ದೊಡ್ಡಬಳ್ಳಾಪುರ, (ಸೆ.16); ಭಾರತವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮ್ಯುನಿಷ್ಟ್ ಪಕ್ಷದ ಚಿಂತನೆಗಳನ್ನು ಮುನ್ನಡೆಸಿದರು ಮತ್ತು ಮಾರ್ಗದರ್ಶಕರಾಗಿದ್ದವರು ಕಾಂಮ್ರೇಡ್ ಸೀತಾರಾಮ್ ಯಚೂರಿ. ಅವರು ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಮೌಲ್ಯಗಳ ಪರವಾಗಿ ಸದಾ ಬದ್ದತೆ ಹೊಂದಿದ್ದವರು ಎಂದು ಸಿಪಿಐ(ಎಂ) ಪಕ್ಷದ. ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ರೈತ, ಕಾರ್ಮಿಕರ (ಸಿಐಟಿಯು) ಕಛೇರಿಯ ಆವರಣದಲ್ಲಿ ನಡೆದ. ಕಾಂಮ್ರೇಡ್ ಸೀತಾರಾಮ್ ಯಚೂರಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿವೆ. ಈ ಬಗ್ಗೆ ಗಂಭೀರವಾಗಿ ಸದನಗಳಲ್ಲಿ ಮಾತನಾಡುವ ಧೈರ್ಯ ರಾಜಕೀಯ ಮುಖಂಡರಿಗೆ ಇಲ್ಲವಾಗಿದೆ. ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿ ಸೀತಾರಾಮ್ ಯಚೂರಿ ಅವರ ಸಾವು ಜನಚಳುವಳಿಗೆ ಆದ ನಷ್ಟವಾಗಿದೆ ಎಂದರು.
ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಕಾಂಮ್ರೇಡ್ ಸೀತಾರಾಮ್ ಯಚೂರಿ ಅವರು ತಮ್ಮ ಪಕ್ಷದ ಹೊರಗೂ ಉತ್ತಮ ಸ್ನೇಹಸಂಬಂಧ ಹೊಂದಿದ್ದರು. ಯಚೂರಿಯವರ ಬೌದ್ದಿಕ ಚಿಂತನೆ, ಸಂವಾದ, ನಿರೂಪಣೆ ಶೈಲಿಯಿಂದ ಎಡ ವಿಚಾರಧಾರೆಗಳು ಜನಪ್ರಿಯಗೊಳ್ಳಲು ಸಹಕಾರಿಯಾಯಿತು. ದುಡಿಯುವ ವರ್ಗದ ನೇತಾರರಾಗಿದ್ದ ಅವರ ಜನಪರ ಕಾಳಜಿ, ಸಂವಿಧಾನ ಆಶಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುರಿತು ಮಾತನಾಡುತ್ತಿದ್ದರು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಎಸ್.ರುದ್ರಾರಾಧ್ಯ ಮಾತನಾಡಿ, ಮಾರ್ಕ್ ವಾದಿ ತತ್ತ್ವದ ಗಾರುಡಿಗರೆಂಬ ಕರೆಯಲ್ಪಟ್ಟ ಕಾಂಮ್ರೇಡ್ ಸೀತಾರಾಮ್ ಯಚೂರಿ ಅವರು ಶೋಷಿತ ಸಮುದಾಯವನ್ನು ಮೇಲೆತ್ತುವುದು ಮುಖ್ಯ ಉದ್ದೇಶವೆಂದು ತಿಳಿದಿದ್ದರು. ಕೋಮುವಾದ ಮತ್ತು ಮೂಲಭೂತವಾದಿಗಳ ವಿರುದ್ಧ ಜನರನ್ನು ಎಚ್ಚಿಸುವುದರಲ್ಲಿ ಸದಾ ನಿರಂತರಾಗಿದ್ದರು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೋಮುವಾದಿ ಪಕ್ಷಗಳ ವಿರುದ್ದ ಅನ್ಯ ಪಕ್ಷಗಳನ್ನು ಒಗ್ಗೂಡಿಸಿದರು. ವಿದ್ಯಾರ್ಥಿ ಚಳವಳಿಯ ಇತಿಹಾಸವನ್ನು ಭಾರತದಲ್ಲಿ ಚರ್ಚಿಸಿದಾಗಲೆಲ್ಲಾ ಕಾಂಮ್ರೇಡ್ ಸೀತಾರಾಮ್ ಯೆಚೂರಿಯವರ ಕೊಡುಗೆಯನ್ನು ಯಾರು ಮರೆಯುವುದಿಲ್ಲ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಭಾ ಬೆಳವಂಗಲ ಮಾತನಾಡಿ, ಇಂಡಿಯಾ ಒಕ್ಕೂಟವನ್ನು ರಚನೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ಕಾಂಮ್ರೇಡ್ ಸೀತಾರಾಮ್ ಯಚೂರಿ ವಹಿಸಿದ್ದರು. ಜನಪರವಾಗಿ ಯೋಚಿಸುವ ರಾಜಕಾರಣಿಯಾಗಿ ದಶಕಗಳ ಕಾಲ ವಿದ್ಯಾರ್ಥಿಗಳನ್ನು ಪ್ರಭಾವಿಸಿದ್ದರು. ವಿದ್ಯಾರ್ಥಿಗಳು ಮತ್ತು ಯುವಜನತೆ ಕೋಮುವಾದಕ್ಕೆ ಬಲಿಯಾಗುವುದನ್ನು ತಡೆಯುವುದು ಯಚೂರಿ ಅವರ ತತ್ತ್ವ ಮತ್ತು ಸಿದ್ದಾಂತಗಳಿಗೆ ನಾವು ನೀಡುವ ಮನ್ನಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಹೊನ್ನಾಘಟ್ಟ ಮಹೇಶ್, ಕನ್ನಡ ಪಕ್ಷದ ಮುಖಂಡರುಗಳಾದ ಸಂಜೀವನಾಯಕ್, ಡಿ.ಪಿ.ಆಂಜನೇಯ, ಮುನಿಪಾಪಣ್ಣ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಉಪನ್ಯಾಸಕ ಸತೀಶ್, ಕರ್ನಾಟಕ ಪ್ರಾಂತ ರೈತ ಸಂಘದ ರಾಮಕೃಷ್ಣಯ್ಯ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ತಾಲ್ಲೂಕು ಸಮಿತಿ ಸದಸ್ಯ ರೇಣುಕಾರಾಧ್ಯ, ಬಿ.ಆರ್.ರಮೇಶ್, ವಕೀಲ ಸಂಜೀವ್ಪ, ದಲಿತ ಸಂಘಟನೆ ಮುಖಂಡರಾದ ರಾಜುಸಣ್ಣಕ್ಕಿ, ಗೂಳ್ಯ ಹನುಮಣ್ಣ, ಡಿವೈಎಫ್ಐ ಸಂಘಟನೆಯ ನಟರಾಜು, ರಘು ಮುಂತಾದವರು ಭಾಗವಹಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….