ದೊಡ್ಡಬಳ್ಳಾಪುರ, (ಜುಲೈ, 01); ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವವರೆಗೆ ಇಲಾಖೆಯ ಯಾವುದೇ ಕ್ರೀಡಾ ಕೂಟಗಳನ್ನು ಆಯೋಜಿಸುವುದಿಲ್ಲವೆಂಬ ಮನವಿ ಪತ್ರವನ್ನು ಕ್ಷೇತ್ರಶಿಕ್ಷಣಾಧಿಕಾರಿ ಸೈಯದ್ ಅನಿಸಾ ಅವರಿಗೆ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದೊಡ್ಡಬಳ್ಳಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ವತಿಯಿಂದ ಜಿಲ್ಲಾದ್ಯಕ್ಷ ಬಿ.ಹೆಚ್. ನರಸಿಂಹಮೂರ್ತಿ ಬರಗೂರು, ತಾಲ್ಲೂಕು ಅದ್ಯಕ್ಷ ಜಿ.ಸಿದ್ದಲಿಂಗಯ್ಯ, ಕಾರ್ಯದರ್ಶಿ ವನಿತ, ಗೌರವಾದ್ಯಕ್ಷ ಜಗದೀಶ್, ಉಪಾದ್ಯಕ್ಷೆ ಶೋಭ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ನಾಗರಾಜು ಇದ್ದರು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾದ್ಯಕ್ಷ ಬಿ.ಹೆಚ್. ನರಸಿಂಹಮೂರ್ತಿ ಬರಗೂರು, ತಾಲ್ಲೂಕು ಅದ್ಯಕ್ಷ ಜಿ.ಸಿದ್ದಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಿ ಶಾಶ್ವತ ಪರಿಹಾರ ದೊರಕಿಸಿ ಕೊಡುವಂತೆ ಸಂಘದಿಂದ ಕಲ್ಪಿಸಲಾಗಿದೆ.
ಆದರೆ ಇಲಾಖೆಯಿಂದ ಇಲ್ಲಿಯ ತನಕ ಆದೇಶವನ್ನು ನೀಡದೆ ವಿಳಂಬ ಮಾಡುತ್ತಿರುವ ಕಾರಣ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರ ನಡುವೆ ತಾರತಮ್ಯ, ಅಸಮಾನತೆ, ಬೆಳೆಯುತಿದ್ದು ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದರಿಸುವ ಜೊತೆಗೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿ, ಅದೇಷ್ಟೋ ದೈಹಿಕ ಶಿಕ್ಷಣ ಶಿಕ್ಷಕರು ನಿವೃತ್ತಿ ಹೊಂದಿರುತ್ತಾರೆ.
ದೈಹಿಕ ಶಿಕ್ಷಣ ಶಿಕ್ಷಕರ ಒತ್ತಡ, ನೋವು ಮತ್ತು ಅಭಿಪ್ರಾಯದ ಮೇರೆಗೆ ಸಂಘದ ಸರ್ವಸದಸ್ಯರ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳು ಜುಲೈ-2024ರ ಅಂತ್ಯದ ಒಳಗಾಗಿ ಈಡೇರದೆ ವಿಳಂಬವಾದಲ್ಲಿ ನಮ್ಮ ಬೇಡಿಕೆಗಳು ಈಡೇರುವ ತನಕ ಪ್ರಸ್ತುತ ವರ್ಷದಿಂದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಅನಿರ್ಧಿಷ್ಟಾವಧಿ ಸತ್ಯಾಗ್ರಹ/ ಕ್ರೀಡಾಕೂಟಗಳ ಬಹಿಷ್ಕಾರ/ನ್ಯಾಯಾಲಯಕ್ಕೆ ಹೋಗಲು ಅವಕಾಶ ನೀಡದೆ, ಬಿಇಒ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡಂತೆ ತುರ್ತಾಗಿ ಸಭೆ ಮಾಡಿ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಕೊಡುವ / ಸಮಸ್ಯೆಗಳು ಪರಿಹಾರ ದೊರಕಿಸಿ ಇಲಾಖಾ ಆದೇಶ ಮಾಡಿ ಕೊಡುವಂತೆ ಮನವಿ ಮಾಡಲಾಗಿದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳು:
> ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುವ ಇಲಾಖಾ ಆದೇಶ ನೀಡುವುದು.
> ಪ್ರಾಥಮಿಕ & ಪ್ರೌಢಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡುವುದು ಹಾಗೂ ಅಲ್ಲಿಯ ವರೆಗೆ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಲು ಆದೇಶ ಮಾಡುವುದು.
> ಸರ್ಕಾರಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರ/ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದ 3 ದೈಹಿಕ ಶಿಕ್ಷಣ ಶಿಕ್ಷಕರುಗಳನ್ನು ಸೇವಾ ಜೇಷ್ಠತಾ ಆಧಾರದ ಮೇಲೆ ಅಧಿಕ ಪ್ರಭಾರದಲ್ಲಿರಿಸುವ ಕುರಿತು.
> ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2 ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು/ಸಹಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ ಸೃಜಿಸಿ ಮುಂಬಡ್ತಿ ನೀಡುವುದು.
> ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ರದ್ದುಗೊಳಿಸುವುದು. ಪ್ರತಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಸೃಜನೆ ಮಾಡುವುದು. ಹೆಚ್ಚುವರಿ ಪಕ್ರಿಯೆಯನ್ನು ಕೈಬಿಡುವುದು.
> ಎಸ್.ಎ.ಟಿ.ಎಸ್ ನಲ್ಲಿ ದೈಹಿಕ ಶಿಕ್ಷಣವನ್ನು ಭಾಗ ಎ ನಲ್ಲಿ ಸೇರ್ಪಡೆ ಮಾಡದೆ ವಿಳಂಭವಾಗಿರುವುದು ಗೊಂದಲಗಳಿಗೆ ಕಾರಣವಾಗಿರುವುದನ್ನು ಬಗೆಹರಿಸುವುದು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….