ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆ (Yettinahole Project) ಕುರಿತು ತಾಲ್ಲೂಕಿನ ಸಾಸಲು ಹೋಬಳಿಯ ಮಲ್ಲೇಗೌಡನಪಾಳ್ಯ, ಭಕ್ತರಹಳ್ಳಿ, ಸಿಂಗೇನಹಳ್ಳಿ, ಲಕ್ಕೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗೋಮಾಳ ಜಮೀನುಗಳಲ್ಲಿ ಉಳಿಮೆ ಮಾಡುತ್ತಿರುವ ಭೂರಹಿತ ರೈತರ ಜಮೀನುಗಳ ಪೋಡಿ, ದುರಸ್ಥಿಯನ್ನು ತುರ್ತಾಗಿ ನಡೆಸಿ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡುವಂತೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ (T.Venkataramanaiah) ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ರೈತರ ಸಭೆಯಲ್ಲಿ ಆಗ್ರಹಿಸಿದರು.
ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಬಹುತೇಕ ರೈತರ ಜಮೀನು ಎತ್ತಿನಹೊಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸಲಾಗುತ್ತಿರುವ ಜಲಾಶಯಕ್ಕೆ ಮುಳುಗಡೆಯಾಗುತ್ತಿದೆ.
ಈ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ರೈತರಿಗೆ ನೀಡಬೇಕು. ಸಾಸಲು ಹೋಬಳಿ ಭಾಗದ ವಿವಿಧ ಗ್ರಾಮಗಳ ಭೂರಹಿತ ರೈತರು ಭೂಮಂಜೂರಾತಿಗಾಗಿ ನಮೋನೆ-57ರ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿಯನ್ನು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಬಲಾಡ್ಯರು ಈ ಜಮೀನುಗಳಲ್ಲಿ ಅವರಿಗೆ ಇಷ್ಟ ಬಂದ ಕಡೆಗಳಲ್ಲಿ ತಂತಿ ಬೇಲಿ ನಿರ್ಮಿಸುತ್ತಿದ್ದಾರೆ.
ಇದನ್ನು ವಿರೋಧಿಸಿರುವ ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ರದ್ದುಗೊಳಿಸಬೇಕು. ಇದರಿಂದ ಬಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ವಾಸ್ತದಲ್ಲಿ ಇಂದಿಗೂ ಉಳುಮೆ ಮಾಡುತ್ತಿರುವ ಅರ್ಹ ಭೂ ರಹಿತ ರೈತರಿಗೆ ಅನ್ಯಾಯವಾಗದಂತೆ ತ್ವರಿತವಾಗಿ ಸರ್ವೇ ನಡೆಸಿ ಸಾಗುವಳಿ ಚೀಟಿಗಳನ್ನು ವಿತರಿಸಬೇಕು. ಸಾಗುವಳಿ ಚೀಟಿಗಳ ವಿತರಣೆಯು ಪಕ್ಷಾತೀತವಾಗಿ ನಡೆಯಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ತಹಶೀಲ್ದಾರ್ ವಿದ್ಯಾವಿಭಾರಾಥೋಡ್, ಭೂದಾಖಲೆಗಳ ಸಹಾಯಕ ಉಪನಿರ್ದೇಶಕ ಮೋಹನ್ ಕುಮಾರ್ ಮಾಹಿತಿ ನೀಡಿ, ಈಗಾಗಲೇ ನಮೋನೆ-57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ದಾಖಲೆಗಳನ್ನು ಪರಿಶೀಲಿಸಿ ಜಮೀನುಗಳನ್ನು ಡ್ರೋಣ್ ಮೂಲಕ ಸರ್ವೇ ನಡೆಸಲಾಗುತ್ತಿದೆ.
ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗದಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗಿನ ಭೂಮಂಜೂರಾತಿ ನಿಯಮದಂತೆ ನಮೋನೆ 1 ರಿಂದ 5ನ್ನು ಸಿದ್ದಪಡಿಸಿದ ನಂತರವೇ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಟಿಎಪಿಎಂಸಿಎಸ್ ನಿರ್ದೇಶಕ ಡಿ.ಸಿದ್ದರಾಮಣ್ಣ, ಸಾಸಲು ಹೋಬಳಿ ರಾಜಸ್ವ ನಿರೀಕ್ಷಕ ಅನಂತಕುಮಾರ್, ಗ್ರಾಮ ಆಡಳಿತ ಅಧಿಕಾರಿ ಹನುಮಕ್ಕ ಹಾಗೂ ರೈತರು ಇದ್ದರು.