ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ( Narendra Modi) ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಪಹಲ್ಗಾಮ್ ದಾಳಿ ವೈಯಕ್ತಿಕವಾಗಿ ನನ್ನನ್ನು ಕಾಡುತ್ತಿತ್ತು. ಹೀಗಾಗಿ ಉಗ್ರರನ್ನು ಮಣ್ಣಲ್ಲೇ ಮಣ್ಣಾಗಿಸಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟೆವು. ಸೈನಿಕರ ಪರಾಕ್ರಮ ದೇಶದ ಸ್ತ್ರೀಯರಿಗೆ ಸಮರ್ಪಿತ ಎಂದು ಹೇಳಿದರು.
ಭಾರತೀಯ ಸೇನಾಪಡೆ, ಬೇಹುಗಾರಿಕಾ ತಂಡಕ್ಕೆ ಸಲ್ಯೂಟ್. ಪ್ರತೀ ಭಾರತೀಯನ ಪರವಾಗಿ ಸೈನಿಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ದೇಶದ ಸಾಮರ್ಥ್ಯ ಮತ್ತು ಸಂಯಮ ಎರಡನ್ನೂ ನೋಡಿದ್ದೇವೆ ಎಂದರು.
ಆಪರೇಷನ್ ಸಿಂಧೂರ ನ್ಯಾಯದ ಪ್ರತಿಜ್ಞೆ
ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ರೆ ಏನಾಗುತ್ತೆ ಅನ್ನೋದು ಗೊತ್ತಾಗುತ್ತದೆ. ಆಪರೇಷನ್ ಸಿಂಧೂರ ನ್ಯಾಯದ ಪ್ರತಿಜ್ಞೆ. ಉಗ್ರರು ಭಾರತ ಇಂಥಾ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ಯೋಚಿಸಿರಲಿಲ್ಲ. ಡ್ರೋನ್ ದಾಳಿಯಿಂದ ಉಗ್ರರ ಕಟ್ಟಡ ಅಲ್ಲ ಅವರ ಆತ್ಮವಿಶ್ವಾಸ ಕೂಡ ಕುಸಿದಿದೆ ಎಂದು ಹೇಳಿದರು.
ದೇಶ ಒಂದಾದರೆ ದೊಡ್ಡ ದೊಡ್ಡ ನಿರ್ಧಾರಗಳು ಸಾಧ್ಯ ಪಾಕಿಸ್ತಾನದ ಡೋನ್, ಮಿಸೈಲ್ಗಳನ್ನು ಹೊಡೆದುರುಳಿಸಿದ್ದನ್ನು ಇಡೀ ಜಗತ್ತು ಗಮನಿಸಿದೆ. ಪಾಕಿಸ್ತಾನವು ಭಾರತದ ಗಡಿ ಮೇಲೆ ದಾಳಿ ಮಾಡಿತ್ತು. ಆದರೆ ನಾವು ಪಾಕಿಸ್ತಾನದ ಹೃದಯಕ್ಕೆ ದಾಳಿ ಮಾಡಿದೆವು. ಪಾಕಿಸ್ತಾನಕ್ಕೆ ತುಂಬಾ ಹೆಮ್ಮೆಯಿದ್ದ ಏರ್ಬೇಸ್ಗಳನ್ನು ಧ್ವಂಸ ಮಾಡಿದೆವು. ಉಗ್ರರ ಕೇಂದ್ರ ಕಚೇರಿಗಳನ್ನು ಕೂಡ ಧ್ವಂಸ ಮಾಡಿದ್ದೇವೆ ಎಂದರು.
ಕದನ ವಿರಾಮ ಅಲ್ಪ ವಿರಾಮವಷ್ಟೇ
ಉದ್ವಿಗ್ನತೆ ಕಡಿಮೆ ಮಾಡಲು ಪಾಕಿಸ್ತಾನವು ಹಲವು ದೇಶಗಳ ಮುಂದೆ ಮನವಿ ಮಾಡಿಕೊಂಡಿತ್ತು. ಡಿಜಿಎಂಓಗಳ ಮೂಲಕ ಕದನ ವಿರಾಮಕ್ಕೆ ಬೇಡಿಕೊಂಡಿತ್ತು.
ಪಾಕಿಸ್ತಾನದ ಕಡೆಯಿಂದ ಮುಂದೇ ಯಾವುದೇ ಭಯೋತ್ಪಾದಕ ಘಟನೆ ನಡೆಯುವುದಿಲ್ಲ ಎಂದ ಕಾರಣ, ಭಾರತ ಇದನ್ನು ಗಮನಿಸಿತು. ಆದರೆ ಇದು ಕದನ ವಿರಾಮ ಅಲ್ಪ ವಿರಾಮವಷ್ಟೇ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ನಡೆಯನ್ನು ಗಮನಿಸುತ್ತೇವೆ.
ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ
ಅಣ್ವಸ್ತ್ರ ದಾಳಿಯ ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಅಣ್ವಸ್ತ್ರದ ನೆರಳಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಸಹಿಸಲ್ಲ. ಭಯೋತ್ಪಾದನೆಯ ಬುಡಸಮೇತ ಕಿತ್ತು ಹಾಕುತ್ತೇವೆ. ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಗೆ ಸ್ಪಷ್ಟವಾದ ಸಾಕ್ಷಿ ಸಿಕ್ಕಿದೆ. ರಣರಂಗದಲ್ಲಿ ಪ್ರತಿ ಬಾರಿಯೂ ನಾವು ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದೇವೆ. ಮೇಕ್ ಇನ್ ಇಂಡಿಯಾ ಶಕ್ತಿ ಇಡೀ ವಿಶ್ವಕ್ಕೆ ಅರಿವಾಗಿದೆ.
ಯುದ್ಧದ ಯುಗವಲ್ಲ
ಈ ಯುಗ ಖಂಡಿತಾ ಯುದ್ಧದ ಯುಗವಲ್ಲ. ಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಸೈನ್ಯ ಯಾವ ರೀತಿ ಉಗ್ರವಾದಕ್ಕೆ ಗೊಬ್ಬರ, ನೀರು ನೀಡುತ್ತಿದ್ದಾರೆ ಎಂಬುದು ಬಯಲಾಗಿದೆ.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಯೋತ್ಪಾದನೆ ಬಿಟ್ಟು ಮಾತುಕತೆ ಬನ್ನಿ, ಶಾಂತಿಯ ಮಾರ್ಗ ಶಕ್ತಿಯೊಂದಿಗೆ ಮಾತ್ರ ಸಾಧ್ಯ.
ವಿಶ್ವ ಸಮುದಾಯಕ್ಕೆ ಹೇಳುವುದಾದರೆ ಮುಂದೆ ಪಾಕಿಸ್ತಾನದ ಜೊತೆ ಮಾತುಕತೆಯಾದ್ರೆ ಅದು ಉಗ್ರವಾದದ ವಿಚಾರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.