ಬೆಂಗಳೂರು, (ಜುಲೈ.01): ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತಿಕ್ಕಾಟದ ನಡುವೆ ಪ್ರತಿಪಕ್ಷ ಬಿಜೆಪಿಯಲ್ಲಿಯೂ ಬದಲಾವಣೆ ಆಗ್ರಹಗಳು ಶುರುವಾಗಿದೆ.
ಒಕ್ಕಲಿಗರ ಕೋಟಾದಲ್ಲಿ ವಿಧಾನಸಭಾ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಆರ್.ಅಶೋಕ ವಿರುದ್ಧ ಸ್ವಪಕ್ಷದಲ್ಲಿಯೇ ವಿರೋಧ ಶುರುವಾಗಿದ್ದು, ಪ್ರತಿಪಕ್ಷ ನಾಯಕನಾಗಿ ನಿಭಾಯಿಸಲು ವಿಫಲರಾಗಿರುವ ಕಾರಣ ಬದಲಿಗೆ ಬೇರೆಯವರಿಗೆ ಈ ಜವಾಬ್ದಾರಿ ನೀಡಬೇಕು ಎನ್ನುವ ಚರ್ಚೆ ಪಕ್ಷದ ವೇದಿಕೆಯಲ್ಲಿ ಶುರುವಾಗಿದೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಪ್ರತಿಪಕ್ಷ ನಾಯಕರ ಬದಲಾವಣೆಗೆ ಮುಂದಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರ ಸ್ಥಾನಕ್ಕೆ ಕುತ್ತು ಬಂದಿದೆ.
ಮೇಲ್ಮನೆಯಲ್ಲಿ ಒಕ್ಕಲಿಗ ನಾಯಕನಿಗೆ ವಿಪಕ್ಷ ಸ್ಥಾನ ನೀಡಿದರೆ, ಕೆಳಮನೆಯಲ್ಲಿ ಒಕ್ಕಲಿಗ ನಾಯಕನ ಬದಲಾವಣೆ ಅನಿವಾರ್ಯ ಎಂಬುದು ಭಾರೀ ಚರ್ಚೆ ನಡೆಯುತ್ತಿದೆ. ಇದರಿಂದ ಕೆಳಮನೆ ಅಂದರೆ ವಿಧಾನಸಭಾ ಪ್ರತಿಪಕ್ಷ ನಾಯಕರಾಗಿರುವ ಅಶೋಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಹೆಚ್ಚಾಗಿದೆ.
ಹಳೆಮೈಸೂರು ಭಾಗದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಿಂದ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಸಲಹೆ ಮೇರೆಗೆ ರಾಜ್ಯದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರತಿಪಕ್ಷ ಸ್ಥಾನ ಕಳೆದುಕೊಳ್ಳುವ ಸುಳಿವಿನ ಬೆನ್ನಲ್ಲೇ ಒಕ್ಕಲಿಗರ ಸಮುದಾಯದ ಸ್ವಾಮೀಜಿಯನ್ನ ಆರ್.ಅಶೋಕ ಭೇಟಿ ಮಾಡಿದ್ದಾರೆ. ಸೋಮವಾರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಂದಿನ ತಿಂಗಳು ಎರಡನೇ ವಾರದಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಸ್ವಾಮೀಜಿ ಮುಖಾಂತರ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡಿ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಅಶೋಕ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….