ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) 14 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, 2 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಹಾಗೂ 1 ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತರು ಅತಿ ಹೆಚ್ಚು ಸ್ಥಾನಗಳಲ್ಲಿ ಚುನಾಯಿತರಾಗಿರುವ ಕುರಿತಂತೆ ಮಾಜಿ ಸಂಸದ, ಬಮೂಲ್ ನಿರ್ದೇಶಕ ಡಿಕೆ ಸುರೇಶ್ ಪ್ರಶಂಸೆ ವ್ಯಕ್ತಪಡಿಸಿದ್ದು, ಗೆಲುವು ಸಾಧಿಸಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ 11 ಕ್ಷೇತ್ರಗಳಾದ ಕನಕಪುರ, ಹಾರೋಹಳ್ಳಿ, ಕುದೂರು, ಆನೇಕಲ್, ದೇವನಹಳ್ಳಿ, ಮಾಗಡಿ, ಚನ್ನಪಟ್ಟಣ, ಹೊಸಕೋಟೆ, ರಾಮನಗರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪೂರ್ವದಲ್ಲಿ, ನಮ್ಮ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಈ ಕುರಿತಂತೆ ಮಾಜಿ ಸಂಸದ ಡಿಕೆ ಸುರೇಶ್ ಟ್ವಿಟ್ ಮಾಡಿದ್ದು, ಈ ಫಲಿತಾಂಶ ರೈತರಿಗೆ ಸಿಕ್ಕ ಗೆಲುವು. ಜನರ ವಿಶ್ವಾಸವನ್ನು ಉಳಿಸಿಕೊಂಡು, ನಾವೆಲ್ಲರೂ ಸೇರಿ ರೈತರ, ಹೈನುಗಾರರ ಬದುಕನ್ನು ಹಸನಾಗಿಸೋಣ ಎಂದು ಕರೆ ನೀಡಿದ್ದಾರೆ.