ದೊಡ್ಡಬಳ್ಳಾಪುರ, (ಸೆ.02): ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿ ಸಮೀಪದ ದಿನ್ನೆ ಬಯಲು ಬಸವಣ್ಣ ಕ್ಷೇತ್ರದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಹೂವಿನ ಆರತಿಗಳು ನಡೆದವು.
ಸಂಜೆ ನಡೆದ ಆರತಿಗಳ ಉತ್ಸವದಲ್ಲಿ ಅರಳುಮಲ್ಲಿಗೆ, ಏಕಾಶಿಪುರ, ಕುಂಟನಹಳ್ಳಿ, ಗೆಜ್ಜಗದಹಳ್ಳಿ, ಬೈರಸಂದ್ರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಆರತಿಗಳ ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗು ಪ್ರಕೃತಿ ನಡುವಿನ ಬಯಲಿನಲ್ಲಿಯೇ ಅನ್ನಸಂತರ್ಪಣೆ ನಡೆಯಿತು.
ಇಲ್ಲಿನ ವಿಶೇಷವೆಂದರೆ ನಂದಿ(ಬಸವಣ್ಣ)ಮೂರ್ತಿ ಬಯಲಿನಲ್ಲೇ ಇರುವುದು. ನೂರಾರು ವರ್ಷಗಳಿಂದಲು ಇಲ್ಲಿನ ಮೂರ್ತಿಗೆ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಹಲವಾರು ಬಾರಿ ಭಕ್ತಾದಿಗಳು ಕಟ್ಟಡ ನಿರ್ಮಿಸಲು ಪ್ರಯತ್ನಿಸಿದ್ದರು ಸಹ ಕಟ್ಟಡದ ಗೋಡೆ ಬಿದ್ದು ಹೋಗಿವೆ. ಹಾಗಾಗಿಯೇ ಇಂದಿಗೂ ಬವಣ್ಣನ ಮೂರ್ತಿಯ ಸುತ್ತ ಯಾವುದೇ ಕಟ್ಟಡವು ಇಲ್ಲ. ಬಸವನ ಮೂರ್ತಿಯನ್ನು ಒಂದು ಪುಟ್ಟ ಕಲ್ಲಿನ ಪೀಠದ ಮೇಲೆ ಪ್ರತಿಷ್ಟಾಪಿಸಲಾಗಿದೆ ಎನ್ನುತ್ತಾರೆ ಅರ್ಚಕ ನಾಗರಾಜ್.
ರೈತರು ತಮ್ಮ ಮನೆಗಳಲ್ಲಿ ಹಸುವು ಕರು ಹಾಕಿದ ಒಂದು ವಾರದ ನಂತರ ಬೆಣ್ಣೆ,ಹಾಲಿನೊಂದಿಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ರಾಸುಗಳ ಏಳಿಗೆಗಾಗಿ ಪ್ರಾರ್ಥಿಸುವ ವಾಡಿಕೆ ನಡೆದುಕೊಂಡು ಬಂದಿದೆ.
ಯಾವುದೇ ಶುಭಕಾರ್ಯವನ್ನು ಮಾಡುವ ಮುನ್ನ ಅಥವಾ ಕಷ್ಟಗಳು ಬಂದಾಗ ಇಲ್ಲಿ ಪೂಜೆ ಸಲ್ಲಿಸಿ ಬಸವಣ್ಣ ದೇವರಿಂದ ಹೂವು ಬೇಡುವ ಪದ್ದತಿ ನೂರಾರು ವರ್ಷಗಳಿಂದಲು ನಡೆದುಕೊಂಡು ಬಂದಿದೆ. ಸೋಮವಾರ ಒಂದು ದಿನ ಮಾತ್ರ ಇಲ್ಲಿ ಪೂಜೆ ನಡೆಯುತ್ತವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….