ಧಾರವಾಡ; ಹೆಚ್ಚುತ್ತಿರುವ ಸೈಬರ್ ಅಪರಾಧಗಳ (cyber crime) ತಡೆಗಟ್ಟಲು ಈಗಾಗಲೇ ಅಸ್ತಿತ್ವದಲ್ಲಿರುವ ಸೆನ್ ಠಾಣೆ (ಅಇಓ, ಸೈಬರ್ ಆರ್ಥಿಕ ಹಾಗೂ ನಾರ್ಕೊಟಿಕ್ಸ) ಠಾಣೆಗಳಿಗೆ ಎಸ್.ಪಿ.ರ್ಯಾಂಕನ ಅಧಿಕಾರಿಗಳನ್ನು ನೇಮಿಸಲಾಗುವುದೆಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ರಾಷ್ಟ್ರೀಯ ವಿಧಿ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗಗಳಿಗೆ ಹಾಗೂ ಪ್ರಯೋಗಾಲಯಗಳಿಗೆ ಭೇಟಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳು (cyber crime) ಎಲ್ಲೆಡೆ ಯಾವುದೇ ಅಡೆತಡೆಗಳಿಲ್ಲದೇ ರಾಜ್ಯ, ದೇಶ, ವಿದೇಶದಾದ್ಯಂತ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಆಧುನಿಕ ಅಪರಾಧ ತನಿಖೆಗಳಿಗೆ ತಕ್ಕಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಯಾವುದೇ ಸೈಬರ್ ಅಪರಾಧವಾದರೆ ಹೊಸ ಕಾನೂನುಗಳನ್ವಯ ತನಿಖೆ ನಡೆಸಬೇಕಾಗುತ್ತದೆ ಎಂದರು.
ಪ್ರತಿ ಜಿಲ್ಲೆಗೊಂದರಂತೆ ರಾಜ್ಯದಲ್ಲಿ ಒಟ್ಟು 43 ಸೆನ್ ಪೊಲೀಸ್ ಠಾಣೆಗಳಿದ್ದು, ಸದ್ಯ ಡಿವೈಎಸ್ಪಿ ಅಧಿಕಾರಿಗಳು ಇರುತ್ತಾರೆ. ಮುಂದಿನ ದಿನಗಳಲ್ಲಿ ಎಸ್.ಪಿ ರ್ಯಾಂಕ್ ಅಧಿಕಾರಿಗಳನ್ನು ನೇಮಿಸಲಾಗುವುದೆಂದು ತಿಳಿಸಿದರು.
ಸೆನ್ ಠಾಣೆಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ವಿಶೇಷ ರೀತಿಯ ತರಬೇತಿಗಳನ್ನು ರೂಪಿಸಲಾಗುವುದು. ಈ ಹಿನ್ನಲೆಯಲ್ಲಿ ವಿಧಿ ವಿಜ್ಞಾನ ಸಂಸ್ಥೆಯು ರಾಜ್ಯದ ಪೊಲೀಸ್ ಇಲಾಖೆಗೆ ಹೆಚ್ಚು ಉಪಯೋಗವಾಗಲಿದೆ ಎಂದರು.
ದಿನೇ ದಿನೇ ಅಪರಾಧಗಳ ರೂಪರೇಷೆ ಬದಲಾಗುತ್ತಿದೆ. ತನಿಖೆಯ ಮಾರ್ಗಗಳು ಸಹ ಬದಲಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಹಿನ್ನಲೆಯಲ್ಲಿ ಗುಪ್ತಚರ ವಿಭಾಗದಲ್ಲಿ ಪ್ರತ್ಯೇಕ ತರಬೇತಿ ನೀಡಿದಂತೆ ಸೆನ್ ಠಾಣೆ ಸಿಬ್ಬಂದಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದೆಂದು ಸಚಿವರು ತಿಳಿಸಿದರು.
ಸೈಬರ್ ಕ್ರೈಂಗಳಿಗೆ ಯಾವುದೇ ಅಡೆತಡೆ ಇಲ್ಲದೇ ವಿಶ್ವವ್ಯಾಪಿಯಾಗಿವೆ. ಗುಜರಾತನಲ್ಲಿ ಸೈಬರ್ ವಿಶ್ವ ವಿದ್ಯಾಲಯ ನಿರ್ಮಿಸಲಾಗಿದ್ದು ವಿವಿಧ ದೇಶಗಳಿಂದ ಬಂದು ತರಬೇತಿ ಪಡೆಯುತ್ತಿದ್ದಾರೆ. ಇದರ ಭಾಗವಾಗಿ ಧಾರವಾಡದಲ್ಲಿ ವಿಧಿ ವಿಜ್ಞಾನ ಸಂಸ್ಥೆ ಸ್ಥಾಪಿಸಲಾಗಿದ್ದು ರಾಜ್ಯದ ಪೊಲೀಸ್ ಇಲಾಖೆಗೆ ಆಧುನಿಕ ವಿಧಿ ವಿಜ್ಞಾನವು ಅತೀ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆಯೆಂದರು.
ಡ್ರಗ್ಸ ವಿರುದ್ಧ ಸಮರ: ರಾಜ್ಯ ಸರಕಾರವು ಡ್ರಗ್ಸ ವಿರುದ್ಧ ಸಮರ ಸಾರಿದ್ದು ಸ್ವತಃ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಕಳೆದೊಂದು ವರ್ಷದಲ್ಲಿ 150 ಕೋಟಿ ರೂ. ಡ್ರಗ್ಸ ಬರುತ್ತಿದ್ದು ಸಾಕಷ್ಟು ಎಚ್ಚರದ ಕ್ರಮಗಳನ್ನು ವಹಿಸಲಾಗುತ್ತಿದೆ. ಈಗಾಗಲೇ ಹೈಡ್ರೊ ಗಾಂಜಾ ಎಲ್ಲೆಂದರಲ್ಲಿ ನಾಲ್ಕು ಕೋಣೆಗಳಲ್ಲಿ ಬೆಳೆಯಲಾಗುತ್ತಿದ್ದು ಇದನ್ನು ಕಂಡು ಹಿಡಿಯುವುದು ಸವಾಲಾಗಿದೆಯೆಂದರು.
ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ವಿದೇಶಿಗರು ವಾಸಿಸುತ್ತಿದ್ದು ಆಫ್ರಿಕಾ ಪ್ರಜೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಕಳೆದೊಂದು ವರ್ಷದಲ್ಲಿ ಡ್ರಗ್ಸ್ ಧಂದೆಯಲ್ಲಿ ತೊಡಗಿದ ನೂರಾರು ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ವಾಪಸ್ ಕಳಸಲಾಗಿದೆಂದು ತಿಳಿಸಿದರು.
ಇದನ್ನೂ ಓದಿ; ಪಾಕಿಗಳು ರಾಜ್ಯಕ್ಕೆ ಬರಲು ಕೇಂದ್ರದ ವೈಫಲ್ಯ ಕಾರಣ: ಡಾ.ಜಿ.ಪರಮೇಶ್ವರ್
ನಂತರ ವಿಧಿ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಈ ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ವಿಫುಲ ಅವಕಾಶಗಳಿವೆ ಸೈಬರ್ ಫಾರೆನ್ಸಿಕ್ಗಳು, ಸೈಬರ್ ಕಮಾಂಡೋಗಳು, ಸೈಬರ್ ಎಕ್ಸಪರ್ಟಗಳು ತಯಾರಿ ಮಾಡುವಲ್ಲಿ ವಿಧಿ ವಿಜ್ಞಾನ ಸಂಸ್ಥೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನಕ್ಕನುಗುಣವಾಗಿ ಅಪರಾಧ ಹಾಗೂ ಅಪರಾಧಿಗಳ ಚಟುವಟಿಕೆಗಳನ್ನು ಮೊದಲೇ ವಿಶ್ಲೇಷಿಸಲು ಸರಿಯಾದ ಉಪಕರಣಗಳ ಜೊತೆ ಪರಿಣಿತರು ಸಹ ಇರಲೇಬೇಕು. ಭಾರತೀಯ 3 ಹೊಸ ಕಾನೂನುಗಳ ಬೇಡಿಕೆಗೆ ಅನುಗುಣವಾಗಿ ಪ್ರಕರಣಗಳನ್ನು ತನಿಖೆ ಮಾಡುವಲ್ಲಿ ಅನುಕೂಲವಾಗುತ್ತದೆ. ಸೈಬರ್ ಪರಿಣಿತರರು ನೀಡುವ ವರದಿ ಹಾಗೂ ದಾಖಲೆಗಳು ಹೊಸ ಕಾನೂನಿನಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.
ಡಿಜಿಟಲ್ ವಿಧಿ ವಿಜ್ಞಾನ, ಜೌಷಧಿ ವಿಧಿ ವಿಜ್ಞಾನ, ಬಯೋಕೆಮಿಸ್ಟ್ರಿ ವಿಧಿ ವಿಜ್ಞಾನ, ಸೈಬರ್ ಸೆಕ್ಯೂರಿಟಿ ಹಾಗೂ ಪರಿಸರ ವಿಧಿ ವಿಜ್ಞಾನಗಳನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ ಘಾಟೆ ತಿಳಿಸಿದರು.
ಪ್ರಯೋಗಾಲಯ ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಚಿವರು ವೀಕ್ಷಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಬೆಳಗಾವಿ ವಿಭಾಗದ ಐಜಿಪಿ ವಿಕಾಸಕುಮಾರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇದ್ದರು.