ಸಾಕು ನಾಯಿ ದಾಳಿ ಆರೋಪ: ನಟ ದರ್ಶನ್ ವಿರುದ್ಧ ಮಹಿಳೆ ದೂರು

ಬೆಂಗಳೂರು, (ನ.01): ಸಾಕು ನಾಯಿ ದಾಳಿ ಆರೋಪದ ಮೇರೆಗೆ ಖ್ಯಾತ ನಟ ತೂಗುದೀಪ ದರ್ಶನ್ ಅವರ ವಿರುದ್ಧ ಮಹಿಳೆಯೊಬ್ಬರು ಆರ್​ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಟ ದರ್ಶನ್ ಮನೆಯ ಸಾಕು ನಾಯಿ, ಮಹಿಳೆಯೊಬ್ಬರಿಗೆ ಕಡಿದು ಗಾಯಗೊಳಿಸಿ ಆರೋಪದ ಮೇರೆಗೆ ವಕೀಲರಾದ ಅಮಿತ್ ಜಿಂದಾಲ್ ಎಂಬ ಮಹಿಳೆಯು ದರ್ಶನ್ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 

ದರ್ಶನ್​ರ ಆರ್​ಆರ್ ನಗರದ ನಿವಾಸದ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆ ನಡೆಯುವ ಮುನ್ನ ದರ್ಶನ್​ರ ಮನೆ ಸಿಬ್ಬಂದಿ ಮಹಿಳೆಯೊಂದಿಗೆ ವಾಗ್ವಾದ ಮಾಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ದೂರಿನಲ್ಲಿ ಹೇಳಿಕೊಂಡಿರುವಂತೆ ಆರ್​ ಆರ್​ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವಂತೆ. ದರ್ಶನ್​ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ.

ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್​ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಚ್ಚಿ ಗಾಯಗೊಳಿಸಿವೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ಮಹಿಳೆ ಆರ್​ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದು, ಮನೆಯ ಸಿಬ್ಬಂದಿಗಳನ್ನು ಮೊದಲ ಆರೋಪಿಯನ್ನಾಗಿಸಿದ್ದರೆ, ನಟ ದರ್ಶನ್​ರನ್ನು ಎರಡನೇ ಆರೋಪಿಯನ್ನಾಗಿಸಿ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….