ಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೈದ್ಯರು (Doctors), ನರ್ಸ್ (Nurses) ಸೇರಿದಂತೆ ಇತರೆ ಸಿಬ್ಬಂದಿಯನ್ನು ಇನ್ನು ಮುಂದೆ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವ ವಿಧೇಯಕಕ್ಕೆ ಅನುಮೋದನೆಗೊಂಡಿದೆ.
ವಿಧೇಯಕವನ್ನು ವಿಧಾನಪರಿಷತ್ನಲ್ಲಿ ವಿಧೇಯಕ ಮಂಡಿಸಿದ ಬಳಿಕ ಮಾತನಾಡಿದ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ನಗರ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳು, ಡಿ ಗ್ರೂಪ್ ಸಿಬ್ಬಂದಿ ದೀರ್ಘಕಾಲದವರೆಗೂ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆ ತರುವ ಸಲುವಾಗಿ ಇವರನ್ನು ವರ್ಗಾವಣೆ ಮಾಡಿದರೆ ನ್ಯಾಯಾಲಯದ ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರ ಸಿಬ್ಬಂದಿ ಕೊರತೆ ಉಂಟಾಗುತಿತ್ತು. ಇದನ್ನು ಸರಿದೂಗಿಸಲು ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಎ,ಬಿ,ಸಿ,ಡಿ ಎಂದು ನಾಲ್ಕು ವಲಯಗಳನ್ನಾಗಿ ರೂಪಿಸಲಾಗಿದೆ. ಈ ವಲಯಗಳಲ್ಲಿ ಗರಿಷ್ಠ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವವರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಬೇಕಿದೆ. ಇನ್ನೂ ತಜ್ಞ ವೈದ್ಯರನ್ನು ಗುರುತಿಸಲಾದ ಹುದ್ದೆಗಳಲ್ಲಿ ಮುಂದುವರೆಸಲು ಹಾಗೂ ಚಿಕ್ಕ ಮಕ್ಕಳಿರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಗೆ ತಿದ್ದುಪಡಿ ಕಾಯ್ದೆಯಲ್ಲಿ ವರ್ಗಾವಣೆಗೆ ವಿನಾಯಿತಿ ನೀಡಲಾಗಿದೆ ಎಂದರು.
ಬಳಿಕ ಸದಸ್ಯರು ಒಕ್ಕೂರಲಿನಿಂದ ಮಸೂದೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ವಿಧೇಯಕ ಅನುಮೋದನೆಯಾಯಿತು.