಿಗ್ಗೆ ತಹಶೀಲ್ದಾರ್ ಟಿ.ಎಸ್.ಶಿವರಾಜು, ಡಿವೈಎಸ್ಪಿ ನಾಗರಾಜು ಅವರು ಭೆಟಿ ನೀಡಿ ‘ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿಭಟನಾ ಧರಣಿಯನ್ನು ಹಿಂಪಡೆಯುವಂತೆ ಸೂಚಿಸಿದರು. ಆದರೆ ಪ್ರತಿಭಟನಾಕಾರರು ಒಪ್ಪದೇ ಧರಣಿ ಮುಂದುವರೆಸುತ್ತಿದ್ದಾಗ ಬಿಬಿಎಂಪಿ ಮಾರ್ಷಲ್ಗಳು ಶಾಮಿಯಾನ ತೆರವು ಮಾಡುವ ಕಾರ್ಯ ಆರಂಭಿಸಿದರು. ಸುಮಾರು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಧರಣಿ ನಿರತರನ್ನು ಬಂಧಿಸಿದರು.
ಅಧಿಕಾರಿಗಳ ಮೇಲೆ ಗುಮಾನಿ: ಬಿಬಿಎಂಪಿ ಇಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ತಂದು ರಾಶಿಹಾಕಿರುವ ಕಸದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಂಟಾಗಿರುವ ಅನಾಹುತಗಳನ್ನು ಕಣ್ಣಾರೆಕಂಡಿದ್ದ ಪೊಲೀಸರು ರೈತರ ಮನವೊಲಿಸಿ ಧರಣಿ ಅಂತ್ಯಗೊಳಿಸುವಲ್ಲಿ ವಿಫಲರಾಗಿದ್ದರು. ಇದರಿಂದ ಬೇಸತ್ತಿದ್ದ ಬಿಬಿಎಂಪಿ ಅಧಿಕಾರಿಗಳು ಹತ್ತು ದಿನಗಳಿಂದಲು ಇಲ್ಲಿಗೆ ಭೇಟಿ ನೀಡಿ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡುತ್ತಲೇ ಇದ್ದರು. ಆದರೆ ಧರಣಿ ಅಂತ್ಯಗೊಳ್ಳುವುದಕ್ಕೆ ಬದಲಾಗಿ ಮತ್ತಷ್ಟು ತೀವ್ರಗೊಳ್ಳತೊಡಗಿತ್ತು. ಹೀಗಾಗಿ ಶನಿವಾರ ಪೊಲೀಸರನ್ನು ನಂಬದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ಖಾನ್ ಅವರು ಮಾರ್ಷಲ್ ಗಳ ಮೂಲಕ ಶಾಮಿಯಾನ ತೆರವು, ಧರಣಿ ನಿರತ ಬಂಧನಕ್ಕೆ ಸೂಚಿನೆ ನೀಡಿದರು. ಇವರೊಂದಿಗೆ ಪೊಲೀಸರು ಸೇರಿಕೊಂಡರು.
ಮಾರ್ಷಲ್ಗಳ ಬಳಕೆಗೆ ತೀವ್ರ ಖಂಡನೆ: ಸಂವಿಧಾನದ ಅಡಿಯಲ್ಲಿ ನಿರ್ಮಾಣವಾಗಿರುವ ನಾಗರೀಕ ಪೊಲೀಸರಿಗಷ್ಟೆ ಧರಣಿ ನಿರತರನ್ನು ಬಂಧಿಸುವ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅಧಿಕಾರ ನೀಡಲಾಗಿದೆ. ಆದರೆ ಬಿಬಿಎಂಪಿ ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸದವರಿಗೆ ದಂಢವಿಧಿಸುವ ಸಲುವಾಗಿ ಒಪ್ಪಂದದ ಆಧಾರ ಮೇಲೆ ನೇಮಕ ಮಾಡಿಕೊಂಡಿರುವ ಮಾರ್ಷಲ್ ಗಳ ಮೂಲಕ ಧರಣಿ ನಿರತ ಗ್ರಾಮಸ್ಥರನ್ನು ಬಂಧಿಸಲು ಬಳಸಿಕೊಂಡಿರುವುದು ಖಂಡನೀಯ ಎಂದು ಧರಣಿಯಲ್ಲಿ ಭಾಗವಹಿಸಿದ್ದ ಕೃಷ್ಣಮೂರ್ತಿ, ರಾಜಣ್ಣ, ತಿಳಿಸಿದ್ದಾರೆ.
ಬಿಬಿಎಂಪಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಸೃಷ್ಠಿಸಿರುವ ಅವಾಂತರಕ್ಕೆ ಬೇಸತ್ತಿರುವ ಪೊಲೀಸರು ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ಮಾಲೀಕರ ಮೇಲೆಯೇ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿರುವ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ಖಾನ್ ಅವರು ಬೆಂಗಳೂರಿನಲ್ಲಿನ ಕಸವನ್ನು ಹೇಗಾದರು ಮಾಡಿ ವಿಲೇವಾರಿ ಮಾಡಲೇಬೇಕು ಎನ್ನುವ ಏಕೈಕ ಉದ್ದೇಶದಿಂದ ತಾವು ನೇಮಕ ಮಾಡಿಕೊಂಡಿರುವ ಮಾರ್ಷಲ್ಗಳನ್ನು ಬಳಸಿಕೊಂಡು ಧರಣಿ ನಿರತರ ಮೇಲೆ ಬಲಪ್ರಯೋಗ ನಡೆಸಿದ್ದಾರೆ ಎಂದು ದೂರಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಂತೆ ಇತರೆ ಇಲಾಖೆಗಳವರು ನಮ್ಮ ನೌಕರರು ಅಥವಾ ಸಿಬ್ಬಂದಿಯನ್ನು ಬಳಸಿಕೊಂಡೇ ತಮ್ಮ ವಿರುದ್ಧದ ಧರಣಿ, ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುವುದಾದರೆ ಪೊಲೀಸ್ ವ್ಯವಸ್ಥೆಯ ಅಗತ್ಯವಾದರು ಏನಿದೆ ಎಂದು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ತ್ಯಾಜ್ಯದ ವಿರುದ್ದ ಪಕ್ಷಾತೀತ ಹೋರಾಟಕ್ಕೆ ನಿರ್ಧಾರ: ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕವನ್ನು ಬಂದ್ ಮಾಡುವಂತೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಎಂಎಸ್ಜಿಪಿ ಘಟಕಕ್ಕೆ ಕಸದ ಲಾರಿಗಳು ಬರದಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಘಟಕ ಸ್ಥಗಿತಗೊಳಿಸುವ ಕುರಿತು ರೂಪುರೇಷೆಗಳನ್ನು ಸಿದ್ದಪಡಿಸಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂಎಸ್ಜಿಪಿ ಕಸ ವಿಲೇವಾರಿ ಘಟಕದಿಂದ ಆಗುತ್ತಿರುವ ದುಷ್ಪರಿಣಾಮಗಳ ಹಾಗೂ ಇಲ್ಲಿನ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಈ ಹಿಂದೆ, ಟೆರ್ರಾಫರ್ಮಾ ಘಟಕದ ವಿರುದ್ದ ಹೋರಾಟ ಮಾಡಿ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ಈಗಲೂ ಸಹ ತೀವ್ರ ಹೋರಾಟ ನಡೆಸುವ ಕುರಿತು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಈ ವೇಳೆ ನವ ಬೆಂಗಳೂರು ಹೋರಾಟ ಸಮಿತಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಿಂದ ಪ್ರತಿಭಟನೆ ಆರಂಭವಾಯಿತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಹೋರಾಟಗಾರರಿಗೂ ತಿಳಿಸಿದ್ದೆ. ಗ್ರಾಮಸಭೆಗಳಲ್ಲಿಯೂ ಸಹ ಇದು ಚರ್ಚೆಯಾಗಿತ್ತು.
ಶನಿವಾರ ಪ್ರತಿಭಟನೆಗೆ ತಡೆಯೊಡ್ಡಿ, ಧರಣಿ ನಿರತರನ್ನು ಬಂಧಿಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ, ಬಂಧಿತ ಧರಣಿ ನಿರತರನ್ನು ಬಿಡಿಸಲಾಗಿದೆ. ಎಂಎಸ್ಜಿಪಿ ಘಟಕಕ್ಕೆ ಕಸದ ಲಾರಿಗಳು ಬರದಂತೆ ಬಿಬಿಎಂಪಿ ಹಾಗೂ ಪೊಲೀದ್ ಇಲಾಖೆಗೆ ಸೂಚನೆ ನೀಡಲಾಗಿದೆ. ಎಂಎಸ್ಜಿಪಿ ಘಟಕವನ್ನು ಮುಚ್ಚಿಸಲು ದೊಡ್ಡಬೆಳವಂಗಲ ವ್ಯಾಪ್ತಿಯ 5 ಗ್ರಾಮ ಪಂಚಾಯಿತಿಗಳ ಜನಪ್ರತಿನಿಗಳು, ರೈತರು, ಮುಖಂಡರ ಸಭೆಯನ್ನು ಕರೆದು ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ ಮಾತನಾಡಿ, ಈ ಹಿಂದೆ ಹೋರಾಟದ ವೇಳೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮೂರು ಭರವಸೆ ನೀಡಿದ್ದರು. ಸ್ಥಳೀಯರು ಹೋರಾಟ ಆರಂಭಿಸಿದ್ದಾರೆ. ಎಂಎಸ್ಜಿಪಿ ಘಟಕ ಸ್ಥಗಿತ ಮಾಡುವ ಬಗ್ಗೆ ನಮ್ಮೆಲ್ಲರ ಬೆಂಬಲವಿದೆ. ಭಾನುವಾರ ಸಂಜೆ ದೊಡ್ಡಬೆಳವಂಗಲದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ದೊಡ್ಡಬೆಳವಂಗಲ, ಸಾಸಲು ಹೋಬಳಿಯ ಚುನಾಯಿತ ಜನ ಪ್ರತಿನಿಧಿಗಳು, ರೈತರು, ಹಾಗೂ ವಿವಿಧ ಸಂಘಟನೆಗಳ ಸಭೆ ಸೇರಿ ಧರಣಿಯ ರೂಪುರೇಷೆ ಚರ್ಚಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಮಂಜುನಾಥ್, ಕಿಟ್ಟಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….