ದೊಡ್ಡಬಳ್ಳಾಪುರ, (ಆಗಸ್ಟ್.16); ತಾಲೂಕಿನಲ್ಲಿ ಈ ಬಾರಿ ತಡವಾಗಿ ಮಳೆಯಾಗುತ್ತಿದ್ದು, ಹೂಗಳ ಇಳುವರಿ ಮೇಲೆ ಪ್ರಭಾವ ಬೀರಿದೆ. ವರಮಹಾಲಕ್ಷ್ಮೀ ಹಬ್ಬ ಇನ್ನೆರಡು ದಿನವಿದ್ದಂತೆ ಹೂವು, ಹಣ್ಣು ಹಾಗೂ ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಇದರ ನಡುವೆಯೂ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.
ತರಕಾರಿ, ಹಣ್ಣುಗಳು ಹಾಗೂ ಹೂಗಳ ಬೆಲೆ ಹಬ್ಬಕ್ಕೆಂದೇ ದುಬಾರಿಯಾಗಿ ಸಾರ್ವಜನಿಕರನ್ನು ಕಂಗಾಲಾಗಿಸಿದೆ. ಇದರೊಂದಿಗೆ ವರಲಕ್ಷ್ಮೀ ಮೂರ್ತಿಗಳ ಪ್ರತಿಮೆಗಳು, ಮುಖವಾಡಗಳು ಸಹ ಭರದಿಂದ ಮಾರಾಟವಾಗುತ್ತಿದ್ದು, ಅವೂ ದುಬಾರಿ ಬೆಲೆಯೆನಿಸಿವೆ.
ನಗರದ ಮಾರ್ಕೆಟ್ನಲ್ಲಿ ಹಣ್ಣುಗಳ ನೂರಾರು ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ ಹೂವು ಹಣ್ಣಿನ ಬೆಲೆಗಳು ಹಿಂದೆಂದೂ ಕಾಣದಷ್ಟು ಗಗನಕ್ಕೇರಿವೆ.
ಕಾಕಡ, ಮಲ್ಲಿಗೆ, ಮಳ್ಳೆ ಹೂವಿನ ಬೆಲೆ 800ರಿಂದ 1000 ರೂ, ಕನಕಾಂಬರ ಕೆ.ಜಿಗೆ 2500 ರೂ ಇದ್ದು, 50 ಗ್ರಾಂಗೆ 150 ರೂನಂತೆ ಮಾರಾಟವಾಗುತ್ತಿತ್ತು. ಶಾಮಂತಿಗೆ 250ರೂ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು 200 ರವರೆಗೂ ಇವೆ. ಇನ್ನು ತಾವರೆ ಹೂ ಜೊತೆಗೆ 80 ರೂ, ಡೇರಾ ಒಂದು ಹೂವಿಗೆ 10 ರೂ ಇದರೊಂದಿಗೆ ಸೇಬಿನ ಬೆಲೆ 250ರೂ, ದ್ರಾಕ್ಷಿ 200ರೂ ದಾಟಿದ್ದು, ಮಿಕ್ಕ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಅಲಂಕಾರಿಕ ಹೂಗಳು ಒಂದು ಕುಚ್ಚಿಗೆ 200 ರೂಗಳಂತೆ ಮಾರಾಟವಾಗುತ್ತಿತ್ತು.
ಬಾಳೆಕಂದುಗಳು ಸಹ ತುಸು ಬೆಲೆ ಹೆಚ್ಚಾಗಿಯೇ ಇವೆ. ಆಷಾಢ ಮಾಸ ಹಾಗೂ ಅಕ ಶ್ರಾವಣ ಮಾಸದಲ್ಲಿಯೂ ಸಹ ಹೂವುಗಳ ಬೆಲೆ ಅಷ್ಟೇನೂ ಇಳಿಕೆಯಾಗಿರಲಿಲ್ಲ.
ಕಡಿಮೆಯಾದ ಹೂ ಇಳುವರಿ: ತಾಲೂಕಿನಲ್ಲಿ ಸೇವಂತಿಗೆ, ಗುಲಾಬಿ, ಚೆಂಡು ಹೂಗಳು ಹೆಚ್ಚಾಗಿ ಬೆಳೆಯುತ್ತಿವೆ. ಆದರೆ ಕಾಕಡ, ಮಲ್ಲಿಗೆ, ಕನಕಾಂಬರ ಹೂಗಳನ್ನು ಬೆಳೆಯುವವರೇ ಕಡಿಮೆಯಾಗುತ್ತಿದ್ದಾರೆ.
ದಶಕದ ಹಿಂದೆ ತೋಟಗಳಿಂದ ನೂರಾರು ಕೆಜಿಗಳಷ್ಟು ಬಸ್ಗಳ ಮೂಲ ರೈತರು ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಆದರೆ ಈಗ ಹತ್ತು ಕೆಜಿಗಳು ಸಿಗುವುದು ಸಹ ಕಷ್ಟವಾಗಿದೆ. ಹಾಗಾಗಿ ಬೇರೆಡೆಯಿಂದ ಹೂಗಳನ್ನು ತರಿಸಬೇಕಾದ ಅನಿವಾರ್ಯತೆ ಇದೆ. ಹೂ ಕೀಳಲು ಕೂಲಿ ಕಾರ್ಮಿಕರ ಸಮಸ್ಯೆ, ನಿರ್ವಹಣೆ ವೆಚ್ಚ ಹೂ ಬೆಳೆಗಾರರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ ಎನ್ನುತ್ತಾರೆ ಹೂ ಮಾರಾಟಗಾರ ಲೋಕೇಶ್.
ಲಕ್ಷ್ಮೀ ಅಲಂಕೃತ ಮೂರ್ತಿಗಳು: ವರಮಹಾಲಕ್ಷ್ಮೀ ಹಬ್ಬ ಹದಿನೈದು ದಿನವಿದ್ದಂತೆ ವಿವಿಧ ಮಳಿಗೆಗಳಲ್ಲಿ ಲಕ್ಷ್ಮೀ ಅಲಂಕೃತ ಮೂರ್ತಿಗಳು ಹಾಗೂ ಲಕ್ಷ್ಮೀ ಮುಖವಾಡಗಳು ಸಹ ಭರದಿಂದ ಮಾರಾಟವಾಗುತ್ತಿದ್ದು, ಒಂದು ಸೆಟ್ ಪೂರ್ಣ ಪ್ರತಿಮೆಗೆ 3 ಸಾವಿರದಿಂದ 10 ಸಾವಿರದವರೆಗೆ ಮಾರಾಟವಾಗುತ್ತಿದೆ.
ಈ ಬಾರಿ ಹೆಚ್ಚಿನ ಮೂರ್ತಿಗಳು ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ. ಲಕ್ಷ್ಮೀ ಕಳಸಕ್ಕೆ ಇಡುವ ಲಕ್ಷ್ಮೀ ಮುಖವಾಡಗಳನ್ನು ಮಹಿಳೆಯರು ಕೊಂಡೊಯ್ಯುತ್ತಿದ್ದುದು ಸಾಮಾನ್ಯವಾಗಿತ್ತು. ಪ್ಲಾಸ್ಟಿಕ್ ಹೂಗಳು, ಅಲಂಕಾರಿಕ ಸಾಮಗ್ರಿಗಳ ಮಾರಾಟ ಸಹ ಭರದಿಂದ ಸಾಗಿತ್ತು.
ತಾಲೂಕಿನಲ್ಲಿ ನೇಕಾರಿಕೆ ಸಂಕಷ್ಟದಲ್ಲಿದೆ. ಆದರೂ ಹಬ್ಬಕ್ಕೆಂದು ಮಾರುಕಟ್ಟೆಯಲ್ಲಿ ಕೊಳ್ಳುವವರಿಗೇನೂ ಕಡಿಮೆಯಿಲ್ಲ. ಹೂ ಹಣ್ಣು, ತರಕಾರಿಗಳ ಬೆಲೆಗಳು ಸಹ ಈಗ ಹಬ್ಬಕ್ಕೆಂದೇ ಏರಿಕೆಯಾಗಿವೆ. ಇಷ್ಟೆಲ್ಲಾ ನಡುವೆಯೂ ವರಲಕ್ಷ್ಮಿ ಹಬ್ಬಕ್ಕಾಗಿ ಎಷ್ಟಾದರೂ ಸರಿ ಹಬ್ಬ ಮಾಡಲೇಬೇಕೆಂದು ನಾಗರಿಕರು ಕೊಂಡು ಹೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿನ ಜನಸಂದಣಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….