ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಮಂತ್ರಾಲಯದಲ್ಲಿ (Mantralaya) ಅದ್ದೂರಿಯಾಗಿ ನಡೆಯಿತು.

ಮಠದ ರಾಜ ಬೀದಿಯಲ್ಲಿ ನಡೆದ ಮಹಾರಥೋತ್ಸಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ರಥ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಗುರುರಾಯ ಸ್ಮರಣೆ ಮಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿಯನ್ನ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಸಂಪನ್ನಗೊಂಡವು. ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಶ್ರೀಗುರು ರಾಘವೇಂದ್ರ ಸ್ವಾಮಿಗಳು ವೃಂದಾವ ನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆರಾಧಾನಾ ಮಹೋತ್ಸವದ ಕೊನೆಯ ಘಟ್ಟ ಉತ್ತರರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು.
ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಮಹಾರಥೋತ್ಸವಕ್ಕೂ ಮುನ್ನ ರಾಮ ದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸಿದರು. ಬಳಿಕ ಮಠದ ಮಧ್ವದ್ವಾರದ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು.

ಫೋಟೋ ಕೃಪೆ: ಮಂತ್ರಾಲಯ ಮಠ ಫೇಸ್ಬುಕ್ ಪೇಜ್