ಲಕ್ಷ್ಮೀದೇವಿ ಸಮುದ್ರಮಂಥನದಿಂದಲೇ ಆವಿರ್ಭವಿಸಿದ್ದು, ಕ್ಷೀರಸಾಗರದಿಂದ ಅವತರಿಸಿದಳೆಂದು ಹೇಳಲಾಗಿದೆ. ಹಾಗಾಗಿಯೇ ಲಕ್ಷ್ಮೀಯನ್ನು ಕ್ಷೀರಸಾಗರತನಯೆ ಎಂದೂ ಹೇಳಲಾಗುತ್ತದೆ. ಇಂದು ಹಬ್ಬ ಆಗಿರುವುದರಿಂದ ಈ ವ್ರತೆದ ಹಿನ್ನೆಲೆಯನ್ನು ತಿಳಿದುಕೊಳ್ಳಿ.
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಇಂದು (ಶುಕ್ರವಾರ) ಎಲ್ಲೆಡೆ ಆಚರಿಸಲಾಗುತ್ತಿದೆ.
ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದೂರ್ವಾಸ ಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು.
ಆಗ ಪರಮ ದುಃಖ ಕ್ರಾಂತ ರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು ವೈಕುಂಠ ದಲ್ಲಿ ಪರಮಾತ್ಮನನ್ನು ಶರಣುಹೊಂದಿ ದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು,ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).
ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮೀಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು ಆವಾಹನೆ ಮಾಡಿ 12ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ.
ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ, ನಿತ್ಯಸಿದ್ಧಳೂ ಆದ ಈ ಮಂಗಲದೇವತೆ ಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.
ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಮಹತ್ವದ ಮತ್ತು ಶಕ್ತಿಯುತವಾದ ಆಚರಣೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಶಿವನು ಪಾರ್ವತಿ ದೇವಿಗೆ ಈ ವ್ರತ ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾನೆ.
ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಜನರು ಎಲ್ಲಾ ರೀತಿಯ ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ವಿಷಯವನ್ನು ಅನುಭವಿಸುತ್ತಾರೆ. ಅಲ್ಲದೆ, ಭಕ್ತರ ಜೀವನ ಮತ್ತು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ಮೇಲುಗೈ ಸಾಧಿಸುತ್ತದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….