ದೊಡ್ಡಬಳ್ಳಾಪುರ: ಕನ್ನಡ ರಾಜ್ಯೋತ್ಸವದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನ ಕನ್ನಡ ಭಾಷೆಯ ಬಳಸುವ ಮೂಲಕ ಪ್ರತಿನಿತ್ಯದ ಹಬ್ಬದಂತೆ ಆಚರಿಸಬೇಕು ಎಂದು ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಕಾರ್ತೀಕ್ ಈಶ್ವರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಹೇಮಾವತಿ ಪೇಟೆಯಲ್ಲಿ ವರ್ತಕರ ಸಂಘದಿಂದ ಮಂಗಳವಾರ ಆಚರಿಸಲಾದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಪಾರ ವಹಿವಾಟು ನಡೆಸಲು ನಗರಸಭೆಯಿಂದ ಪರವಾನಗಿ ನೀಡಲಾಗಿದೆ. ಪ್ರತಿ ಅಂಗಡಿಯ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ, ಮಾರಾಟಕ್ಕೆ ನಿಷೇಧವಿದ್ದು, ಎಲ್ಲರೂ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಪರವಾನಿಗೆ ಪಡೆದು ತೆರಿಗೆಯನ್ನು ಪಾವತಿಸಬೇಕು. ದೊಡ್ಡಬಳ್ಳಾಪುರದಲ್ಲಿ ಕಸದ ಸಮಸ್ಯೆಯಿದ್ದು, ಅದರ ನಿರ್ವಹಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಕರವೇ ಪ್ರವೀಣ್ಶೆಟ್ಟಿ ಬಣದ ರಾಜ್ಯ ಪ್ರಧಾನಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, 20ನೇ ಶತಮಾನದಲ್ಲಿ ಮಾನವೀಯತೆ ಆಳುತ್ತಿತ್ತು, 21ನೇ ಶತಮಾನದಲ್ಲಿ ಹಣ ಜನರನ್ನು ಆಳುತ್ತಿದೆ. ರಾಜ್ಯಕ್ಕೆ ಬರುವ ವಲಸಿಗರು ನಮ್ಮವರಾಗಿ ಬಾಳಬೇಕು.
ನಮ್ಮ ನಾಡು ನುಡಿಯನ್ನು ಗೌರವಿಸುವ ಜತೆಗೆ ಕನ್ನಡ ಭಾಷೆಯನ್ನು ಕಲಿಯಬೇಕು. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಒಂದು ದಿನದ ರಾಜ್ಯೋತ್ಸವದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕನ್ನಡ ಪ್ರತಿದಿನ ನಿತ್ಯೋತ್ಸವವಾಗಬೇಕು. ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡಿಗರಿಗೆ ಸಮಸ್ಯೆಯಾದರೂ ಕೂಡ ಕರವೇ ಅವರ ಜತೆಗೆ ನಿಲ್ಲುತ್ತದೆ. ಎಲ್ಲರೂ ಕನ್ನಡವನ್ನು ಬಳಸಿ, ಉಳಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರರಾದ ಸಂಜೀವ್ ನಾಂಯಕ್, ಮರುಳಾರಾಧ್ಯ, ವೆಂಕಟೇಶ್, ರಾಮದಾಸ್, ಚಂದ್ರಶೇಖರಯ್ಯ, ಲೋಕೇಶ್, ಮೋಹನ್, ಪ್ರಮೀಳಾ ಮಹದೇವ್ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು, ಹೇಮಾವತಿ ಪೇಟೆಯ ವರ್ತಕರು, ವ್ಯಾಪಾರಸ್ಥರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.